ADVERTISEMENT

ಸಂಸ್ಕೃತ ಕಾಲೇಜುಗಳಿಗೆ ಧನ ಲಾಭವಿಲ್ಲ: ಮಲ್ಲೇಪುರಂ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2012, 7:55 IST
Last Updated 13 ಆಗಸ್ಟ್ 2012, 7:55 IST

ಮೈಸೂರು: `ಸಂಸ್ಕೃತ ಕಾಲೇಜು ನಡೆಸುವ ಸಂಸ್ಥೆಗಳಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ಕೋರ್ಸ್‌ಗಳಂತೆ ಧನ ಲಾಭವಿಲ್ಲ~ ಎಂದು ಸಂಸ್ಕೃತ ವಿಶ್ವವಿದ್ಯಾನಿಲಯ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್ ತಿಳಿಸಿದರು.

ನಗರದ ಶಂಕರ ವಿಲಾಸ ಸಂಸ್ಕೃತ ಪಾಠಶಾಲಾ ಸಮಿತಿ ಅರಮನೆ ಜಪದಕಟ್ಟೆ ವತಿಯಿಂದ ಆರಂಭಿಸಿರುವ ಶಂಕರ ವಿಲಾಸ ಸಂಸ್ಕೃತ ಕಾಲೇಜನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.

`ಸಂಸ್ಕೃತ ಪಾಠಶಾಲೆಗಳನ್ನು ನಡೆಸುವವರು ಧನ ಲಾಭವನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಕೆಲ ಸಂಸ್ಥೆಗಳಲ್ಲಿ ಸಂಸ್ಕೃತ ಶಿಕ್ಷಕರಿಗೆ ವೇತನ ನೀಡಲು ಕಷ್ಟವಿದೆ. ಸಂಸ್ಕೃತ ಜ್ಞಾನ ಪ್ರಸಾರ ಮಾಡಲು ಅನೇಕ ಸಂಸ್ಥೆಗಳು ಶ್ರಮಿಸುತ್ತಿವೆ. ನಿಸ್ವಾರ್ಥ ಸೇವೆ ಮಾಡುತ್ತಿವೆ~ ಎಂದು ಶ್ಲಾಘಿಸಿದರು.

`ಸಂಸ್ಕೃತ ವಿಶ್ವವಿದ್ಯಾನಿಲಯವು ಮೊದಲು 16 ಸರ್ಕಾರಿ ಸಂಸ್ಕೃತ ಶಾಲೆಗಳನ್ನು ಆರಂಭ ಮಾಡಿತು. ಮತ್ತಷ್ಟು ಉತ್ತೇಜನ ನೀಡಲು 2ನೇ ವರ್ಷದಲ್ಲಿ 5 ಸಂಸ್ಕೃತ ಕಾಲೇಜು ಗಳಿಗೆ ಅನುಮೋದನೆ ನೀಡಲಾಯಿತು. ಪ್ರಸಕ್ತ ಸಾಲಿನಲ್ಲಿ 13 ಕಾಲೇಜುಗಳ ಆರಂಭಕ್ಕೆ ಪ್ರಸ್ತಾವನೆ ಬಂದಿದ್ದವು. ಈ ಪೈಕಿ 10 ಕಾಲೇಜುಗಳಿಗೆ ಅನುಮೋದನೆ ನೀಡಲಾಗಿದೆ. ಇದರಲ್ಲಿ ಶಂಕರ ವಿಲಾಸ ಸಂಸ್ಕೃತ ಕಾಲೇಜು ಸಹ ಒಂದು~ ಎಂದು ತಿಳಿಸಿದರು.

`ಜಪದಕಟ್ಟೆ ಮಠವು 1906 ನೇ ಸಾಲಿನಿಂದಲೂ ಸಂಸ್ಕೃತ ಪಾಠಶಾಲೆಯನ್ನು ನಡೆಸುತ್ತಿದೆ. ಇಲ್ಲಿ ಕಲಿತವರು ಸಂಸ್ಕೃತ ಪಂಡಿತರಾಗಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಸಂಸ್ಕೃತವನ್ನು ಪ್ರಸಾರ ಮಾಡುತ್ತಿದ್ದಾರೆ. ಮೊದಲಿಗೆ ಅಲಂಕಾರ ಶಾಸ್ತ್ರ ಮತ್ತು ಶಕ್ತಿ ವಿಶಿಷ್ಟಾದ್ವೈತ ವೇದಾಂತ (ವಿದ್ವಾನ್ ಮಧ್ಯಮ) ಎರಡು ಕೋರ್ಸ್‌ಗಳನ್ನು ಶಂಕರವಿಲಾಸ ಸಂಸ್ಕೃತ ಕಾಲೇಜಿನಲ್ಲಿ ಆರಂಭಿ ಸಲಾಗಿದೆ. ವಿದ್ಯಾರ್ಥಿಗಳು ಆಸಕ್ತಿಯಿಂದ ಕೋರ್ಸ್‌ಗಳಿಗೆ ಸೇರುತ್ತಿದ್ದಾರೆ. ಸಂಸ್ಕೃತ ಕಲಿಸಲು ಜಪದಕಟ್ಟೆ ಮಠ ಮಾಡುತ್ತಿರುವ ಸೇವೆ ಶ್ಲಾಘನೀಯ~ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅರಮನೆ ಜಪದ ಕಟ್ಟೆ ಮಠದ ಮುಮ್ಮಡಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಬೆಂಗಳೂರಿನ ಸಂಸ್ಕೃತ ವಿಶ್ವವಿದ್ಯಾ ನಿಲಯ ಸಂಸ್ಕೃತ ಶಿಕ್ಷಣ ನಿರ್ದೇಶನಾ ಲಯದ ನಿರ್ದೇಶಕ ಡಾ.ಶ್ರೀನಿವಾಸ ವರಖೇಡಿ, ಸಿಂಡಿಕೇಟ್ ಸದಸ್ಯರಾದ ಪ್ರೊ.ಅಶ್ವ ತ್ಥಮ್ಮ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸಂಸ್ಕೃತ ವಿಭಾಗದ ಅಧ್ಯಕ್ಷ ಡಾ.ಎನ್. ರಾಧಾಕೃಷ್ಣಭಟ್, ಶಂಕರ ವಿಲಾಸ ಸಂಸ್ಕೃತ ಕಾಲೇಜಿನ ಪ್ರಾಂಶುಪಾಲ ವಿದ್ವಾನ್ ಶ್ರೀನಿವಾಸಮೂರ್ತಿ, ಜ್ಞಾನೇಶ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.