ADVERTISEMENT

ಸಕ್ಕರೆ ಕಾರ್ಖಾನೆ ಪುನರಾರಂಭಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 9 ಜೂನ್ 2017, 10:10 IST
Last Updated 9 ಜೂನ್ 2017, 10:10 IST
ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಎದುರು ಸಿಪಿಎಂ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು
ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಎದುರು ಸಿಪಿಎಂ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು   

ಮೈಸೂರು: ಸೀತಾರಾಂ ಯೆಚೂರಿ ಮೇಲಿನ ಹಲ್ಲೆ ಖಂಡಿಸಿ ಸಿಪಿಎಂ, ಶ್ರೀರಾಮ ಸಕ್ಕರೆ ಕಾರ್ಖಾನೆ ಪುನರಾ ರಂಭಕ್ಕೆ ಆಗ್ರಹಿಸಿ ಜೆಡಿಎಸ್‌ ಹಾಗೂ ಗೋಲಿಬಾರ್‌ ನಡೆಸಿದ ಮಧ್ಯಪ್ರದೇಶ ಸರ್ಕಾರದ ಕ್ರಮವನ್ನು ವಿರೋಧಿಸಿ ಕಬ್ಬು ಬೆಳೆಗಾರರು ಗುರುವಾರ ನಗರದಲ್ಲಿ ಸರಣಿ ಪ್ರತಿಭಟನೆ ನಡೆಸಿದರು.

ನ್ಯಾಯಾಲಯದ ಮುಂಭಾಗದ ಗಾಂಧಿ ಪುತ್ಥಳಿ ಬಳಿ ಜಮಾಯಿಸಿದ ಜೆಡಿಎಸ್‌ ಯುವ ಘಟಕದ ಕಾರ್ಯ ಕರ್ತರು, ಕೆ.ಆರ್‌.ನಗರ ತಾಲ್ಲೂಕಿನ ಚುಂಚನಕಟ್ಟೆಯ ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆ ಪುನರಾರಂಭಿಸು ವಂತೆ ಆಗ್ರಹಿಸಿದರು.

‘ಹಲವು ವರ್ಷಗಳಿಂದ ಸ್ಥಗಿತ ಗೊಂಡಿರುವ ಕಾರ್ಖಾನೆ ಪುನರಾ ರಂಭಕ್ಕೆ ರಾಜ್ಯ ಸರ್ಕಾರ ಅನುದಾನ ನೀಡುತ್ತಿಲ್ಲ. ಕಾರ್ಮಿಕರ ಬಾಕಿ ವೇತನ ಪಾವತಿಸದೆ ಇರುವುದು ಇದಕ್ಕೆ ತೊಡಕಾಗಿ ಪರಿಣಮಿಸಿದೆ. ಶಾಸಕ ಸಾ.ರಾ.ಮಹೇಶ್‌ ನಡೆಸುತ್ತಿರುವ ಹೋರಾಟಕ್ಕೆ ಸರ್ಕಾರ ಬೆಲೆ ನೀಡುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಕಾರ್ಖಾನೆ ಮುಚ್ಚಿದ್ದರಿಂದ ಈ ಭಾಗದ ಕಬ್ಬು ಬೆಳೆಗಾರರಿಗೆ ತೊಂದರೆ ಯಾಗಿದೆ. ಅನೇಕರು ಕಬ್ಬು ಬೆಳೆಯಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣ ವಾಗಿದೆ. ಅನುದಾನ ಬಿಡುಗಡೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿನಾಕಾರಣ ವಿಳಂಬ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ಎಸ್‌.ಲೋಕೇಶ್‌, ಪ್ರಧಾನ ಕಾರ್ಯದರ್ಶಿ ಆರ್‌.ಮುದ್ದುರಾಜ್‌, ಗುರುದತ್ತ ಇದ್ದರು.

ಚಳವಳಿ ದಮನ; ಆಕ್ರೋಶ: ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಸಿಪಿಎಂ ಕಾರ್ಯಕರ್ತರು ಸಂಘ ಪರಿವಾರ ಹಾಗೂ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ‘ಜೂನ್‌ 6 ಮತ್ತು 7ರಂದು ಪಕ್ಷದ ಪಾಲಿಟ್‌ ಬ್ಯೂರೊ ಸಭೆ ನಡೆದಿತ್ತು. ಈ ಮಾಹಿತಿಯನ್ನು ಮಾಧ್ಯಮಗಳಿಗೆ ನೀಡಲು ದೆಹಲಿಯ ಎಜಿಕೆ ಭವನದಲ್ಲಿ ಸುದ್ದಿಗೋಷ್ಠಿ ಕರೆಯಲಾಗಿತ್ತು. ಇಲ್ಲಿಗೆ ನುಗ್ಗಿದ ಆರ್‌ಎಸ್‌ಎಸ್‌ ಕಾರ್ಯಕರ್ತರು ಯೆಚೂರಿ ಮೇಲೆ ಹಲ್ಲೆಗೆ ಮುಂದಾದರು. ಇಂತಹ ದಾಳಿಯಿಂದ ಭೀತಿ ಸೃಷ್ಟಿಸಲು ಸಂಘ ಪರಿವಾರ ಯತ್ನಿಸುತ್ತಿದೆ’ ಎಂದು ಆರೋಪಿಸಿದರು.

‘ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಜಾತ್ಯತೀತ ಪಕ್ಷ, ಸಂಘಟನೆ ಮತ್ತು ವ್ಯಕ್ತಿಗಳ ಮೇಲೆ ದಾಳಿಗಳು ನಡೆಯು ತ್ತಿವೆ. ಎಡಪಕ್ಷಗಳ ಕಾರ್ಯಕರ್ತರನ್ನು ಕೊಲೆ ಮಾಡಲಾಗುತ್ತಿದೆ. ಇದು ಸರ್ವಾಧಿಕಾರಿ ಸರ್ಕಾರದ ನಡೆಯನ್ನು ಸೂಚಿಸುತ್ತದೆ. ಸೈದ್ಧಾಂತಿಕ ಭಿನ್ನಾಭಿ ಪ್ರಾಯ ಒಪ್ಪದ ಸಂಘ ಪರಿವಾರ ಇಂತಹ ದಾಳಿಗೆ ಕಮ್ಮಕ್ಕು ನೀಡುತ್ತಿದೆ. ಜನಪರ ಚಳವಳಿಗಳನ್ನು ಹೀಗೆ ದಮನ ಮಾಡಲು ಸಾಧ್ಯವಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಕೆ.ಬಸವರಾಜು ಇದ್ದರು. ಗೋಲಿಬಾರ್‌ ಖಂಡಿಸಿ ಪ್ರತಿಭಟನೆ: ಸಾಲ ಮನ್ನಾ ಹಾಗೂ ಬೆಂಬಲ ಬೆಲೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಗೋಲಿಬಾರ್ ನಡೆಸಿದ ಕ್ರಮವನ್ನು ಖಂಡಿಸಿ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಪ್ರತಿಕೃತಿ ದಹಿಸಿ ರಾಜ್ಯ ಕಬ್ಬು ಬೆಳೆಗಾರರು ಪ್ರತಿಭಟನೆ ನಡೆಸಿದರು.

ಗೌನ್‌ಹೌಸ್‌ ಬಳಿ ಜಮಾಯಿಸಿದ ರೈತರು, ಸಂಸ್ಕೃತ ಪಾಠಶಾಲೆಯ ವೃತ್ತದವರೆಗೆ ಮೆರವಣಿಗೆ ನಡೆಸಿದರು. ಚೌಹಾಣ್‌ ಸರ್ಕಾರವನ್ನು ಕೂಡಲೇ ವಜಾ ಮಾಡುವಂತೆ ಆಗ್ರಹಿಸಿದರು. ‘ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನೀಡುವುದಾಗಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬರುವ ಮುನ್ನ ಭರವಸೆ ನೀಡಿದ್ದರು. ಪ್ರಧಾನಿಯಾಗಿ ಮೂರು ವರ್ಷಗಳಾದರೂ ರೈತರ ಸಮಸ್ಯೆಗಳಿಗೆ ಸ್ಪಂದಿಸಿಲ್ಲ.

ಹೋರಾಟ ನಡೆಸುತ್ತಿದ್ದ ರೈತರನ್ನು ಬೆದರಿಸಲು ಗೋಲಿಬಾರ್‌ ಮಾಡಲಾಗಿದೆ’ ಎಂದು ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್‌ ದೂರಿದರು. ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್‌, ಮುಖಂಡರಾದ ಸಿ.ಕೆ.ರವೀಂದ್ರ, ಕೃಷ್ಣೇಗೌಡ, ಕಿರಗಸೂರು ಶಂಕರ್‌ ಇದ್ದರು.

ವಸತಿನಿಲಯ ನೌಕರರ ಮುಷ್ಕರ ವಾಪಸ್‌
ಮೈಸೂರು: ನೌಕರರನ್ನು ವಜಾ ಗೊಳಿಸುವುದಿಲ್ಲ ಎಂದು ಸಮಾಜ ಕಲ್ಯಾಣ ಸಚಿವ ಎಚ್‌. ಆಂಜನೇಯ ಭರವಸೆ ನೀಡಿರು ವುದರಿಂದ ವಸತಿನಿಲಯಗಳ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ಹಿಂಪಡೆದಿದ್ದಾರೆ.

‘ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ನೌಕರರನ್ನು ವಜಾಗೊಳಿಸಿ ನೇರ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಸರ್ಕಾರ ಆದೇಶಿಸಿದ್ದರಿಂದ     ಬೆಂಗಳೂರಿನಲ್ಲಿ ಮುಷ್ಕರ ಆರಂಭಿಸಿದ್ದೆವು. ಕೆಲಸದಿಂದ ತೆಗೆಯುವುದಿಲ್ಲ ಎಂದು ಭರವಸೆ ನೀಡಿರುವುದರಿಂದ ವಾಪಸ್‌ ಪಡೆದಿದ್ದೇವೆ. ಜೂನ್‌ 20ರಂದು ವಿಧಾನಸೌಧ ದಲ್ಲಿ ಸಭೆ ನಡೆಯಲಿದೆ’ ಎಂದು ಕರ್ನಾಟಕ ರಾಜ್ಯ ಸಂಯುಕ್ತ ವಸತಿನಿಲಯ ಕಾರ್ಮಿಕರ ಸಂಘದ ಜಿಲ್ಲಾ ಘಟಕವು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.