ಮೈಸೂರು: ಚುಮುಚುಮು ಚಳಿಯ ಮಧ್ಯೆ ತೀಡುತ್ತಿದ್ದ ಕುಳಿರ್ಗಾಳಿಯಲ್ಲಿ ಸಣ್ಣಗೆ ನಡುಗುತ್ತಾ ಇಲ್ಲಿನ ಸಿದ್ಧಲಿಂಗ ಪುರದಲ್ಲಿ ಜನಸಂದಣಿ ಸೇರತೊಡಗಿತು. ನಸುಕಿನ ಇಬ್ಬನಿಯ ಮಧ್ಯೆ ಇರುವೆ ಸಾಲಿನಂತೆ ನಿಂತ ಭಕ್ತರು, ಚಂಪಕ ಷಷ್ಠಿ ಪ್ರಯುಕ್ತ ಸುಬ್ರಹ್ಮಣ್ಯಸ್ವಾಮಿ ದೇಗುಲ ದಲ್ಲಿ ತನಿ ಎರೆದು ಭಕ್ತಿಭಾವ ಮೆರೆದರು.
ದೇವಸ್ಥಾನವನ್ನು ತಳಿರು ತೋರಣ ಗಳಿಂದ ಸಿಂಗರಿಸಲಾಗಿತ್ತು. ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಿದ್ದರಿಂದ ಭಕ್ತರ ಓಡಾಟಕ್ಕೆ ತೊಂದರೆಯಾಗಲಿಲ್ಲ. ದೇವಸ್ಥಾನದ ಸುತ್ತ ಕಂಡು ಬಂದ ಹುತ್ತಗಳ ಸುತ್ತ ನೆರೆದ ಭಕ್ತರು, ತಾವು ತಂದಿದ್ದ ಹಾಲು, ಬೆಣ್ಣೆಯನ್ನು ಹುತ್ತಕ್ಕೆ ಸುರಿದರು. ಬಾಳೆಹಣ್ಣು, ಎಲೆ ಅಡಿಕೆ ಇಟ್ಟು ಗಂಧದಕಡ್ಡಿ, ಕರ್ಪೂರದಾರತಿ ಬೆಳಗಿದರು.
ಕೆಲವರು ತಾವು ತಂದಿದ್ದ ಪ್ರಸಾದ ವನ್ನು ಇತರರಿಗೆ ಹಂಚಿದರು. ನಂತರ, ದೇವಸ್ಥಾನದ ಪ್ರವೇಶಕ್ಕೆ ಸಾಲುಗಟ್ಟಿ ನಿಂತರು. ಹೆದ್ದಾರಿಯ ಒಂದು ಭಾಗವನ್ನು ವ್ಯಾಪಾರಿಗಳು ಸಂಪೂರ್ಣವಾಗಿ ಆಕ್ರಮಿಸಿಕೊಂಡಿದ್ದರು. ಪೂಜೆಗೆ ಬೇಕಾದ ಪರಿಕರಗಳ ಒಡ್ಡೋಲಗ ಒಂದು ಕಡೆಯಾದರೆ ಮತ್ತೊಂದೆಡೆ ಗೃಹೋಪಯೋಗಿ ಸರಕುಗಳ ಮಾರಾಟ ನಡೆದಿತ್ತು.
ಸೂರ್ಯ ನೆತ್ತಿಗೇರುವ ಹೊತ್ತಿಗೆ ಜನಸಂದಣಿ ಕೊಂಚ ತಿಳಿಯಾಯಿತು. ಇದಕ್ಕೂ ಮುನ್ನ ಸುಬ್ರಹ್ಮಣ್ಯೇಶ್ವರ ಸ್ವಾಮಿಯ ರಥೋತ್ಸವ ವಿಜೃಂಭಣೆಯಿಂದ ನಡೆಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.