ADVERTISEMENT

ಸುರಕ್ಷತೆ: ರೈಲು ಪ್ರಯಾಣಿಕರಿಗೆ ಅರಿವು

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2012, 7:40 IST
Last Updated 18 ಆಗಸ್ಟ್ 2012, 7:40 IST

ಮೈಸೂರು: ರೈಲು ಪ್ರಯಾಣಿಕರ ಸುರಕ್ಷತೆಯ ಹಿನ್ನೆಲೆಯಲ್ಲಿ ನೈರುತ್ಯ ರೈಲ್ವೆಯ ಮೈಸೂರು ವಿಭಾಗವು ಮೈಸೂರಿನಿಂದ ಹೊರಡುವ ಎಲ್ಲ ರೈಲುಗಳಲ್ಲಿ ಪ್ರಯಾಣಿಕರಿಗೆ ಕರಪತ್ರ ಹಂಚುವ ಮೂಲಕ ಅರಿವು ಮೂಡಿಸಲಾಗುತ್ತಿದೆ ಎಂದು ನೈರುತ್ಯ ರೈಲ್ವೆ ಮೈಸೂರು ವಿಭಾಗದ ಹಿರಿಯ ವಾಣಿಜ್ಯ ವ್ಯವಸ್ಥಾಪಕ ಡಾ. ಅನೂಪ್ ದಯಾನಂದ್‌ಸಾಧು ತಿಳಿಸಿದರು.

ಶುಕ್ರವಾರ ಕೇಂದ್ರ ರೈಲ್ವೆ ನಿಲ್ದಾಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಜುಲೈ ತಿಂಗಳಲ್ಲಿ ಮದ್ದೂರಿನ ಬಳಿ ದುಷ್ಕರ್ಮಿಗಳು ಚಲಿಸುತ್ತಿದ್ದ ರೈಲಿನಿಂದ ಯುವತಿಯನ್ನು ನೂಕಿ ಕೊಲೆ ಮಾಡಲೆತ್ನಿಸಿದ ಪ್ರಕರಣದ ಹಿನ್ನೆಲೆಯಲ್ಲಿ ಪ್ರಯಾಣಿ ಕರಿಗೆ ಹೆಚ್ಚಿನ ಸುರಕ್ಷತೆ ನೀಡುವ ಸಂಬಂಧ ಈ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ~ ಎಂದರು.

`ರೈಲುಗಳಲ್ಲಿ ಕರಪತ್ರ ಹಂಚುವ ಜೊತೆಗೆ ಎಲ್ಲ ಬೋಗಿಗಳಲ್ಲಿಯೂ ಆರ್‌ಪಿಎಫ್ ನಿಯಂತ್ರಣ ಕೊಠಡಿಯ ದೂರವಾಣಿ ಸಂಖ್ಯೆ ಇರುವ ಹಾಗೂ ಪ್ರಯಾಣಿಕರು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತಾದ ಸ್ಟಿಕರ್‌ಗಳನ್ನು ಅಂಟಿಸ ಲಾಗುವುದು. ಪ್ರತಿ ಬೋಗಿಯಲ್ಲಿ ಸುಮಾರು 10 ಕಡೆಗಳಲ್ಲಿ ಈ ಸ್ಟಿಕರ್‌ಗಳನ್ನು ಅಂಟಿಸಲಾಗುವುದು. ಪ್ರಯಾಣಿಕರಿಗೆ ಯಾವುದೇ ತೊಂದರೆ ಆದರೆ ಸ್ಟಿಕರ್‌ನಲ್ಲಿ ಅಂಟಿಸಲಾಗಿರುವ ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು. ಕೂಡಲೇ ರೈಲ್ವೆ ಭದ್ರತಾ ಸಿಬ್ಬಂದಿ ಗಳು ಕ್ರಮ ತೆಗೆದುಕೊಳ್ಳಲಿದ್ದಾರೆ~ ಎಂದು ಹೇಳಿದರು. 

ಮೈಸೂರು ರೈಲು ನಿಲ್ದಾಣದಿಂದ ಪ್ರತಿನಿತ್ಯ ಸುಮಾರು 20 ಸಾವಿರದಿಂದ 25 ಸಾವಿರ ಪ್ರಯಾಣಿಕರು ಸಂಚರಿಸುತ್ತಾರೆ. ಪ್ರಯಾಣಿಕರ ಸುರಕ್ಷತೆಗಾಗಿ ರೈಲ್ವೆ ಭದ್ರತಾ ದಳ (ಆರ್‌ಪಿಎಫ್), ಸರ್ಕಾರಿ ರೈಲ್ವೆ ಪೊಲೀಸರು (ಜೆಆರ್‌ಪಿ) ಮತ್ತು ರಾಜ್ಯ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದರು.

ಸಿಎಫ್‌ಟಿಆರ್‌ಐ ಬಳಿಯ ಪ್ರವೇಶ ದ್ವಾರ ಸೇರಿದಂತೆ ಮೈಸೂರಿನ ರೈಲ್ವೆ ಕೇಂದ್ರದ ಮೂರು ಪ್ರವೇಶ ದ್ವಾರಗಳಲ್ಲಿ ರೈಲ್ವೆ ಭದ್ರತಾ ಸಿಬ್ಬಂದಿಯನ್ನು ಹಾಕಲಾಗಿದ್ದು, ಇವರು ಅನುಮಾನಾಸ್ಪದ ವಸ್ತುಗಳ ಮೇಲೆ ನಿಗಾ ಇಡಲಾಗುವುದು ಮತ್ತು ಅನುಮಾನಾಸ್ಪದ ವ್ಯಕ್ತಿಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುವುದು.

ರೈಲ್ವೆ ನಿಲ್ದಾಣದ ಮೂರು ಕಡೆಗಳಲ್ಲಿ `ಡೋರ್ ಮೆಟಲ್ ಡಿಟೆಕ್ಟರ್~ ಅನ್ನು ಅಳವಡಿಸಲಾಗಿದೆ. ರೈಲ್ವೆ ಪ್ಲಾಟ್‌ಫಾರ್ಮ್‌ಗಳಲ್ಲಿ 18 ಕಡೆಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ದಿನದ 24 ಗಂಟೆಯೂ ಅನುಮಾನಾಸ್ಪದರ ಮೇಲೆ ನಿಗಾ ವಹಿಸಲಾಗುವುದು ಎಂದರು.

ನೈರುತ್ಯ ರೈಲ್ವೆ ಮೈಸೂರು ವಿಭಾಗೀಯ ರೈಲ್ವೆ ಭದ್ರತಾ ಆಯುಕ್ತ ಮೋಹನ್‌ದಾಸ್ ಮಾತನಾಡಿ, ರೈಲು ಪ್ರಯಾಣಿಕರ ಸುರಕ್ಷತೆಗೆ ರೈಲು ಮಾರ್ಗದ ಎಲ್ಲ ನಿಲ್ದಾಣಗಳಲ್ಲಿ ಭದ್ರತಾ ಸಿಬ್ಬಂದಿಗಳನ್ನು ಹಾಕಲಾಗಿದೆ. ಪ್ರತಿ ರೈಲಿನಲ್ಲೂ 3-4 ಮಂದಿ ಭದ್ರತಾ ಸಿಬ್ಬಂದಿಗಳು ಕಾರ್ಯನಿರ್ವಹಿಸಲಿದ್ದು, ಪ್ರಯಾಣಿಕರಿಗೆ ತೊಂದರೆ ಆದರೆ  ಆರ್‌ಪಿಎಫ್ ನಿಯಂತ್ರಣ ಕೊಠಡಿ- 0821- 2420216, 2427222 ಸಂಪರ್ಕಿಸಬಹುದು ಎಂದರು.

ಅರಿವು ಕಾರ್ಯಕ್ರಮ: ಪತ್ರಿಕಾಗೋಷ್ಠಿಗೂ ಮುನ್ನ ಬೆಂಗಳೂರಿಗೆ ಹೋಗುವ ರೈಲಿನಲ್ಲಿ ರೈಲ್ವೆ ಅಧಿಕಾರಿಗಳು, ಸಿಬ್ಬಂದಿಗಳು ಪ್ರಯಾಣಿಕರಿಗೆ ಕರಪತ್ರಗಳನ್ನು ಹಂಚುವ ಮೂಲಕ ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.