ADVERTISEMENT

ಸೇವೆ ಕಾಯಂಗೆ ಗ್ರಾಮ ಸಹಾಯಕರ ಆಗ್ರಹ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2012, 9:40 IST
Last Updated 6 ಡಿಸೆಂಬರ್ 2012, 9:40 IST

ಮೈಸೂರು: ಗ್ರಾಮ ಸಹಾಯಕರನ್ನು ಕಾಯಂ ನೇಮಕಾತಿ ಮಾಡಬೇಕು ಎಂದು ಒತ್ತಾಯಿಸಿ ಜಿಲ್ಲಾ ಕಂದಾಯ ಇಲಾಖೆ ಗ್ರಾಮ ಸಹಾಯಕರ ಸಂಘ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಧರಣಿ ನಡೆಸಿತು.

ರಾಜ್ಯದಲ್ಲಿ ಸುಮಾರು 10,450, ಜಿಲ್ಲೆಯಲ್ಲಿ 466 ಮಂದಿ ಗ್ರಾಮ ಸಹಾಯಕರು ಕಳೆದ 34 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ವಯಸ್ಸು ಆದರೂ ನೌಕರಿಯನ್ನು ಕಾಯಂ ಮಾಡಿಲ್ಲ. ಇದರಿಂದ ಗ್ರಾಮ ಸಹಾಯ ಕರು ಕಂಗಾ ಲಾಗಿದ್ದಾರೆ. ಬೆಲೆ ಏರಿಕೆ ಸಂದರ್ಭದಲ್ಲಿ ಜೀವನ ನಡೆಸುವುದೇ ದುಸ್ತರವಾಗಿದೆ. ಏನಾದರೂ ಅನಾ ಹುತವಾದರೆ ಪರಿಹಾರ ಇಲ್ಲದೆ ದಯ ನೀಯ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ.

ಡಿ ದರ್ಜೆ ನೌಕರರಿಗಿಂತಲೂ ಹೆಚ್ಚು ಕೆಲಸ ಮಾಡುತ್ತಿದ್ದರೂ ಗ್ರಾಮ ಸಹಾಯಕರಿಗೆ ಯಾವುದೇ ರೀತಿಯ ಅನುಕೂಲಗಳು ಇಲ್ಲ. ತಹಶೀಲ್ದಾರ್, ರಾಜಸ್ವ ನಿರೀಕ್ಷಕರು, ಗ್ರಾಮ ಲೆಕ್ಕಿಗರು, ಕಂದಾಯ ಇಲಾಖೆಯ ಕಚೇರಿಯ ಕೆಲಸಗಳನ್ನು ಗ್ರಾಮ ಸಹಾಯಕರು ಹಗಲು ರಾತ್ರಿ ದುಡಿಯುತ್ತಿದ್ದಾರೆ. ಕಂದಾಯ ವಸೂಲಿ, ಜನನ ಮರಣಗಳ ವರದಿ, ಬೆಳೆ ವರದಿ, ಗ್ರಾಮದಲ್ಲಿ ನಡೆಯುವ ಅನಾಹುತಗಳ ವರದಿ, ಚುನಾವಣೆ ವೇಳೆ ಕೆಲಸ, ಬೆಳೆ ವರದಿ ಹೀಗೆ ಕೆಲಸಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.

ಗ್ರಾಮ ಸಹಾಯಕರಿಗೆ ಯಾವುದೇ ರೀತಿಯ ಸರ್ಕಾರಿ ರಜೆಗಳಿಲ್ಲ. ಹಾಗಾಗಿ ಗ್ರಾಮ ಸಹಾಯಕರಿಗೆ ಜೀವ ವಿಮೆ, ಆರೋಗ್ಯ ವಿಮೆ, ವೇತನ ಹೆಚ್ಚಳ ಮಾಡಿ ಕಾಯಂ ಮಾಡಲು ಸರ್ಕಾರ ಶಿಫಾರಸು ಮಾಡಬೇಕು ಎಂದು ಧರಣಿನಿರತರು ಒತ್ತಾಯಿಸಿದರು. ಸಂಘದ ಅಧ್ಯಕ್ಷ ಎಸ್.ಪುಟ್ಟಸ್ವಾಮಿ ಧರಣಿಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.