ಸಾಲಿಗ್ರಾಮ: ಭೋರ್ಗರೆಯುವ ನೀರಿನ ಅಬ್ಬರವಿಲ್ಲ, ಧುಮ್ಮಿಕುವ ಜಲಧಾರೆಯೂ ಇಲ್ಲ. ನವದಂಪತಿಗಳ ದಂಡು ಇತ್ತ ತಲೆ ಹಾಕುತ್ತಿಲ್ಲ. ಆಷಾಢ ಮಾಸದಲ್ಲಿ ಜನಸಾಗರವೂ ಕಾಣಲಿಲ್ಲ.
ಕೆ.ಆರ್.ನಗರ ತಾಲ್ಲೂಕಿನ ಚುಂಚನಕಟ್ಟೆ ಗ್ರಾಮದ ಧನುಷ್ಕೋಟಿ ಮತ್ತು ಸೀತಾಮಡುವಿನಲ್ಲಿ ಈಗ ಕಾಣುತ್ತಿರುವ ಚಿತ್ರಣ. ವರುಣನ ಅವಕೃಪೆಯಿಂದಾಗಿ ಇಲ್ಲಿಯ ಜಲಪಾತದಲ್ಲೆಗ ಸೊಗಸೇ ಇಲ್ಲದಂತಾಗಿದೆ.
ಮುಂಗಾರು ಕೈಕೊಟ್ಟಿರುವುದರಿಂದ ಜೀವನದಿ ಕಾವೇರಿ ಮೈದುಂಬಿ ಹರಿಯುತ್ತಿಲ್ಲ. ಇದರಿಂದ ಚುಂಚನಕಟ್ಟೆ ಗ್ರಾಮದ ಕೋದಂಡ ರಾಮನ ದೇವಾಲಯದ ಪಕ್ಕದಲ್ಲಿ ಇರುವ ಇತಿಹಾಸ ಪ್ರಸಿದ್ಧ ಧನುಷ್ಕೋಟಿ ಮತ್ತು ಸೀತಾಮಡುವಿನಲ್ಲಿ ಧುಮ್ಮಿಕ್ಕುವ ಜಲಪಾತ ಕಾಣುತ್ತಿಲ್ಲ.
ಕೊಡಗಿನಲ್ಲಿ ಹೆಚ್ಚು ಮಳೆಯಾಗುತ್ತಿದ್ದಂತೆ ಆರ್ಭಟಿಸುತ್ತ ಹರಿದು ಬರುವ ಕಾವೇರಿ ಚುಂಚನಕಟ್ಟೆಯಲ್ಲಿ ಇರುವ ಧನುಷ್ಕೋಟಿ ಮತ್ತು ಸೀತಾಮಡುವಿನಲ್ಲಿ ಥಳುಕು ಬಳುಕಿ ನಿಂದ ಪ್ರತಿದಿನ ಸಾವಿರಾರು ಜನರನ್ನು ಮತ್ತು ಪ್ರವಾಸಿಗರನ್ನು ಸೆಳೆಯುತ್ತಿತ್ತು. ಆದರೆ, ಈ ವರ್ಷ ವರುಣನ ಅವಕೃಪೆಯಿಂದ ಧನುಷ್ಕೋಟಿ ಮತ್ತು ಸೀತಾಮಡು ಹಿಂದಿನ ವೈಭವ ಕಳೆದುಕೊಂಡಿದೆ. ಹಿಂಗಾರಿನಲ್ಲಾದರೂ ವರುಣ ಕೃಪೆ ತೋರಿದರೆ ಮತ್ತೆ ಜಲಪಾತದ ವೈಭವ ಮರುಕಳಿಸಬಹುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.