ಪಿರಿಯಾಪಟ್ಟಣ: ‘ತಾಲ್ಲೂಕಿನ ರಸ್ತೆಗಳು ಅಭಿವೃದ್ಧಿಯಾಗಿವೆ ನಿಜ. ಆದರೆ, ಗುಣಮಟ್ಟ ಕಾಪಾಡದ ಶಾಸಕ ಕೆ.ವೆಂಕಟೇಶ್ ಕಮಿಷನ್ ದಂಧೆಯಲ್ಲಿ ತೊಡಗಿದ್ದಾರೆ’ ಎಂದು ಜೆಡಿಎಸ್ ತಾಲ್ಲೂಕು ಘಟಕ ಅಧ್ಯಕ್ಷ ಕೆ.ಮಹದೇವ್ ಆರೋಪಿಸಿದರು. ಪಟ್ಟಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಜೆಡಿಎಸ್ ಮಾದಿಗ ಸಮಾಜದ ಕಾರ್ಯಕರ್ತರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
‘ಗ್ರಾಮೀಣ ಪ್ರದೇಶಗಳಿಗೆ ಮೂಲಸೌಲಭ್ಯ ಕಲ್ಪಿಸುವಲ್ಲಿ ಶಾಸಕ ಕೆ.ವೆಂಕಟೇಶ್ ವಿಫಲವಾಗಿದ್ದಾರೆ. ಚುನಾವಣೆ ಸಮಯದಲ್ಲಿ ಮಾತ್ರ ಅವರಿಗೆ ಮತದಾರರು ನೆನಪಾಗುತ್ತಾರೆ. ಸುಳ್ಳು ಭರವಸೆ ನೀಡುತ್ತಾ ಮತದಾರರ ಓಲೈಕೆಗೆ ಮುಂದಾಗಿದ್ದಾರೆ’ ಎಂದು ಟೀಕಿಸಿದರು.
‘ರಾಜ್ಯದಲ್ಲಿ ಆಡಳಿತ ನಡೆಸಿರುವ ಎಲ್ಲಾ ಸರ್ಕಾರಗಳು ಮಾದಿಗ ಸಮಾಜಕ್ಕೆ ನೀಡಿರುವ ಕೊಡುಗೆ ಶೂನ್ಯ. ಕುಮಾರಸ್ವಾಮಿ ಮುಖ್ಯಮಂತ್ರಿಯಾದಲ್ಲಿ ಸದಾಶಿವ ಆಯೋಗದ ವರದಿ ಅನುಷ್ಟಾನಗೊಳಿಸುವ ಮೂಲಕ ಮೀಸಲಾತಿಯಲ್ಲಿ ಆಗಿರುವ ಅನ್ಯಾಯ ಸರಿಪಡಿಸಲಿದ್ದಾರೆ’ ಎಂದರು.
ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ರಾಮು ಮಾತನಾಡಿ, 'ಕಾಂಗ್ರೆಸ್ ಪಕ್ಷ ದಲಿತರ ನಾಯಕರನ್ನು ಮೂಲೆಗುಂಪು ಮಾಡಿದೆ' ಎಂದು ಆರೋಪಿಸಿದರು.
ಜಿ.ಪಂ ಸದಸ್ಯ ವಿ.ರಾಜೇಂದ್ರ, ಮಾದಿಗ ಸಮಾಜದ ಮುಖಂಡ ಕೃಷ್ಣಮೂರ್ತಿ ಮಾತನಾಡಿದರು. ತಾಲ್ಲೂಕಿನ ವಿವಿಧ ಗ್ರಾಮಗಳ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಜೆಡಿಎಸ್ ಸೇರ್ಪಡೆಗೊಂಡರು.
ಜಿ.ಪಂ ಸದಸ್ಯರಾದ ಕೆ.ಎಸ್.ಮಂಜುನಾಥ್, ಕೆ.ಸಿ.ಜಯಕುಮಾರ್, ತಾ.ಪಂಸದಸ್ಯರಾದ ಆರ್.ಎಸ್.ಮಹದೇವ್, ಮಲ್ಲಿಕಾರ್ಜುನ, ಟಿ.ಈರಯ್ಯ, ಎ.ಟಿ.ರಂಗಸ್ವಾಮಿ, ಮುಖಂಡರಾದ ರಘು, ಹುಚ್ಚಮ್ಮ, ವಿದ್ಯಾಶಂಕರ, ನಾಗೇಂದ್ರ, ಪ್ರೀತಿ ಅರಸ್ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.