ADVERTISEMENT

ಸ್ವಚ್ಛ ನಗರಿಯಲ್ಲಿ ಕಸದ ಗುಡ್ಡೆಗಳು

​ಪ್ರಜಾವಾಣಿ ವಾರ್ತೆ
Published 14 ಜೂನ್ 2017, 9:08 IST
Last Updated 14 ಜೂನ್ 2017, 9:08 IST
ಪೌರಕಾರ್ಮಿಕರ ಮುಷ್ಕರದಿಂದ ದೇವರಾಜ ಮಾರುಕಟ್ಟೆ ಆವರಣದಲ್ಲಿ ವಿಲೇವಾರಿಯಾಗದೆ ಬಿದ್ದಿದ್ದ ಕಸವನ್ನು ಮೇಯರ್ ಎಂ.ಜೆ.ರವಿಕುಮಾರ್ ತೆಗೆದಿದ್ದು ಹೀಗೆ...
ಪೌರಕಾರ್ಮಿಕರ ಮುಷ್ಕರದಿಂದ ದೇವರಾಜ ಮಾರುಕಟ್ಟೆ ಆವರಣದಲ್ಲಿ ವಿಲೇವಾರಿಯಾಗದೆ ಬಿದ್ದಿದ್ದ ಕಸವನ್ನು ಮೇಯರ್ ಎಂ.ಜೆ.ರವಿಕುಮಾರ್ ತೆಗೆದಿದ್ದು ಹೀಗೆ...   

ಮೈಸೂರು: ನಗರದಲ್ಲಿ ಪೌರಕಾರ್ಮಿಕರರು ಮಂಗಳವಾರವೂ ಮುಷ್ಕರದಲ್ಲಿ ತೊಡಗಿದ್ದರಿಂದ ಕಸ ವಿಲೇವಾರಿಯಾಗಲಿಲ್ಲ. ಮುಖ್ಯವಾಗಿ ದೇವರಾಜ ಮಾರುಕಟ್ಟೆ, ವಾಣಿವಿಲಾಸ ಮಾರುಕಟ್ಟೆ, ಮಂಡಿ ಮಾರುಕಟ್ಟೆಗಳು ಹಾಗೂ ಅದರ ಆಸುಪಾಸಿನಲ್ಲಿ ಕಸದ ಗುಡ್ಡೆಗಳೇ ನಿರ್ಮಾಣಗೊಂಡವು. ಬೀಳುತ್ತಿರುವ ಜಿಟಿಜಿಟಿ ಮಳೆಗೆ ಹಲವೆಡೆ ಹಣ್ಣು, ತರಕಾರಿಗಳ ತ್ಯಾಜ್ಯಗಳು ಕೊಳೆಯಲಾರಂಭಿಸಿದ್ದರಿಂದ ದುರ್ನಾತ ಬೀರಲಾರಂಭಿಸಿತು.

ರಾರಾಜಿಸಿದ ಪ್ಲಾಸ್ಟಿಕ್: ಎಪಿಎಂಸಿ ಮಾರುಕಟ್ಟೆಯಲ್ಲಿ ಏಳೆಂಟು ಟನ್‌ ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಂಡು ಬೀಗುತ್ತಿದ್ದ ಪಾಲಿಕೆ ಅಧಿಕಾರಿಗಳ ಬಣ್ಣ ಪೌರಕಾರ್ಮಿಕರ ಮುಷ್ಕರದಿಂದ ಮಂಗಳವಾರ ಬಯಲಾಗಿದೆ. ಶಿವರಾಂಪೇಟೆ, ಸಂತೇಪೇಟೆ, ಸಯ್ಯಾಜಿರಾವ್ ರಸ್ತೆ ಸೇರಿದಂತೆ ಅನೇಕ ಭಾಗಗಳಲ್ಲಿ ಸಂಗ್ರಹಗೊಂಡಿರುವ ಕಸದ ಗುಡ್ಡೆಗಳಲ್ಲಿ ಪ್ಲಾಸ್ಟಿಕ್‌ ಕವರ್‌ಗಳೇ ಹೆಚ್ಚಾಗಿ ಕಂಡು ಬಂದಿವೆ. ನಗರದಲ್ಲಿ ಮೊದಲಿನಷ್ಟೇ ಸಲೀಸಾಗಿ ಪ್ಲಾಸ್ಟಿಕ್‌ ವಸ್ತುಗಳು ಸಿಗುತ್ತಿವೆ ಎಂಬುದನ್ನು ಪೌರಕಾರ್ಮಿಕರ ಮುಷ್ಕರ ಸಾಬೀತುಪಡಿಸಿದವು.

ತುಂಬಿ ತುಳುಕಿದ ಕಸದ ತೊಟ್ಟಿಗಳು: ನಗರದ ಅಲ್ಲಲ್ಲಿ ಇಡಲಾಗಿರುವ ಕಸದ ತೊಟ್ಟಿಗಳು ತುಂಬಿ ತುಳುಕಿದವು. ಇಲ್ಲಿಗೆ ಬೀದಿ ಬದಿ ವ್ಯಾಪಾರಸ್ಥರೇ ಹೆಚ್ಚಾಗಿ ಕಸ ಸುರಿಯುತ್ತಾರೆ. ನಿತ್ಯ ರಾತ್ರಿ ಉಳಿದಿರುವ ಆಹಾರ ಪದಾರ್ಥ, ತಿಂದು ಬಿಟ್ಟ ಉಳಿಕೆ ಆಹಾರಗಳನ್ನು ಇಲ್ಲಿಗೆ ಸುರಿಯುತ್ತಾರೆ. ನಿತ್ಯ ಈ ತೊಟ್ಟಿಗಳನ್ನು ಸ್ವಚ್ಛಗೊಳಿಸಲೇಬೇಕು. ಮಂಗಳವಾರ ಈ ತೊಟ್ಟಿಗಳಿಂದ ಪೌರಕಾರ್ಮಿಕರು ಕಸ ಸಂಗ್ರಹಿಸದೆ ಇದ್ದುದ್ದರಿಂದ ದುರ್ಗಂಧ ಬೀರಿತು.

ADVERTISEMENT

ಮುಷ್ಕರ ವಾಪಸ್ 
ಸರ್ಕಾರ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದರಿಂದ ಪಾಲಿಕೆ ಮುಂದೆ ಪ್ರತಿಭಟನೆ ಮಾಡುತ್ತಿದ್ದ ಪೌರಕಾರ್ಮಿಕರು ಮುಷ್ಕರವನ್ನು ವಾಪಸ್ ತೆಗೆದುಕೊಂಡರು.
ಮಂಗಳವಾರ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ಪಾಲಿಕೆಯ ಮುಖ್ಯದ್ವಾರದ ಮುಂದೆ ಕುಳಿತ ನೂರಾರು ಪ್ರತಿಭಟನಾಕಾರು ಘೋಷಣೆಗಳನ್ನು ಕೂಗಿದರು. ಗುತ್ತಿಗೆ ಪದ್ಧತಿ ಕೊನೆಗಾಣಿಸಿ, ಕಾಯಂ ಮಾಡಲು ಒತ್ತಾಯಿಸಿದರು. ಸಂಜೆ ಹೊತ್ತಿಗೆ ಸರ್ಕಾರದಿಂದ ಭರವಸೆ ದೊರೆತ ಬಳಿಕೆ ಮುಷ್ಕರ ಕೈಬಿಟ್ಟರು.

* * 

ಸರ್ಕಾರ ಪೌರಕಾರ್ಮಿಕರ ಬೇಡಿಕೆಗಳಿಗೆ ಸ್ಪಂದಿಸಿರುವುದರಿಂದ ಮುಷ್ಕರವನ್ನು ವಾಪಸ್ ಪಡೆಯಲಾಗಿದೆ. ಬುಧವಾರ ಬೆಳಿಗ್ಗೆ  ಸ್ವಚ್ಛತಾ ಕಾರ್ಯ ಆರಂಭಿಸಲಾಗುವುದು
ಎನ್.ಮಾರ
ಪಾಲಿಕೆ ಪೌರಕಾರ್ಮಿಕರ ಸಂಘದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.