ADVERTISEMENT

ಹಕ್ಕುಪತ್ರ ನೀಡುವಲ್ಲಿ ತಾರತಮ್ಯ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 14 ಜನವರಿ 2012, 8:30 IST
Last Updated 14 ಜನವರಿ 2012, 8:30 IST

ಹುಣಸೂರು: ಪಟ್ಟಣದ ನರಸಿಂಹಸ್ವಾಮಿ ತಿಟ್ಟಿನ ನಿವಾಸಿಗಳಿಗೆ ಹಕ್ಕುಪತ್ರ ನೀಡಬೇಕು ಎಂದು ಒತ್ತಾಯಿಸಿ ಅಲ್ಲಿನ ನಿವಾಸಿಗಳು ಶುಕ್ರವಾರ ಪುರಸಭೆ ಮುಂದೆ ಧರಣಿ ನಡೆಸಿದರು.

ಪಟ್ಟಣ ಹೊರ ವಲಯದ ನರಸಿಂಹಸ್ವಾಮಿತಿಟ್ಟು ಬಡಾವಣೆಯಲ್ಲಿ 25 ವರ್ಷದಿಂದ ವಾಸಿಸುತ್ತಿರುವ ಬಡ ಜನರಿಗೆ ಈವರೆಗೂ ನಿವೇಶನ ಹಕ್ಕುಪತ್ರ ನೀಡಿಲ್ಲ. ಆದರೆ ಈಚೆಗೆ ಬಂದ ವಲಸಿಗರಿಗೆ ಮಾತ್ರ ಹಕ್ಕುಪತ್ರ ನೀಡುವ ಮೂಲಕ ಪುರಸಭೆ ಇಬ್ಬಗೆ ನೀತಿ ಅನುಸರಿಸುತ್ತಿದೆ ಪ್ರತಿಭಟನಾಕಾರರು ಆರೋಪಿಸಿದರು.

`ಪಟ್ಟಣದಲ್ಲೇ ಹುಟ್ಟಿ, ಬೆಳೆದು 25 ವರ್ಷದಿಂದ ನರಸಿಂಹಸ್ವಾಮಿ ತಿಟ್ಟಿನಲ್ಲಿ ಜೋಪಡಿ ಹಾಕಿಕೊಂಡು ಜೀವನ ನಡೆಸುತ್ತಿದ್ದೇವೆ. ಈ ನಿವೇಶನ ಮಂಜೂರಾತಿ ಹಕ್ಕುಪತ್ರ ನೀಡುವಂತೆ ಹಲವು ಬಾರಿ ಕೋರಿದ್ದರೂ ಪುರಸಭೆ ಕಿಂಚಿತ್ತೂ ಕರುಣೆ ತೋರಿಸದೆ ಮೌನವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ದಲಿತ ಸಂಘರ್ಷ ಸಮಿತಿ ಇತ್ತೀಚೆಗೆ ನಡೆಸಿದ ಪ್ರತಿಭಟನೆ ಮಾಡಿದ ಹಿನ್ನೆಲೆಯಲ್ಲಿ, ವಿಜಾಪುರದಿಂದ ವಲಸೆ ಬಂದು ನೆಲಸಿರುವ 25 ಕುಟುಂಬದವರಿಗೆ ಹಕ್ಕುಪತ್ರ ವಿತರಿಸಲಾಗಿದೆ. ಇದೇ ಊರಿನಲ್ಲಿ ಹುಟ್ಟಿ, ಬೆಳೆದ ನಮಗೆ ನಿವೇಶನದ ಹಕ್ಕುಪತ್ರ ನೀಡಲು ಇಲ್ಲಸಲ್ಲದ ಕಾನೂನು ನೆಪ ಹೇಳುತ್ತಿದ್ದಾರೆ ಎಂದು ಬಡಾವಣೆಯ ನಿವಾಸಿಗಳಾದ ಅಶೋಕ್, ಯಶೋದಮ್ಮ, ಮೇರಿಸಲಿನಾ, ಮಹಮದ್ ಶಫಿ ಮತ್ತಿತರರು ಆರೋಪಿಸಿದರು.

ನರಸಿಂಹಸ್ವಾಮಿತಿಟ್ಟು ಪುರಸಭೆಯ ವ್ಯಾಪ್ತಿಗೆ ಸೇರಿದ್ದು, ಬಡಾವಣೆಯಲ್ಲಿ ವಾಸಿಸುವರು ಬಹುತೇಕ ಮಂದಿ ಹಿಂದುಳಿದ ವರ್ಗ ಆರ್ಥಿಕವಾಗಿ ಅಶಕ್ತರು ವಾಸಿಸುತ್ತಿದ್ದಾರೆ. ಇವರಿಗೆ ಧ್ವನಿಯಾಗಬೇಕಿದ್ದ ಜನಪ್ರತಿನಿಧಿಗಳು
ನಿಂಗರಾಜ್ ಮಲ್ಲಾಡಿ ಎಂಬುವರು, ಈ ಹಿಂದೆ ಬೇರೆಡೆಯಿಂದ 20 ಕುಟುಂಬಗಳನ್ನು ಕರೆತಂದು ನಿವೇಶನ ಮಂಜೂರು ಮಾಡಿಸಿದ್ದರು. ಈಗ ಮತ್ತೆ 25 ಕುಟುಂಬಗಳನ್ನು ಕರೆತಂದು ಆ ಕುಟುಂಬಗಳಿಗೆ ನಿವೇಶನ ನೀಡುವಂತೆ ತಾಲ್ಲೂಕು ಆಡಳಿತದ ಮೇಲೆ ಒತ್ತಡ ಹಾಕುತ್ತಿದ್ದಾರೆ. ಹುಣಸೂರಿನಲ್ಲಿರುವ ನಮಗೆ ಮೊದಲು ನಿವೇಶನ ನೀಡಿ ನಂತರ ಬೇರೆಯವರಿಗೆ ನೀಡಬೇಕು ಎಂದು ಸಮಿವುಲ್ಲಾ ಅವರು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.