ಹುಣಸೂರು: ತಾಲ್ಲೂಕಿನ ಕಾಡಂಚಿನ ಹೋಬಳಿ ಕೇಂದ್ರ ಹನಗೋಡು ಅಚ್ಚುಕಟ್ಟು ಪ್ರದೇಶದಿಂದ ಕೂಡಿದ್ದು, ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿದ್ದರೂ ಅಭಿವೃದ್ಧಿಯಲ್ಲಿ ಮಾತ್ರ ಹಿಂದುಳಿದಿದೆ.
ಹನಗೋಡು ಗ್ರಾಮದಲ್ಲಿ 2500 ಮತದಾರರಿದ್ದಾರೆ. ಲಕ್ಷ್ಮಣತೀರ್ಥ ನದಿಗೆ ನಿರ್ಮಿಸಿರುವ ಅಣೆಕಟ್ಟೆಯಿಂದ ಕುಡಿಯುವ ನೀರಿನ ಸಮಸ್ಯೆ ಇಲ್ಲ. ನೀರಿನ ವ್ಯವಸ್ಥೆಯಿದ್ದರೂ ಚರಂಡಿಗಳಲ್ಲಿ ಕಟ್ಟಿಕೊಂಡ ತಾಜ್ಯ ಸಂಗ್ರಹ ಸುಲಭವಾಗಿ ಹರಿದುಹೋಗು ವುದಿಲ್ಲ. ಮನೆ ಮುಂದಿನ ಗಬ್ಬು ವಾಸನೆಯನ್ನು ನಾಗರಿಕರು ಸಹಿಸಿಕೊಳ್ಳಬೇಕಿದೆ.
ಹನಗೋಡು ಗ್ರಾಮ ಸುವರ್ಣ ಗ್ರಾಮ ಯೋಜನೆಗೆ ಒಳಪಟ್ಟರೂ ಸಮರ್ಪಕ ಅನುದಾನ ಸರ್ಕಾರದಿಂದ ಬಿಡುಗಡೆಯಾಗಿಲ್ಲ. ಯೋಜನೆ ಅರ್ಧಕ್ಕೆ ಸ್ಥಗಿತಗೊಂಡಿದೆ. ಗ್ರಾಮದ ಕೆಲವು ಭಾಗದ ರಸ್ತೆ ಮತ್ತು ಚರಂಡಿಗಳು ಅಭಿವೃದ್ಧಿಗೊಂಡರೆ. ಉಳಿದ ಭಾಗದಲ್ಲಿ ರಸ್ತೆ ಹಾಳಾಗಿದೆ.
ಹೋಬಳಿಯ ಸಾರ್ವಜನಿಕರ ಬಹು ದಿನಗಳ ಬೇಡಿಕೆಯಾದ ಬಸ್ ನಿಲ್ದಾಣ ಇನ್ನೂ ಈಡೇರಿಲ್ಲ. ಹಿರಿಯ ಪ್ರಾಥಮಿಕ ಶಾಲೆ ಮುಂಭಾಗವೇ ಬಸ್ ನಿಲ್ದಾಣವಾಗಿದೆ. ಹನಗೋಡು ಹೋಬಳಿ ಸುತ್ತಲಿನ ಗ್ರಾಮಸ್ಥರು ಸಾರಿಗೆ ವ್ಯವಸ್ಥೆ ಇಲ್ಲದೆ ಖಾಸಗಿ ವಾಹನ ಅವಲಂಭಿಸಿದ್ದಾರೆ.
ಇಲ್ಲಿಯ ನಾಗರಿಕರು ತಮ್ಮ ಗ್ರಾಮಗಳಿಗೆ ತಲುಪಲು ಜೀಪ್, ಆಟೋ ಆಶ್ರಯಿಸಿದ್ದಾರೆ. ಹನಗೋಡು ಕೇಂದ್ರದಿಂದ ಕೇವಲ 12 ಕಿ.ಮೀ ಕ್ರಮಿಸುತ್ತಿದ್ದಂತೆ ರಾಷ್ಟ್ರೀಯ ಉದ್ಯಾನನದ ಸರಹದ್ದು ಆರಂಭಗೊಳ್ಳುತ್ತದೆ. ಈ ಭಾಗದ ರೈತರು ದಿನವೂ ಕಾಡಾನೆ ಹಾವಳಿ ಎದುರಿಸುತ್ತಿದ್ದಾರೆ. ಬಂದು ಹೋದ ಸಚಿವರು ತಡೆಗೋಡೆ ನಿರ್ಮಿಸುವ ಆಶ್ವಾಸನೆ ನೀಡುತ್ತಾರೆ. ಆದರೂ ಕಾಡಂಚಿಗೆ ತಡೆಗೋಡೆ ನಿರ್ಮಾಣ ಕಾರ್ಯ ಜಾರಿಗೊಂಡಿಲ್ಲ ಎಂದು ಸ್ಥಳಿಯರು ದೂರುತ್ತಾರೆ.
ರಸ್ತೆ ಅತಿಕ್ರಮಿಸಿ ಹಲವು ಅಂಗಡಿಗಳು ವಹಿವಾಟು ನಡೆಸುತ್ತಿವೆ. ಪಂಚಾಯಿತಿ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ. ಹನಗೋಡು- ದೊಡ್ಡಹೆಜ್ಜೂರು ರಸ್ತೆ ಮತ್ತು ಶಾಲೆ ಮುಂಭಾಗದಲ್ಲಿ ಚಿಲ್ಲರೆ ಅಂಗಡಿ ಮತ್ತು ಮಾಂಸದಂಗಡಿಗಳು ರಸ್ತೆಯಲ್ಲೇ ತಲೆ ಎತ್ತಿವೆ. ಈ ಯಾರೊಬ್ಬರೂ ಚಕಾರ ಎತ್ತಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.