ADVERTISEMENT

ಹಸಿವೇ ದೇಶದ ದೊಡ್ಡ ಸವಾಲು: ಪ್ರೊ.ಬಿಕೆಸಿ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2012, 9:45 IST
Last Updated 18 ಫೆಬ್ರುವರಿ 2012, 9:45 IST

ಮೈಸೂರು: ಗ್ರಾಮೀಣ ಪ್ರದೇಶದಲ್ಲಿ ಈಗಲೂ ಆಹಾರದ ಕೊರತೆ ಇದ್ದು, ಹಸಿವಿನಿಂದ ಬಳಲಿ ಮರಣ ಹೊಂದುತ್ತಿ ರುವುದು ನಾಚಿಕೆಗೇಡಿನ ಸಂಗತಿ ಎಂದು ಮಾಜಿ ಸಚಿವ ಪ್ರೊ.ಬಿ.ಕೆ.ಚಂದ್ರಶೇಖರ್ ಬೇಸರ ವ್ಯಕ್ತಪಡಿಸಿದರು.

ನಗರದ ಎಸ್‌ಬಿಆರ್‌ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜು, ಮೈಸೂರು ವಿಶ್ವವಿದ್ಯಾನಿಲಯದ ಯೋಜನಾ ಆಯೋಗ ಶುಕ್ರವಾರ ಏರ್ಪಡಿಸಿದ್ದ `ಸಹಸ್ರಮಾನದ ಅಭಿವೃದ್ಧಿ ಗುರಿ ಮತ್ತು ಭಾರತ- ಒಂದು ಅವಲೋಕನ~ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ಬಡತನ, ಹಸಿವು, ನಿರುದ್ಯೋಗ, ಅನಕ್ಷರತೆ ಸೇರಿದಂತೆ ಅನೇಕ ಸಮಸ್ಯೆಗಳು ದೇಶವನ್ನು ಕಾಡುತ್ತಿವೆ. ಅಭಿವೃದ್ಧಿ ಹೊಂದಿವೆ ಎಂದು ಹೇಳಲಾಗುತ್ತಿರುವ ಕೇರಳ, ಆಂಧ್ರ ಪ್ರದೇಶ, ಪಂಜಾಬ್‌ನ ಕೆಲ ಭಾಗಗಳಲ್ಲೂ ಆಹಾರದ ಸಮಸ್ಯೆ ಇದೆ. ದೇಶದ ಬಹುಪಾಲು ಜನರನ್ನು ಹಸಿವು ಕಾಡುತ್ತಿದ್ದು, ಮಧ್ಯಪ್ರದೇಶದಲ್ಲಿ ಬಡವರ ಸಂಖ್ಯೆ ಹೆಚ್ಚಾಗಿದೆ.
 
ಒಡಿಶಾದ ಕಲಹಂದಿಯಲ್ಲಿ ಹಸಿವಿನಿಂದ ಸಾಯುತ್ತಿರುವವರನ್ನು ತಡೆಯಲು ಸರ್ಕಾರ ವಿಫಲವಾಗಿದೆ ಎಂದರು.
ಅಪೌಷ್ಟಿಕತೆಯ ಕೊರತೆಯಿಂದ ಮಕ್ಕಳು ಬಳಲುತ್ತಿರುವ ಕುರಿತ `ಪ್ರಜಾವಾಣಿ~ಯ ವರದಿಯನ್ನು ಉಲ್ಲೇಖಿಸಿದ ಅವರು, ಕರ್ನಾಟಕದ ರಾಯಚೂರು, ದೇವದುರ್ಗ ಭಾಗದಲ್ಲಿ ಈ ಸಮಸ್ಯೆ ಗಂಭೀರವಾಗಿದೆ. ಬಡವರಿಗೆ ಸಾಕಷ್ಟು ಪ್ರಮಾಣದ ಆಹಾರ ಧಾನ್ಯಗಳು ತಲುಪದ ಕಾರಣ ಮಾನವ ಹಕ್ಕು ಉಲ್ಲಂಘನೆಯಾಗುತ್ತಿದೆ.
 

ದಿನಕ್ಕೆ 1 ಡಾಲರ್‌ಗಿಂತ್ ಕಡಿಮೆ ಆದಾಯ ಹೊಂದಿದ ಬಡವರ ಸಂಖ್ಯೆ ಹೆಚ್ಚಾಗಿದೆ. ಆರ್ಥಿಕವಾಗಿ ಅಭಿವೃದ್ಧಿ ಹೊಂದಿದ ಮಾತ್ರಕ್ಕೆ ಹಸಿವಿನ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಿಲ್ಲ. ಅದು ದೇಶಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದು ಅಭಿಪ್ರಾಯಪಟ್ಟರು.

ಬಿಹಾರದ ಮುಖ್ಯಮಂತ್ರಿ ನಿತೀಶ್‌ಕುಮಾರ್ ಕಳೆದ ಐದು ವರ್ಷಗಳಿಂದ ಈ ಸಮಸ್ಯೆಯನ್ನು ಸಮರ್ಥವಾಗಿ ಎದುರಿ ಸುತ್ತಿದಾರೆ. ಆದರೆ ಉಳಿದ ಸರ್ಕಾರಗಳುನಿಷ್ಕೃಯವಾಗಿದ್ದು, ಅಭಿವೃದ್ಧಿಗೆ ಸಂಬಂಧಿ ಸಿದಂತೆ ಸರಿಯಾದ ಯೋಜನೆ ಕೂಡ ಹೊಂದಿಲ್ಲ  ಎಂದರು.

ಇತ್ತೀಚೆಗೆ ಶಾಲೆಗೆ ದಾಖಲಾಗುವ ಮಕ್ಕಳ ಪ್ರಮಾಣ ಉತ್ತಮವಾಗಿದೆ. ಆದರೂ 14 ವರ್ಷಕ್ಕೂ ಮುನ್ನವೇ ಶಾಲೆ ಬಿಡುವ ವಿದ್ಯಾರ್ಥಿಗಳ ಸಂಖ್ಯೆಯನ್ನು ಕಡಿಮೆ ಮಾಡಲು ಸಾಧ್ಯವಾಗಿಲ್ಲ. ಶಿಕ್ಷಣದ ಗುಣಮಟ್ಟ ಕೂಡ ಹಾಳಾಗುತ್ತಿಎಂದರು

ಕೊಚ್ಚಿನ್ ವಿಶ್ವವಿದ್ಯಾನಿಲಯದ ಡಾ.ಫ್ರಾನ್ಸಿಸ ಚೆರುನೀಲಂ ಮಾತನಾಡಿ, ಶೇ 21ರಷ್ಟು ಜನ ಈಗಲೂ ಬಡತನ ರೇಖೆಗಿಂತ ಕೆಳಗಿದ್ದಾರೆ. ಪ್ರಪಂಚದಲ್ಲಿ ಅತಿ ಹೆಚ್ಚು ಬಡವರಿರುವುದು ಭಾರತ ದಲ್ಲೇ. ಬಂಡವಾಳಶಾಹಿಗಳ ಹಿಡಿತಕ್ಕೆ ಬಂದ ಬಳಿಕ ಚೀನಾದ ಚಿತ್ರಣ ಸಂಪೂ ರ್ಣವಾಗಿ ಬದಲಾಗಿದೆ. ಭಾರತದ ತಲಾ ಆದಾಯದ ಮೂರು ಪಟ್ಟು ಚೀನಾ ತಲಾ ಆದಾಯವಿದೆ. ಭಾರತದ ಶೇ 90ರಷ್ಟು ಹಳ್ಳಿಗಳಿಗೆ ಕುಡಿಯಲು ಶುದ್ಧ ನೀರು ಸಿಗುತ್ತಿಲ್ಲ.

ಇಂದಿರಾ ಆವಾಸ್ ಯೋಜನೆಯಲ್ಲಿ ನಿರ್ಮಾಣವಾದ ಮನೆಗಳಲ್ಲೂ ಶೌಚಾಲಯದ ವ್ಯವಸ್ಥೆಯಿಲ್ಲ ಎಂದು ಬೇಸರಿಸಿದರು.

ಮಹಾಜನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಆರ್.ವಾಸುದೇವಮೂರ್ತಿ, ಉಪಾಧ್ಯಕ್ಷ ಡಾ.ಪ್ರಭು ಶಂಕರ್, ಕಾರ್ಯದರ್ಶಿ ಜಿ.ಎಸ್.ಸುಬ್ರಹ್ಮಣ್ಯಂ, ಪ್ರಾಂಶುಪಾಲ ಕೆ.ವಿ.ಪ್ರಭಾಕರ್, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಜಿ.ಎಸ್.ರಾಮಾನುಜನ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT