ADVERTISEMENT

ಹಾಲಿ, ಮಾಜಿ ಶಾಸಕರಿಗೆ ಪ್ರತಿಷ್ಠೆಯ ಕ್ಷೇತ್ರ

ಹುನಗೋಡು ಜಿಲ್ಲಾ ಪಂಚಾಯಿತಿ ಕ್ಷೇತ್ರದ ಉಪಚುನಾವಣೆ

​ಪ್ರಜಾವಾಣಿ ವಾರ್ತೆ
Published 12 ಜೂನ್ 2018, 5:13 IST
Last Updated 12 ಜೂನ್ 2018, 5:13 IST

ಹುಣಸೂರು: ಎಚ್‌.ಡಿ.ಕೋಟೆ ಕ್ಷೇತ್ರದ ಶಾಸಕ ಸಿ.ಅನಿಲ್‌ ಕುಮಾರ್ ರಾಜೀನಾಮೆಯಿಂದ ತೆರವಾಗಿರುವ ಹುಣಸೂರು ತಾಲ್ಲೂಕಿನ ಹನಗೋಡು ಜಿಲ್ಲಾ ಪಂಚಾಯಿತಿ (ಎಸ್‌.ಟಿ ಮೀಸಲು) ಕ್ಷೇತ್ರಕ್ಕೆ ಜೂನ್‌ 14ರಂದು ಚುನಾವಣೆ ನಡೆಯಲಿದ್ದು, ಬಿರುಸಿನ ಪ್ರಚಾರ ನಡೆದಿದೆ.

ತಾಲ್ಲೂಕಿನ ಅರಣ್ಯದಂಚಿಗೆ ಹೊಂದಿಕೊಂಡಿರುವ ಈ ಕ್ಷೇತ್ರದಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದೆ. ತಾಲ್ಲೂಕಿನ ಜೀವನದಿ ಲಕ್ಷ್ಮಣತೀರ್ಥ ಇಲ್ಲಿ ಹರಿದರೂ ಈ ಕ್ಷೇತ್ರದ ವ್ಯಾಪ್ತಿಯಲ್ಲಿರುವ 6 ಗ್ರಾಮ ಪಂಚಾಯಿತಿಗಳಿಗೆ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ.

ಕ್ಷೇತ್ರ ವ್ಯಾಪ್ತಿಯಲ್ಲಿ 8 ಗ್ರಾಮ ಪಂಚಾಯಿತಿ ಹಾಗೂ 4 ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳಿದ್ದು, ಅವುಗಳಲ್ಲಿ ಕಾಂಗ್ರೆಸ್‌– ಜೆಡಿಎಸ್‌ ಸಮನಾಗಿ ಅಧಿಕಾರ ಹಿಡಿದಿವೆ. ಉಪಚುನಾವಣೆ ಶಾಸಕ ಎಚ್‌.ವಿಶ್ವನಾಥ್‌ ಹಾಗೂ ಎಚ್‌.ಡಿ.ಕೋಟೆ ಶಾಸಕ ಅನಿಲ್‌ ಕುಮಾರ್, ಮಾಜಿ ಶಾಸಕ ಎಚ್‌.ಪಿ.ಮಂಜುನಾಥ್ ಅವರಿಗೆ ಪ್ರತಿಷ್ಠೆಯಾಗಿದೆ.

ADVERTISEMENT

ಹನಗೋಡು ಜಿ.ಪಂ.ನಲ್ಲಿ ಒಟ್ಟು 35 ಸಾವಿರ ಮತದಾರರು ಇದ್ದಾರೆ. ಒಕ್ಕಲಿಗ, ಆದಿವಾಸಿ ಗಿರಿಜನ, ಹಾಲುಮತ ಕುರುಬ, ಪರಿಶಿಷ್ಟ ಜಾತಿ ಮತ್ತು ನಾಯಕ ಸಮಾಜದವರಿದ್ದರೂ, ಆದಿವಾಸಿ ಗಿರಿಜನರ ಮತಗಳು ನಿರ್ಣಾಯಕ ಪಾತ್ರ ವಹಿಸಲಿವೆ.

ಒಕ್ಕಲಿಗರ ಪ್ರಾಬಲ್ಯವಿದ್ದು ಮಂಡಳ ಪಂಚಾಯಿತಿ ನಂತರದಲ್ಲಿ ನಡೆದ 5 ಚುನಾವಣೆಯಲ್ಲಿ ಜೆಡಿಎಸ್‌ ನಾಲ್ಕು ಬಾರಿ, ಬಿಜೆಪಿ ಒಂದು ಬಾರಿ ಜಯಗಳಿಸಿತ್ತು. ಭಾಗ್ಯಮ್ಮ, ಆದಿವಾಸಿ ಗಿರಿಜನ ಮಹಿಳೆ ಜಾಜಿ, ಫಜಲುಲ್ಲಾ, ಅನಿಲ್‌ ಕುಮಾರ್ ಜೆಡಿಎಸ್‌ನಿಂದ ಆಯ್ಕೆ ಆಗಿದ್ದರು. ಜಾಜಿ ಅವರು ಜಿ.ಪಂ ಉಪಾಧ್ಯಕ್ಷೆ ಸ್ಥಾನವನ್ನೂ ಅಲಂಕರಿಸಿದ್ದರು. ಜೆಡಿಎಸ್‌ನಿಂದ ಹೊರ ಬಂದಿದ್ದ ಜಿ.ಟಿ.ದೇವೇಗೌಡ ತಮ್ಮ ಪತ್ನಿ ಲಲಿತಾ ಅವರನ್ನು ಬಿಜೆಪಿಯಿಂದ ನಿಲ್ಲಿಸಿ, ಗೆಲ್ಲಿಸಿಕೊಂಡಿದ್ದರು.

ಹನಗೋಡು ಜಿ.ಪಂ ಅತ್ಯಂತ ಹಿಂದುಳಿದ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದೆ. ಇದರ ವ್ಯಾಪ್ತಿಗೆ 13 ಆದಿವಾಸಿ ಗಿರಿಜನ ಹಾಡಿಗಳು ಸೇರುತ್ತವೆ. 3 ಆದಿವಾಸಿ ಪುನರ್ವಸತಿ ಕೇಂದ್ರಗಳಿವೆ. ಹಾಡಿ ಜನರಿಗೆ ಮೂಲಸೌಕರ್ಯ ಸಮಸ್ಯೆ ಬೃಹತ್ತಾಗಿ ಕಾಡುತ್ತಿದೆ. ನಾಗರಹೊಳೆ ಅರಣ್ಯದಂಚಿನ ಕೃಷಿಕರ ಬವಣೆ, ಏತ ನೀರಾವರಿ, ರಸ್ತೆ ಅಭಿವೃದ್ಧಿ, ಅಕ್ರಮ ಮರಳು ಮತ್ತು ಕಲ್ಲು ಗಣಿಗಾರಿಕೆಯಂತಹ ಸವಾಲುಗಳು ಕ್ಷೇತ್ರದ ಜನಪ್ರತಿನಿಧಿಗೆ ಎದುರಾಗಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.