ADVERTISEMENT

ಹುಣಸೂರು: ಮನೆ ಮನೆ ದಸರಾ ಶುರು

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2011, 6:40 IST
Last Updated 27 ಸೆಪ್ಟೆಂಬರ್ 2011, 6:40 IST

ಹುಣಸೂರು: ತಾಲ್ಲೂಕಿನ ಹನಗೋಡು ಗ್ರಾಮದಲ್ಲಿ ಮನೆ ಮನೆ ದಸರಾ ಕಾರ್ಯಕ್ರಮಕ್ಕೆ ಶಾಸಕ ಎಚ್.ಪಿ.ಮಂಜುನಾಥ್ ಸೋಮವಾರ ಚಾಲನೆ ನೀಡಿದರು.

ಉತ್ಸವ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಸ್ಥಳೀಯ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರು ನೀಡಿದ ಪೂಜಾ ಕುಣಿತ ಪ್ರದರ್ಶನ ಎಲ್ಲರನ್ನೂ ಆಕರ್ಷಿಸಿತು.

ನಂತರ ನಡೆದ ಮೆರವಣಿಗೆಯಲ್ಲಿ ವಿವಿಧ ಸ್ತಬ್ಧಚಿತ್ರಗಳು ಪಾಲ್ಗೊಂಡು ಜನರನ್ನು ರಂಜಿಸಿದವು. ಉತ್ಸವದ ಅಂಗವಾಗಿ ಗ್ರಾಮದಲ್ಲಿ ಎತ್ತಿನಗಾಡಿ ಓಟ, ಕಬ್ಬಡಿ ಪಂದ್ಯಾವಳಿಯನ್ನು ಏರ್ಪಡಿಸಲಾಗಿತ್ತು.

ಶಾಸಕ ಎಚ್.ಪಿ.ಮಂಜುನಾಥ್ ಮಾತನಾಡಿ, ಇಂತಹ ವಿಶೇಷ ಸಂದರ್ಭಗಳಲ್ಲಿಯಾದರೂ ಗ್ರಾಮಗಳು ನೈರ್ಮಲ್ಯವನ್ನು ಕಾಪಾಡಬಹುದು ಎನ್ನುವ ಉದ್ದೇಶದಿಂದ ಶಾಸಕರ ಅನುದಾನದಲ್ಲಿ ಬಹುಮಾನವನ್ನು ಘೋಷಣೆ ಮಾಡಿದ್ದೆ. ಗ್ರಾಮೀಣ ಪ್ರದೇಶದಲ್ಲಿ ನಮ್ಮ ಉದ್ದೇಶಕ್ಕೆ ಸ್ವಲ್ಪವೂ ಸ್ಪಂದಿಸದೇ ಇರುವುದರಿಂದ ಬೇಸರವಾಗಿದೆ. ತಾಲ್ಲೂಕಿನ 30 ಗ್ರಾಮ ಪಂಚಾಯಿತಿಗಳಲ್ಲಿ 9-10 ಪಂಚಾ ಯಿತಿಗಳು ನೈರ್ಮಲ್ಯಕ್ಕೆ ಒತ್ತು ನೀಡಿವೆ ಎಂದು ಹರ್ಷ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಲಲಿತಾ ಜಿ.ಟಿ.ದೇವೇಗೌಡ ಮಾತನಾಡಿ ಗ್ರಾಮಪಂಚಾಯಿತಿ ಅಧ್ಯಕ್ಷರು ಈ ಉತ್ಸವವನ್ನು ಸಕಾರಾತ್ಮಕವಾಗಿ ತೆಗೆದು ಕೊಳ್ಳದೆ ಇರುವುದು ಸರಿಯಲ್ಲ. ರಂಗೋಲಿ ಬಿಡಿಸುವ ಜೊತೆಗೆ ಮನೆ ಮುಂದಿನ ಚರಂಡಿಯನ್ನು ಸ್ವಚ್ಛಗೊಳಿಸಬೇಕಿತ್ತು ಎಂದರು.

ಮನೆ ಮನೆ ದಸರಾ ಅಂಗವಾಗಿ ತಾಲ್ಲೂಕಿನ ಎಲ್ಲಾ ಗ್ರಾಮಗಳಲ್ಲೂ ಹಬ್ಬದ ವಾತಾವರಣವಿದ್ದು, ಸರ್ಕಾರಿ ಕಟ್ಟಡ, ಶಾಲಾ, ಕಾಲೇಜು, ದೇವಸ್ಥಾನ ಗಳು ದೀಪಾಲಂಕಾರದಿಂದ ಶೃಂಗರಕೊಂಡಿದ್ದವು.

ಉದ್ದೇಶ ವಿಫಲ: ಮನೆ ಮನೆ ದಸರಾ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಗಳು ತನ್ನ ವ್ಯಾಪ್ತಿಯ ಗ್ರಾಮಗಳಲ್ಲಿ ನೈರ್ಮಲ್ಯವನ್ನು ಕಾಪಾಡಬೇಕು. ಉತ್ತಮವಾಗಿ ನೈರ್ಮಲ್ಯ ಹೊಂದಿದ ಗ್ರಾಮಗಳಿಗೆ ಶಾಸಕರ ಅನುದಾನದಲ್ಲಿ ಪ್ರಥಮ ಬಹುಮಾನ ರೂ 3 ಲಕ್ಷ, ದ್ವಿತೀಯ ಬಹುಮಾನ 2 ಲಕ್ಷ ಮತ್ತು ತೃತೀಯ ಬಹುಮಾನ ರೂ. 1 ಲಕ್ಷ  ಘೋಷಿಸಿದ್ದರು.

ಈ ಸಂಬಂಧ ಹಲವು ಸಭೆಯನ್ನು ತಾಲ್ಲೂಕು ಪಂಚಾಯಿತಿ ಇಓ  ಪಿಡಿಓ, ಮತ್ತು ಜನಪ್ರತಿನಿಧಿ ಗ ಳೊಂದಿಗೆ ನಡೆಸಿದ್ದರೂ ಪ್ರಯೋಜನವಾಗಿಲ್ಲ. ಹನಗೋಡು ಮತ್ತು ದೊಡ್ಡ ಹೆಜ್ಜೂರು ಗ್ರಾಮ ಪಂಚಾಯಿತಿಗಳಲ್ಲಿ ನೈರ್ಮಲ್ಯಕ್ಕೆ ಆದ್ಯತೆ  ನೀಡಿರಲಿಲ್ಲ.

ಗ್ರಾಮಗಳಲ್ಲಿ ಜನರಿಗೆ ಮನೆ ಮನೆ ದಸರಾ ಎಂದರೇನು ಎಂಬ ಮಾಹಿತಿಯೂ ಇಲ್ಲವಾಗಿದ್ದು, ಆಶ್ಚರ್ಯ ಮೂಡಿಸಿತು. ಇಲ್ಲಿಯ ಜನರಿಗೆ ಮನೆ ಮನೆ ದಸರಾ ಎನ್ನುವ ಬಗ್ಗೆಯೇ ಗೊತ್ತಿರಲಿಲ್ಲ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.