ಮೈಸೂರು: ಮೂಢನಂಬಿಕೆಯಲ್ಲಿ ಮುಳುಗಿರುವ ದೇಶವನ್ನು ಮುಕ್ತ ಮಾಡಬೇಕಿದೆ ಎಂದು ಹಿರಿಯ ಸಾಹಿತಿ ಮಳಲಿ ವಸಂತಕುಮಾರ್ ಅಭಿಪ್ರಾಯ ಪಟ್ಟರು.
ನಗರದ ಜಯಚಾಮರಾಜೇಂದ್ರ ಸ್ಕೌಟ್ಸ್ ಅಂಡ್ ಗೈಡ್ಸ್ ಭವನದಲ್ಲಿ ಭಾನುವಾರ ಎಂ.ವಿ. ಅಮರನಾಥ್ ಅವರ ‘ಮಕ್ಕಳ ಕೈ ತುತ್ತು’ ಕವನ ಸಂಕಲನ ಬಿಡುಗಡೆಗೊಳಿಸಿ ಅವರು ಮಾತನಾಡಿದರು.ಮಡೆ ಮಡೆ ಸ್ನಾನದಂತಹ ಆಚರಣೆ ಹೇಯ ಕೃತ್ಯ. ಈ ಮೌಢ್ಯ ನಿವಾರಣೆಗೆ ಮೌಢ್ಯ ಪ್ರತಿಬಂಧಕ ಮಸೂದೆ ಜಾರಿಯಾಗಬೇಕು ಎಂದರು.
ಲೇಖಕರು ಈ ಕೃತಿಯಲ್ಲಿ ತಾಯಿ ಮತ್ತು ಮಗುವಿನ ಸಂಬಂಧದ ಜತೆಗೆ ರಾಷ್ಟ್ರಪ್ರೇಮದ ಅನನ್ಯತೆಯನ್ನು ಉದ್ದೀಪನಗೊಳಿಸಿದ್ದಾರೆ. ಕನ್ನಡ ಸಾರಸ್ವತ ಲೋಕದಲ್ಲಿ ಶಿಶು ಸಾಹಿತ್ಯ ಕೃಷಿ ನಡೆದಿದ್ದರೂ, ಪರಿಣಾಮಕಾರಿ ಾಗಿ ಮತ್ತು ವ್ಯಾಪಕವಾಗಿ ಆಗಿಲ್ಲ. ‘ಆಡಿ ಬಾ ಎನ ಕಂದಾ ಅಂಗಾಲ ತೊಳೆದೇನು’, ಓ, ಹುಚ್ಚುಕೋಡಿ ನೀ ಅತ್ತರೊಂದು ರುಚಿ, ನಕ್ಕರೊಂದು ರುಚಿ’ ಎಂಬ ಗೀತೆಗಳು ಮಕ್ಕಳ ಸಾಹಿತ್ಯದ ಹೆಗ್ಗುರುತಾಗಿವೆ ಎಂದರು.
ತಮಿಳಿನಲ್ಲಿ ಮಕ್ಕಳ ಸಾಹಿತ್ಯಕ್ಕೆ ಹೆಚ್ಚು ಒತ್ತನ್ನು ನೀಡಲಾಗಿದೆ. ಅಲ್ಲಿನ ತಿರುವಳ್ಳರ್ ಕವಿ ಮಹತ್ವದ ಕೊಡುಗೆ ನೀಡಿದ್ದಾರೆ. ನಮ್ಮ ಜಾನಪದ ಸಾಹಿತ್ಯದಲ್ಲಿ ಮಕ್ಕಳಿಗೆ ವಿಶೇಷ ಸ್ಥಾನಮಾನ ಕೊಟ್ಟಿದೆ ಎಂಬುದನ್ನು ನಾವು ಮರೆಯುವ ಹಾಗಿಲ್ಲ ಎಂದರು. ಕಾದಂಬರಿಗಾರ್ತಿ ಪ್ರೇಮಾ ಭಟ್, ಪತ್ರಕರ್ತ ಲಕ್ಷ್ಮೀಶ ಕಾಟುಕುಕ್ಕೆ, ಡಾ.ರಾಜನ್, ವಿ. ಶ್ರೀನಿವಾಸ್, ಶಂಕರಪ್ಪ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.