ADVERTISEMENT

‘ಸಾಂಸ್ಕೃತಿಕ ವಿನಿಮಯ ಅಗತ್ಯ’

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2013, 6:01 IST
Last Updated 16 ಸೆಪ್ಟೆಂಬರ್ 2013, 6:01 IST

ಮೈಸೂರು:  ‘ವಿಶ್ವವೇ ಗ್ರಾಮವಾಗಿರುವ ಇಂದಿನ ಸಂದರ್ಭದಲ್ಲಿ ವಿದ್ಯಾರ್ಥಿಗಳು ಎಲ್ಲಾ ರಾಷ್ಟ್ರದ ಸಂಸ್ಕೃತಿಯನ್ನು ಅರಿಯಬೇಕಿದೆ’ ಎಂದು ಮೈಸೂರು ವಿವಿ ಕುಲಪತಿ ಕೆ.ಎಸ್‌. ರಂಗಪ್ಪ ಸಲಹೆ ನೀಡಿದರು.

ಮೈಸೂರು ವಿಶ್ವವಿದ್ಯಾನಿಲಯದ ಅಂತರರಾಷ್ಟ್ರೀಯ ಕೇಂದ್ರ ಹಾಗೂ ಸಾಮರ್ಥ್ಯಾಭಿವೃದ್ಧಿ ಮತ್ತು ಉದ್ಯೋಗಾವಕಾಶಗಳ ಸೇವಾ ಕೇಂದ್ರ ರಾವ್‌ಬಹದ್ದೂರ್‌ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ನನ್ನ ದೇಶ – ನನ್ನ ಜನ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಾಂಸ್ಕೃತಿಕ ಕೊಡು–ಕೊಳ್ಳುವಿಕೆಯಿಂದ ದೇಶಗಳ ಸಂಬಂಧ ಗಟ್ಟಿಯಾಗುತ್ತದೆ. ಮೈಸೂರು ವಿವಿ 1,200 ವಿದೇಶಿ ವಿದ್ಯಾರ್ಥಿಗಳನ್ನು ಹೊಂದಿದ್ದು, ಹೆಚ್ಚು ವಿದೇಶಿ ವಿದ್ಯಾರ್ಥಿಗಳನ್ನು ಹೊಂದಿರುವ ದೇಶದ ನಾಲ್ಕನೇ ವಿಶ್ವವಿದ್ಯಾನಿಲಯವಾಗಿದೆ. ಈ ಕಾರ್ಯಕ್ರಮ ವಿವಿಧ ದೇಶಗಳ ಭಿನ್ನ ಸಂಸ್ಕೃತಿಯನ್ನು ಅರಿಯುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದರು.

’ವಿದೇಶಿ ವಿದ್ಯಾರ್ಥಿಗಳು ಆಯಾ ದೇಶ ಮತ್ತು ಸಂಸ್ಕೃತಿಯನ್ನು ಪರಿಚಯಿಸುವ ಕಾರ್ಯಕ್ರಮ ಇದಾಗಿದ್ದು, ಪ್ರತಿ ತಿಂಗಳು ಈ ವೇದಿಕೆಯಿಂದ ಹಲವು ದೇಶಗಳ ಸಂಸ್ಕೃತಿಯನ್ನು ತಿಳಿಯಬಹುದಾಗಿದೆ. ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಪ್ರಯೋಜನ ಪಡೆದುಕೊಳ್ಳಬೇಕು’ ಎಂದು ಮೈಸೂರು ವಿವಿ ಅಂತರರಾಷ್ಟ್ರೀಯ ಕೇಂದ್ರದ ನಿರ್ದೇಶಕಿ ಪ್ರೊ.ಆರ್‌. ಇಂದಿರಾ ಸಲಹೆ ನೀಡಿದರು.

ಸಿಪಿಡಿಪಿಎಸ್‌ ನಿರ್ದೇಶಕ ಪ್ರೊ.ನಿರಂಜನ ವಾನಳ್ಳಿ ಇದ್ದರು. ಕಾರ್ಯಕ್ರಮದ ನಂತರ ನಮೀಬಿಯಾ ಮತ್ತು ತಾಂಜೆನಿಯಾ ದೇಶದ ವಿದ್ಯಾರ್ಥಿಗಳಾದ ಬೆಂಜಮಿನ್‌, ಮರಿಯಾ ಅವರು ತಮ್ಮ ದೇಶ, ಸಂಸ್ಕೃತಿಯನ್ನು ಪರಿಚಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.