ಮೈಸೂರು: ವಿದ್ಯಾರ್ಥಿ ನಿಲಯಕ್ಕಾಗಿ 73 ವರ್ಷದ ಹಿಂದೆ ಉಚಿತವಾಗಿ ನೀಡಿದ್ದ ಮೂಲೆ ನಿವೇಶನವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಂಡಿರುವುದನ್ನು ಪತ್ತೆ ಹಚ್ಚಿದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ, ಸೋಮವಾರ ಮರಳಿ ತನ್ನ ವಶಕ್ಕೆ ಪಡೆದಿದೆ.
ಈ ಆಸ್ತಿಯ ಮೌಲ್ಯ ₹ 25 ಕೋಟಿ. ಈ ವಾಣಿಜ್ಯ ಕಟ್ಟಡದಿಂದ ಮುಡಾಗೆ ಇನ್ಮುಂದೆ ಮಾಸಿಕ ₹ 5 ಲಕ್ಷದಿಂದ ₹ 6 ಲಕ್ಷದವರೆಗೆ ಬಾಡಿಗೆ ಬರಲಿದೆ ಎಂದು ಪ್ರಾಧಿಕಾರದ ಆಯುಕ್ತ ಡಾ.ಡಿ.ಬಿ.ನಟೇಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಗರದ ಜಯಲಕ್ಷ್ಮೀಪುರಂ ಬಡಾವಣೆಯ ಮೂರನೇ ಬ್ಲಾಕಿನ ನಿವೇಶನ ಸಂಖ್ಯೆ 01ನ್ನು ಕಣಿಯರ ಸಮಾಜದ ಮಕ್ಕಳಿಗೆ ವಿದ್ಯಾರ್ಥಿನಿಲಯ ಕಟ್ಟಡ ನಿರ್ಮಾಣಕ್ಕಾಗಿ, 03/02/1948ರಲ್ಲಿ ಕೆಲವು ಷರತ್ತುಗಳೊಂದಿಗೆ ಉಚಿತವಾಗಿ ಮಂಜೂರು ಮಾಡಲಾಗಿತ್ತು.
ಸಂಘದವರು 13/09/1989ರಲ್ಲಿ ಸದರಿ ನಿವೇಶನದಲ್ಲಿ (15600.00 ಚದರ ಅಡಿ) ವಾಣಿಜ್ಯ ಮಳಿಗೆ ನಿರ್ಮಿಸಲು ಕೋರಿದ್ದರ ಮೇರೆಗೆ; 31/07/1992ರ ಪ್ರಾಧಿಕಾರದ ಸಾಮಾನ್ಯ ಸಭೆಯಲ್ಲಿ, ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಅನುಮೋದನೆ ನೀಡಲಾಗಿತ್ತು.
ಆದರೆ ಈ ಸಂಘದವರು 14/08/1991ರಲ್ಲೇ ವ್ಯಕ್ತಿಯೊಬ್ಬರೊಟ್ಟಿಗೆ ವಾಣಿಜ್ಯ ಸಂಕೀರ್ಣ ನಿರ್ಮಾಣ ಮಾಡಲು 27 ವರ್ಷಗಳಿಗೆ ಗುತ್ತಿಗೆ ಕರಾರು ಮಾಡಿಕೊಂಡಿರುವುದು ಗೊತ್ತಾಗಿದೆ.
ಕಾಳಿದಾಸ ರಸ್ತೆಗೆ ಅಭಿಮುಖವಾಗಿ ವಾಣಿಜ್ಯ ಸಂಕೀರ್ಣ ನಿರ್ಮಿಸಿದ್ದು, ಉಳಿದ ಭಾಗದ ನಿವೇಶನದಲ್ಲಿ ವಿದ್ಯಾರ್ಥಿ ನಿಲಯಕ್ಕಾಗಿ ಕೇವಲ 4 ಕೊಠಡಿ ನಿರ್ಮಿಸಿದ್ದಾರೆ. ಇವುಗಳನ್ನು ಸಹ ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿರುವುದನ್ನು ಗಮನಿಸಿದ ಆಗಿನ ಆಯುಕ್ತರು, 07/09/2015ರಂದು ಷರತ್ತು ಉಲ್ಲಂಘನೆ ನೋಟಿಸ್ ನೀಡಿದ್ದರು. ಆದರೆ ಸಂಘದಿಂದ ಇದೂವರೆವಿಗೂ ಸಮಂಜಸ ಉತ್ತರ ಬಂದಿಲ್ಲ.
ಈ ನಿವೇಶನದ ಮಂಜೂರಾತಿ ಹಂಚಿಕೆಯನ್ನೇ ರದ್ದುಪಡಿಸುವ ಸಂಬಂಧ 07/03/2020 ಹಾಗೂ 20/03/2021ರಂದು ನಡೆದ ಪ್ರಾಧಿಕಾರದ ಸಭೆಗಳಲ್ಲಿ ವಿಷಯ ಮಂಡಿಸಲಾಗಿತ್ತು.
ಅಂತಿಮವಾಗಿ ಕಣಿಯರ ಸೇವಾ ಸಮಾಜದವರು ಮಂಜೂರಾತಿ ಉದ್ದೇಶಕ್ಕೆ ಉಪಯೋಗಿಸಿಕೊಳ್ಳದೆ, ಮಂಜೂರಾತಿ ಸಂದರ್ಭದಲ್ಲಿ ವಿಧಿಸಿದ ಷರತ್ತನ್ನು ಉಲ್ಲಂಘನೆ ಮಾಡಿರುವುದರಿಂದ; ಈ ಮಂಜೂರಾತಿಯನ್ನೇ ರದ್ದುಪಡಿಸಿ ಪ್ರಾಧಿಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲು ಮತ್ತು ಪ್ರಾಧಿಕಾರಕ್ಕೆ ನಿಶ್ಚಿತ ಆದಾಯ ಬರುವ ರೀತಿಯಲ್ಲಿ ಕಟ್ಟಡವನ್ನು ಉಪಯೋಗಿಸಿಕೊಳ್ಳಲು ತೀರ್ಮಾನಿಸಲಾಗಿತ್ತು.
ಈ ತೀರ್ಮಾನದಂತೆ ಆಸ್ತಿಯನ್ನು ಮುಡಾ ವಶಕ್ಕೆ ಪಡೆಯಲಾಗಿದೆ ಎಂದು ಆಯುಕ್ತರು ಪ್ರಕಟಣೆಯಲ್ಲಿ ವಿವರಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.