ADVERTISEMENT

3 ವರ್ಷ: 216 ಪ್ರಾಣಿ ಸಾವು

ಮೈಸೂರು ಚಾಮರಾಜೇಂದ್ರ ಮೃಗಾಲಯ

​ಪ್ರಜಾವಾಣಿ ವಾರ್ತೆ
Published 19 ಜುಲೈ 2013, 6:55 IST
Last Updated 19 ಜುಲೈ 2013, 6:55 IST

ಮೈಸೂರು: ನಗರದ ಚಾಮರಾಜೇಂದ್ರ ಮೃಗಾಲಯದಲ್ಲಿ ಕಳೆದ ಮೂರು ವರ್ಷಗಳಲ್ಲಿ 216 ಪ್ರಾಣಿಗಳು ಸಾವನ್ನಪ್ಪಿವೆ ಎಂದು ಅರಣ್ಯ ಸಚಿವ ರಮಾನಾಥ ರೈ ತಿಳಿಸಿದ್ದಾರೆ.

ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜು ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಬುಧವಾರ ಸದನದಲ್ಲಿ ಲಿಖಿತ ಉತ್ತರ ನೀಡಿದ ಸಚಿವರು, 2010ರಲ್ಲಿ 89, 2011ರಲ್ಲಿ 62 ಮತ್ತು 2012ರಲ್ಲಿ 65 ಪ್ರಾಣಿಗಳು ಮೃತಪಟ್ಟಿವೆ. ಇದೇ ಸಂದರ್ಭದಲ್ಲಿ ಮೃಗಾಲಯಕ್ಕೆ 966 ಪ್ರಾಣಿಗಳು ಸೇರ್ಪಡೆಗೊಂಡಿವೆ. ಜನನ, ವಿನಿಮಯ ಹಾಗೂ ಕೊಡುಗೆಯಿಂದ ಮೃಗಾಲಯದಲ್ಲಿ ಪ್ರಾಣಿಗಳ ಸಂಖ್ಯೆ ಕೂಡ ಹೆಚ್ಚಳವಾಗಿದೆ. ಹೀಗಾಗಿ, ಯಾವುದೇ ತೊಂದರೆ ಇಲ್ಲ ಎಂಬ ಭರವಸೆ ನೀಡಿದ್ದಾರೆ.

ಮೃಗಾಲಯಕ್ಕೆ ಭೇಟಿ ನೀಡುವವರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. 2012ರಲ್ಲಿ 30.35 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದು, ಪ್ರವೇಶ, ವಾಹನ ಶುಲ್ಕದಿಂದ ಮೃಗಾಲಯಕ್ಕೆ ರೂ 12.02 ಕೋಟಿ ಆದಾಯ ಬಂದಿದೆ. ಚುನಾವಣೆ, ಕಾವೇರಿ ವಿವಾದದ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಪ್ರವಾಸಿಗರ ಸಂಖ್ಯೆಯಲ್ಲಿ ಕೊಂಚ ಇಳಿಮುಖವಾಗಿರುವುದು ನಿಜ. ಆದರೆ, ದಸರಾ ಉತ್ಸವಕ್ಕೆ ಹೆಚ್ಚು ಜನ ಬರುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.

ಮೃಗಾಲಯದಲ್ಲಿ ಪ್ರಾಣಿಗಳಿಗೆ ಅಗತ್ಯವಾದ ವಾತಾವರಣವನ್ನು ಕಾಪಾಡಿಕೊಳ್ಳಲಾಗುತ್ತಿದೆ. ಹಸಿರನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅತ್ತಿ, ಮಾವು, ಸಪೋಟ, ಸೀಬೆ, ಹಲಸು, ನೇರಳೆ, ಶ್ರೀಗಂಧ, ಬಿದಿರು ಸೇರಿದಂತೆ ಹಲವು ಜಾತಿಯ 1,050 ಮರಗಳನ್ನು ಪೋಷಿಸಲಾಗಿದೆ ಎಂದು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.