ಮೈಸೂರು: ಇಲ್ಲಿನ ಜೆ.ಸಿ.ನಗರ, ಸಿದ್ಧಾರ್ಥನಗರ, ಕೆ.ಸಿ. ಬಡಾವಣೆಯನ್ನು ‘ಬಿ’ ಖರಾಬಿನಿಂದ ತೆಗೆದು ಬಡಾವಣೆ ಮಾಲೀಕರಿಗೆ ಹಾಗೂ ನಿವಾಸಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಿಗೆ ಸಮಾಜ ಸೇವಾ ಟ್ರಸ್ಟ್ ಪದಾಧಿಕಾರಿಗಳು ಮನವಿ ಮಾಡಿದರು.
ಮುಡಾದಿಂದ ಖರೀದಿಸಿ ಪಡೆದಿರುವ ಈ ಬಡಾವಣೆ ನಿವೇಶ ನಗಳನ್ನು ಮನೆ ಮಾಲೀಕರು ವಿಸ್ತರಿಸಲು, ಮಹಡಿ ಕಟ್ಟಲು, ಮಾರಾಟ ಮಾಡಲು, ಖಾತೆ ವರ್ಗಾವಣೆ ಮಾಡಲು, ಲೈಸೆನ್ಸ್ ಇತ್ಯಾದಿ ದಾಖಲೆಗಳನ್ನು ಕೊಡಲು ತಡೆಯಾಜ್ಞೆ ಹಾಕುವ ಮೂಲಕ ಕಿರುಕುಳ ನೀಡಲಾಗುತ್ತಿದೆ. ಮುಂಚೆ ಈ ಬಡಾವಣೆಗಳು ಸರ್ವೆ ನಂ. 4ನೇ ವಲಯದಲ್ಲಿದ್ದವು ಎಂದು ಹೇಳಲಾಗುತ್ತಿದೆ. ಆದರೆ, ಈ ಬಡಾವಣೆಗಳು ಯಾವ ವಿವಾದಕ್ಕೂ ಒಳಪಟ್ಟಿಲ್ಲ. ಸರ್ಕಾರದ ಅನುಮತಿ ಪಡೆದೇ ಮುಡಾ ಅರ್ಜಿದಾರರಿಗೆ ಬಡಾವಣೆಗಳನ್ನು ಹಂಚಿದೆ ಎಂದು ಬಸವ ಬಳಗದ ಮಾಜಿ ಅಧ್ಯಕ್ಷ ಲಿಂಗಣ್ಣ ಶನಿವಾರ ಪತ್ರಿಕಾಗೋಷ್ಠಿ ತಿಳಿಸಿದರು.
ಈ ಭಾಗದಲ್ಲಿ ಸುಮಾರು 3000 ಮನೆಗಳನ್ನು ನಿರ್ಮಿಸಿಕೊಂಡು 10,000 ಜನ ವಾಸವಾಗಿದ್ದಾರೆ. ವೃದ್ಧಾಪ್ಯದಲ್ಲಿರುವ ಮಾಲೀಕರೆ ಹೆಚ್ಚಿದ್ದು ತಮ್ಮ ಮಕ್ಕಳ ಓದು, ಮಕ್ಕಳ ವಿವಾಹ, ಮನೆಯಲ್ಲಿ ಪಾಲು ನೀಡುವುದು ಮೊದಲಾದವನ್ನು ಪೂರೈಸಲಾಗದೆ ಅಪಾರ ಸಮಸ್ಯೆ ಎದುರಿಸುವಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಶಾಸಕ ಎಂ.ಕೆ.ಸೋಮಶೇಖರ್ ಅವರು ಸಮಸ್ಯೆಗೆ ಸಂಬಂಧಿಸಿದ ಎಲ್ಲ ಕಡತಗಳು ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿಗಳ ಕಚೇರಿ ತಲುಪಿಸಿ, ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಭೆ ನಡೆದರೂ ವಿಷಯ ನ್ಯಾಯಾಲಯದಲ್ಲಿದೆ ಎಂಬ ಕಾರಣ ನೀಡಿ ಅಧಿಕಾರಿಗಳು ಕೈಚೆಲ್ಲಿದ್ದಾರೆ. ಅವರು ಈ ಹಿಂದೆ ನೀಡಿದ್ದ ಭರವಸೆಯಂತೆ ಸಂಪುಟ ಸಭೆ ಕರೆದು ಚುನಾವಣಾ ನೀತಿ ಸಂಹಿತೆ ಜಾರಿಯಾಯಾಗುವ ಮುನ್ನ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದರು. ಟ್ರಸ್ಟ್ ಪದಾಧಿಕಾರಿಗಳಾದ ವಿಜಯಪ್ರಕಾಶ್, ಮಂಜುನಾಥ್, ಗಿರೀಶ್, ಉಮೇಶ್, ಪ್ರಶಾಂತ್, ಸಿದ್ಧಾರ್ಥ ಪಾಟೀಲ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.