ADVERTISEMENT

ಅಸಹಿಷ್ಣುತೆಯ ಮನೋಧರ್ಮಕ್ಕೆ ಗೀತಾಂಜಲಿ ಪಾಠ: ಎಂ.ಎಸ್‌. ಆಶಾದೇವಿ

ರವೀಂದ್ರನಾಥ ಠ್ಯಾಗೋರರ ‘ಗೀತಾಂಜಲಿ’ಯ ಕನ್ನಡ ಅನುವಾದಿತ ಕೃತಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2021, 8:34 IST
Last Updated 3 ಅಕ್ಟೋಬರ್ 2021, 8:34 IST
ನಗರದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ರವೀಂದ್ರನಾಥ ಠ್ಯಾಗೋರರ ‘ಗೀತಾಂಜಲಿ’ಯ ಕನ್ನಡ ಅನುವಾದಿತ ಕೃತಿಯನ್ನು ಡಾ.ಎಂ.ಎಸ್‌. ಆಶಾದೇವಿ ಬಿಡುಗಡೆಗೊಳಿಸಿದರು. ಕೃತಿಯ ಕರ್ತೃ ಜೆ.ರಾಮಲಿಂಗೇಗೌಡ, ಎಚ್‌.ಎಸ್‌.ಗೋವಿಂದಗೌಡ, ಜಿ.ರಾಮನಾಥ ಭಟ್‌, ಎನ್.ಸಿ.ತಮ್ಮಣ್ಣಗೌಡ ಇದ್ದರು
ನಗರದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ರವೀಂದ್ರನಾಥ ಠ್ಯಾಗೋರರ ‘ಗೀತಾಂಜಲಿ’ಯ ಕನ್ನಡ ಅನುವಾದಿತ ಕೃತಿಯನ್ನು ಡಾ.ಎಂ.ಎಸ್‌. ಆಶಾದೇವಿ ಬಿಡುಗಡೆಗೊಳಿಸಿದರು. ಕೃತಿಯ ಕರ್ತೃ ಜೆ.ರಾಮಲಿಂಗೇಗೌಡ, ಎಚ್‌.ಎಸ್‌.ಗೋವಿಂದಗೌಡ, ಜಿ.ರಾಮನಾಥ ಭಟ್‌, ಎನ್.ಸಿ.ತಮ್ಮಣ್ಣಗೌಡ ಇದ್ದರು   

ಮೈಸೂರು: ‘ಅಸಹಿಷ್ಣುತೆಯ ಕಾಲಘಟ್ಟದ ಮನುಷ್ಯ ಕೇಂದ್ರಿತ ಮನೋಧರ್ಮಕ್ಕೆ ರವೀಂದ್ರನಾಥ ಠ್ಯಾಗೋರರ ‘ಗೀತಾಂಜಲಿ’ ಕೃತಿ ಪಾಠವಾಗುತ್ತದೆ’ ಎಂದು ವಿಮರ್ಶಕಿ ಡಾ.ಎಂ.ಎಸ್‌. ಆಶಾದೇವಿ ಅಭಿಪ್ರಾಯಪಟ್ಟರು.

ಪ್ರೊ.ಕೆ.ವೆಂಕಟಗಿರಿಗೌಡ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಪರಿಷತ್‌ ಹಾಗೂ ಹನ್ಯಾಳು ಪ್ರಕಾಶನದಿಂದ ನಗರದ ರೋಟರಿ ವೆಸ್ಟ್‌ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ, ಸಾಹಿತಿ ಜೆ.ರಾಮಲಿಂಗೇಗೌಡ ಅನುವಾದಿಸಿರುವ ರವೀಂದ್ರನಾಥ ಠ್ಯಾಗೋರರ ‘ಗೀತಾಂಜಲಿ’ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.

‘ನಮಗೆ ನಾವೇ ಕೃತಕ ಗೋಡೆಗಳನ್ನು ಕಟ್ಟಿಕೊಂಡು, ನಮ್ಮ ಬದುಕನ್ನು ವಿಕಾರಗೊಳಿಸಿಕೊಂಡಿದ್ದೇವೆ. ಅದಕ್ಕೆ ಬೇಕಾದ ಮದ್ದು ಪ್ರಕೃತಿಯಲ್ಲಿದೆ ಎಂಬ ಸಂದೇಶ ಸಾರುವ ಗೀತಾಂಜಲಿ ಕೃತಿಯು, ಈ ಕಾಲಕ್ಕೆ ತುರ್ತು ಚಿಕಿತ್ಸೆ ನೀಡಬಹುದಾದ ವೈದ್ಯನ ಕೆಲಸವನ್ನೂ ಮಾಡುತ್ತದೆ’ ಎಂದು ಹೇಳಿದರು.

ADVERTISEMENT

‘ರಾಷ್ಟ್ರೀಯತೆಯ ಪರಿಕಲ್ಪನೆಯನ್ನು ಬಂಗಾಳದ ಮೂಲಕ ವಿಸ್ತರಿಸಿದ ಕೀರ್ತಿ ರವೀಂದ್ರರಿಗೆ ಸಲ್ಲುತ್ತದೆ. ಭಾರತ ಎನ್ನುವ ಪರಿಭಾವನೆ ಜನರಲ್ಲಿ ಮೂಡಲು ವೇದಿಕೆ ಒದಗಿಸಿಕೊಟ್ಟಿದ್ದರು. ಸಮಸ್ತ ಭಾರತದ ಪ್ರತಿನಿಧಿಯಾಗಿ ಅವರು ಕಾಣಿಸಿಕೊಂಡಿದ್ದರು’ ಎಂದರು.

‘ರವೀಂದ್ರನಾಥ ಠ್ಯಾಗೋರ್‌ ಹಾಗೂ ಗಾಂಧೀಜಿ ನಡುವೆ ಭಿನ್ನಾಭಿಪ್ರಾಯಗಳಿದ್ದರೂ ಅವರ ಸ್ನೇಹಕ್ಕೆ ಎಂದೂ ಧಕ್ಕೆ ಬಂದಿರಲಿಲ್ಲ. ಕಾಂಗ್ರೆಸ್‌ ಪಕ್ಷವು ಏಕಪಕ್ಷೀಯವಾಗಿ ತೀರ್ಮಾನ ತೆಗೆದುಕೊಂಡಾಗ ಅದನ್ನು ವಿರೋಧಿಸಿದ್ದರು. ಬಹುತ್ವಕ್ಕೆ ಒತ್ತು ನೀಡದಿದ್ದರೆ ಎಂದಿಗೂ ಅಭಿವೃದ್ಧಿ ಸಾಧ್ಯವಿಲ್ಲ ಎಂಬುದನ್ನು ಒತ್ತಿ ಹೇಳಿದ್ದರು’ ಎಂದು ತಿಳಿಸಿದರು.

‘ನವೋದಯ ಕಾವ್ಯ ಶೈಲಿಯ, ಮೈಸೂರು ಕನ್ನಡದಲ್ಲಿ ಗೀತಾಂಜಲಿಯ ಕವಿತೆಗಳನ್ನು ಅನುವಾದಿಸಲು ಜೆ.ರಾಮಲಿಂಗೇಗೌಡರು ಪ್ರಯತ್ನಿಸಿದ್ದಾರೆ. ಇದರಿಂದ ಈ ಕೃತಿ ವಿಶಿಷ್ಟವಾಗಿ ನಿಲ್ಲುತ್ತದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವಿದ್ವಾಂಸ ಜಿ.ರಾಮನಾಥ ಭಟ್‌ ಅಧ್ಯಕ್ಷತೆ ವಹಿಸಿದ್ದರು. ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಹೆಚ್ಚುವರಿ ಕಮಿಷನರ್‌ ಜೆ.ರಾಮಲಿಂಗೇಗೌಡ, ಪ್ರಕಾಶಕ ಎಚ್‌.ಎಸ್‌.ಗೋವಿಂದಗೌಡ, ಕಾರ್ಯದರ್ಶಿ ಎನ್‌.ಸಿ.ತಮ್ಮಣ್ಣಗೌಡ ಇದ್ದರು.

‘ರವೀಂದ್ರರಿಗೆ ಪರ್ಯಾಯ ಲೇಖಕ ಕುವೆಂಪು’
‘ರವೀಂದ್ರನಾಥ ಠ್ಯಾಗೋರ್‌ ನಿಧನರಾದ ದಿನ ಬಂಗಾಳದ ಪತ್ರಿಕೆಯೊಂದರ ಸಂಪಾದಕರು ಸಂಪಾದಕೀಯ ಬರೆಯುವ ಸಂದರ್ಭದಲ್ಲಿ, ರವೀಂದ್ರರಿಗೆ ಪರ್ಯಾಯವಾಗಿ ಇರಬಹುದಾದ ಭಾರತೀಯ ಲೇಖಕ ಇನ್ಯಾರು ಎಂಬ ಪ್ರಶ್ನೆ ಮೂಡಿತ್ತು. ಆಗ ಅವರಿಗೆ ಹೊಳೆದ ಹೆಸರು ಕುವೆಂಪು. ಈ ಎರಡೂ ವ್ಯಕ್ತಿತ್ವಗಳಲ್ಲಿರುವ ಗುಣ ಸ್ವಭಾವಗಳನ್ನು ಆ ಸಂಪಾದಕರು ಗುರುತಿಸಿದ್ದರು. ಅಂತಹ ಶಕ್ತಿಯೂ ಕುವೆಂಪು ಅವರಲ್ಲಿ ಇತ್ತು. ರವೀಂದ್ರರು ಗೀತಾಂಜಲಿ ಕೃತಿಯಲ್ಲಿ ಯಾವ ಅನುಭಾವವನ್ನು ಕಟ್ಟಲು ಪ್ರಯತ್ನಿಸಿದ್ದಾರೋ ಅದು ಕುವೆಂಪು ಅವರ ವಿಶ್ವಮಾನವ ತತ್ವಕ್ಕೆ ಸಮಾನವಾದದ್ದು’ ಎಂದು ಎಂ.ಎಸ್‌.ಆಶಾದೇವಿ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.