ನಂಜನಗೂಡು: ತಾಲ್ಲೂಕಿನ ಬಂಚಹಳ್ಳಿಹುಂಡಿ ಗ್ರಾಮದಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿ ಮೇಲೆ ಸೋಮವಾರ ರಾತ್ರಿ ಆತನ ಸ್ನೇಹಿತನೇ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದು ಆರೋಪಿಯನ್ನು ಗ್ರಾಮಸ್ಥರು ಥಳಿಸಿದ್ದು ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗ್ರಾಮದ ಮಂಜುನಾಥ್ ಅವರ ಪುತ್ರ ಎಂಜಿನಿಯರಿಂಗ್ ವಿದ್ಯಾರ್ಥಿ ರೋಹನ್ (19) ಮೇಲೆ ತಾಂಡವಪುರ ಗ್ರಾಮದ ಇರ್ಷಾದ್ ಅವರ ಪುತ್ರ ದಿಲ್ಶಾದ್ (19) ಕೊಲೆ ಯತ್ನ ನಡೆಸಿದ ಆರೋಪಿ.
ರೋಹನ್ ಹಾಗೂ ದಿಲ್ಶಾದ್ ಬಾಲ್ಯದ ಸ್ನೇಹಿತರು. ಸೋಮವಾರ ರಾತ್ರಿ ಸುಮಾರು 9 ಗಂಟೆ ಸಮಯದಲ್ಲಿ ರೋಹನ್ ಮನೆಗೆ ಬಂದ ದಿಲ್ಶಾದ್ ರೋಹನ್ನನ್ನು ಚಾಕುವಿನಿಂದ ಕುತ್ತಿಗೆ ಭಾಗಕ್ಕೆ ಇರಿದಿದ್ದಾನೆ. ರೋಹನ್ ಬೀರಿದಾಗ ತಂದೆ ಮಂಜುನಾಥ್ ಬಂದು ಮಗನ ಮೇಲೆ ದಾಳಿ ಮಾಡಿದ ದಿಲ್ಶಾದ್ನನ್ನು ಹಿಡಿದಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಸ್ಥಳಕ್ಕೆ ಬಂದು ಆರೋಪಿಯನ್ನು ಥಳಿಸಿದ್ದಾರೆ ಎನ್ನಲಾಗಿದೆ.
ಗಾಯಗೊಂಡಿದ್ದ ರೋಹನ್ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರಿಂದ ಕೂಡಲೇ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಥಳಿತಕ್ಕೊಳಗಾಗಿದ್ದ ದಿಲ್ಶಾದ್ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ನೇಹಿತರ ನಡುವೆ ವೈಷಮ್ಯ ಮೂಡಲು ಕಾರಣ ತಿಳಿದುಬಂದಿಲ್ಲ. ರೋಹನ್ಗೆ ಪ್ರಜ್ಞೆ ಬಂದ ಬಳಿಕ ಹೇಳಿಕೆ ಸಂಗ್ರಹಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಡಿವೈಎಸ್ಪಿ ಪ್ರಭಾಕರ್ರಾವ್ ಶಿಂಧೆ, ಸಿ.ಪಿ.ಐ ಲಕ್ಷ್ಮಿಕಾಂತ ತಳವಾರ್, ಗ್ರಾಮಾಂತರ ಠಾಣೆ ಪಿ.ಎಸ್.ಐ ಸತೀಶ್ ಘಟನೆ ಕುರಿತು ಮಾಹಿತಿ ಸಂಗ್ರಹಿಸಿದರು.
ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.