ADVERTISEMENT

ಆತ್ಮರಕ್ಷಣೆಗೆ ಆಯುಧ ಹಿಡಿದಿರಬಹುದು

ಎಬಿವಿಪಿ ರಾಷ್ಟ್ರೀಯ ಕಾರ್ಯದರ್ಶಿ ಹರ್ಷ ನಾರಾಯಣ್

​ಪ್ರಜಾವಾಣಿ ವಾರ್ತೆ
Published 7 ಜನವರಿ 2020, 10:20 IST
Last Updated 7 ಜನವರಿ 2020, 10:20 IST

ಮೈಸೂರು: ನವದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ (ಜೆಎನ್‌ಯು) ಆವರಣದಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಸಂಘಟನೆಗೆ ಸೇರಿದ ಸದಸ್ಯರ ಮೇಲೆ ಕೆಲವರು ಹಲ್ಲೆ ನಡೆಸಿದಾಗ, ಆತ್ಮರಕ್ಷಣೆಗಾಗಿ ಆಯುಧಗಳನ್ನು ಅವರು ಹಿಡಿದಿರಬಹುದು. ಆದರೆ, ಮುಖಗವಸು ಹಾಕಿಕೊಂಡು ಹಲ್ಲೆ ನಡೆಸಿದವರು ಎಬಿವಿಪಿ ಸದಸ್ಯರಲ್ಲ ಎಂದು ಎಬಿವಿಪಿ ರಾಷ್ಟ್ರೀಯ ಕಾರ್ಯದರ್ಶಿ ಹರ್ಷ ನಾರಾಯಣ್ ತಿಳಿಸಿದರು.

ಪೆರಿಯಾರ್ ಮತ್ತು ಸಬರಾಮತಿ ಹಾಸ್ಟೆಲ್‌ನಲ್ಲಿದ್ದ ಎಬಿವಿಪಿ ಸದಸ್ಯರ ಮೇಲೆ ಹಲ್ಲೆ ನಡೆಸಲಾಗಿದೆ. ಈ ವೇಳೆ ಅವರು ಆತ್ಮರಕ್ಷಣೆಗಾಗಿ ಆಯುಧಗಳನ್ನು ಹಿಡಿದಿದ್ದಾರೆಯೇ ಹೊರತು ಪ್ರತಿಕಾರಕ್ಕೆ ಅಲ್ಲ. ಹಲ್ಲೆ ನಡೆಸಿದವರು ಎಬಿವಿಪಿಗೆ ಸೇರಿದವರು ಎಂಬ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಅವರು ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.‌

‘ನಮ್ಮ ಸಂಘಟನೆಗೆ ಹಿಂಸಾಚಾರದ ಚರಿತ್ರೆ ಇಲ್ಲ. ನಾವು ಯಾವತ್ತೂ ಹಿಂಸೆಯನ್ನು ಪ್ರತಿಪಾದಿಸುವುದಿಲ್ಲ ಮತ್ತು ಪ್ರಚೋದಿಸುವುದೂ ಇಲ್ಲ. ಕೇರಳ ಮತ್ತು ಪಶ್ಚಿಮ ಬಂಗಾಳದಲ್ಲಿ ಯಾವ ಯಾವ ಸಂಘಟನೆಗಳು ಹಿಂಸಾಚಾರದಲ್ಲಿ ತೊಡಗಿವೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ’ ಎಂದರು.‌

ADVERTISEMENT

ವಿದ್ಯಾರ್ಥಿಗಳನ್ನು ಮುಸುಕುಧಾರಿಗಳು ಹೊಡೆಯುತ್ತಿದ್ದಾಗ ಪೊಲೀಸರು ಮೂಕಪ್ರೇಕ್ಷಕರಾಗಿದ್ದರೆ ಅವರ ಮೇಲೆ ಕ್ರಮ ಕೈಗೊಳ್ಳಬೇಕು. ಇಡೀ ಪ್ರಕರಣವನ್ನು ತನಿಖೆಗೆ ಒಳಪಡಿಸಬೇಕು. ಹಿಂಸಾಚಾರದಲ್ಲಿ ಭಾಗಿಯಾಗಿರುವವರು ಯಾರೇ ಆದರೂ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.