ತಿ.ನರಸೀಪುರ: ತಾಲ್ಲೂಕಿನ ಮೂಗೂರು ಕ್ರಾಸ್ ಬಳಿ ಗುರುವಾರ ಚಲಿಸುತ್ತಿದ್ದ ಮಾರುತಿ ಒಮಿನಿ ಕಾರು ಚಾಲಕನ ನಿಯಂತ್ರಣ ತಪ್ಪಿ, ರಸ್ತೆ ಬದಿಯ ಹಳ್ಳಕ್ಕೆ ಉರುಳಿ ಬಿದ್ದು, ಕಾರಿನಲ್ಲಿದ್ದ ಯುವತಿ ಮೃತಪಟ್ಟು, ಮೂವರು ಮಕ್ಕಳು ಸೇರಿದಂತೆ ಎಂಟು ಮಂದಿ ಗಾಯಗೊಂಡಿದ್ದಾರೆ.
ಮೈಸೂರಿನ ಪಡುವಾರಹಳ್ಳಿಯ ನಿವಾಸಿ ಸ್ವಾಮಿ ಎಂಬುವರ ಪುತ್ರಿ ಬಿಂದು ಅಲಿಯಾಸ್ ಅಮ್ಮು(21) ಮೃತಪಟ್ಟಾಕೆ.
ಅಪಘಾತದಲ್ಲಿ ಬಿಂದುವಿನ ತಾಯಿ ಸುಶೀಲಮ್ಮ, ಶ್ರೀನಿವಾಸ್ ಎಂಬುವರ ಪತ್ನಿ ಸುಂದರಮ್ಮ, ವೆಂಕಟೇಶ್ ಎಂಬುವರ ಪುತ್ರಿ ಯೋಗಿತಾ, ಕಾರಿನ ಚಾಲಕ ನರಸಿಂಹ, ಇವರ ಪತ್ನಿ ಶ್ವೇತಾ, ಮಕ್ಕಳಾದ ರಮ್ಯಾ, ಮನೋಜ್ ಹಾಗೂ ತ್ರಿವೇಣಿ ಗಾಯಗೊಂಡಿದ್ದು, ಮೈಸೂರಿನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.
ಪಡುವಾರಹಳ್ಳಿಯ ನಿವಾಸಿಗಳಾದ ಇವರು ಬುಧವಾರ ಮಲೆಮಹದೇಶ್ವರ ಬೆಟ್ಟಕ್ಕೆ ಕಾರಿನಲ್ಲಿ ತೆರಳಿ, ಗುರುವಾರ ಮೈಸೂರಿಗೆ ಮರಳುತ್ತಿದ್ದಾಗ ಈ ಅಪಘಾತ ನಡೆದಿದೆ ಎಂದು ತಿ.ನರಸೀಪುರ ಪೊಲೀಸರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.