ಮೈಸೂರು: ಶಾಲಾ ವಾರ್ಷಿಕೋತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಲೆಂದು ಹೋಗುತ್ತಿದ್ದ 6 ವರ್ಷದ ಬಾಲಕಿ ಸೇರಿದಂತೆ ಜಿಲ್ಲೆಯಲ್ಲಿ ಶುಕ್ರವಾರ ನಡೆದ ಪ್ರತ್ಯೇಕ ಅಪಘಾತಗಳಲ್ಲಿ ಮೂವರು ಮೃತಪಟ್ಟಿದ್ದಾರೆ.
ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿ ಸಮೀಪದ ಯಡಹಳ್ಳಿಯ ಗಾನವಿ (6) ತನ್ನ ಶಾಲೆಯಾದ ಜ್ಞಾನಸಂಜೀವಿನಿಯಲ್ಲಿ ಸಂಜೆ ನಡೆಯುತ್ತಿದ್ದ ವಾರ್ಷಿಕೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗಿಯಾಗಳು ಸಿಂಗರಿಸಿಕೊಂಡು ಪೋಷಕರೊಂದಿಗೆ ಬೈಕ್ನಲ್ಲಿ ಹೋಗುತ್ತಿದ್ಳು. ಈ ವೇಳೆ ವಾಹನವೊಂದು ಡಿಕ್ಕಿ ಹೊಡೆದು ಮೃತಪಟ್ಟಿದ್ದಾಳೆ. ತಾಯಿ ಪುಟ್ಟಮ್ಮ ಹಾಗೂ ಸೋದರ ಸಂಬಂಧಿ ಮಹೇಂದ್ರ ಗಾಯಗೊಂಡಿದ್ದಾರೆ.
ಇವರು ಬೈಕ್ನಲ್ಲಿ ತೆರಳುತ್ತಿದ್ದಾಗ ವಾಹನವೊಂದು ಡಿಕ್ಕಿ ಹೊಡೆದು ನಿಲ್ಲಿಸದೇ ಪರಾರಿಯಾಗಿದೆ. ಸ್ಥಳದಲ್ಲೇ ಬಾಲಕಿ ಮೃತಪಟ್ಟಳು ಎಂದು ಪೊಲೀಸರು ತಿಳಿಸಿದ್ದಾರೆ. ಪೋಷಕರ ಆಕ್ರಂದನ ಮುಗಿಲು ಮುಟ್ಟಿತು. ಶಾಲೆಯಲ್ಲಿ ಶೋಕ ಮಡುಗಟ್ಟಿತ್ತು.
ಸರಣಿ ಅಪಘಾತ ಸಾವು
ಇಲ್ಲಿನ ಜಿಆರ್ಎಸ್ ಫ್ಯಾಂಟಸಿ ಉದ್ಯಾನದ ಬಳಿ ಶುಕ್ರವಾರ ಕಾರು, ಎರಡು ಬೈಕ್ ಹಾಗೂ ಟಿಪ್ಪರ್ ನಡುವೆ ಸಂಭವಿಸಿದ ಸರಣಿ ಅಪಘಾತದಲ್ಲಿ ಬೆಲವತ್ತ ಗ್ರಾಮದ ಪ್ರಜ್ವಲ್ (21) ಮೃತಪಟ್ಟಿದ್ದಾರೆ.
ಬೈಕ್ವೊಂದಕ್ಕೆ ಕಾರು ಡಿಕ್ಕಿ ಹೊಡೆದು ನಿಂತಿದೆ. ಇದರ ಹಿಂದೆ ಬೈಕ್ನಲ್ಲಿ ಬರುತ್ತಿದ್ದ ಪ್ರಜ್ವಲ್ ಕಾರಿಗೆ ಡಿಕ್ಕಿ ಹೊಡೆದು ನೆಲಕ್ಕುರುಳಿದ್ದಾರೆ. ಇವರ ಮೇಲೆ ಹಿಂದಿನಿಂದ ಬಂದ ಟಿಪ್ಪರ್ ಹರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಂಜನಗೂಡು ರಸ್ತೆಯ ಟೋಲ್ಗೇಟ್ ಸಮೀಪ ಗುರುವಾರ ರಾತ್ರಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಗುಂಡ್ಲುಪೇಟೆ ತಾಲ್ಲೂಕಿನ ಚನ್ನ ಒಡೆಯನಪುರ ಗ್ರಾಮದ ನಿವಾಸಿ ಮಹಾದೇವಸ್ವಾಮಿ ಅವರಿಗೆ ಸರಕು ಸಾಗಣೆ ವಾಹನವೊಂದು ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.