ಪ್ರಜಾವಾಣಿ ವಾರ್ತೆ
ಹುಣಸೂರು: ಸ್ನೇಹಿತರ ವಿವಾಹಕ್ಕೆ ದ್ವಿಚಕ್ರ ವಾಹನದಲ್ಲಿ ತೆರಳಿ ಹಿಂದಿರುಗುವಾಗ ರಸ್ತೆ ಅಪಘಾತದಲ್ಲಿ ಕೆ.ಎಸ್.ಆರ್.ಪಿ. ಬೆಂಗಳೂರು ಬೆಟಾಲಿಯನ್ 4ರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕಾನ್ಸ್ಟೆಬಲ್ ಸಾಗರ್ (31) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಘಟನೆ ವಿವರ: ತಾಲ್ಲೂಕಿನ ಕಟ್ಟೆಮಳಲವಾಡಿ ಗ್ರಾಮದ ನಿವಾಸಿ ಸಾಗರ್ ತನ್ನ ಸ್ನೇಹಿತ ಸುನಿಲ್ ವಿವಾಹಕ್ಕೆ ಮಾಕೋಡು ಗ್ರಾಮಕ್ಕೆ ದ್ವಿಚಕ್ರ ವಾಹನದಲ್ಲಿ ತೆರಳಿ ಗುರುವಾರ ಮಧ್ಯರಾತ್ರಿ 12ರಿಂದ 1 ಗಂಟೆ ಸಮಯದಲ್ಲಿ ಸ್ವಗ್ರಾಮಕ್ಕೆ ಹಿಂದಿರುಗುತ್ತಿದ್ದ ಸಮಯದಲ್ಲಿ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರಕ್ಕೆ ಅಪ್ಪಳಿಸಿ ತೀವ್ರವಾಗಿ ಗಾಯಗೊಂಡಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಎರಡು ದಿನದ ಹಿಂದೆ ಬಿದ್ದ ಭಾರಿ ಗಾಳಿ ಮತ್ತು ಮಳೆಗೆ ರಸ್ತೆ ಅಂಚಿನ ಮರ ಬಿದ್ದಿದ್ದು, ತೆರವುಗೊಳಿಸುವಂತೆ ಲೋಕೋಪಯೋಗಿ ಇಲಾಖೆಗೆ ತಿಳಿಸಲಾಗಿತ್ತು. ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರಿಂದ ಅವಘಡವಾಗಿದೆ’ ಎಂದು ಗ್ರಾಮದ ಶಂಕರ್ ತಿಳಿಸಿದ್ದಾರೆ.
ಈ ಕುರಿತು ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಗಣ್ಯರು ಮತ್ತು ಸಹೋದ್ಯೋಗಿ ಮಿತ್ರರು ಅಂತಿಮ ದರ್ಶನ ಪಡೆದರು. ಗುರುವಾರ ಗ್ರಾಮದ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.