ನಂಜನಗೂಡು: ತಾಲ್ಲೂಕಿನ ಕವಲಂದೆ ಗ್ರಾಮದ ಬಳಿ ಶುಕ್ರವಾರ ಸರಕು ಸಾಗಣೆ ವಾಹನ ಚಾಲಕನ ನಿಯಂತ್ರಣ ತಪ್ಪಿ, ಪಲ್ಟಿ ಹೊಡೆದು ಚಲಿಸುತ್ತಿದ್ದ ಟಿ.ವಿ.ಎಸ್. ಮೊಪೆಡ್ ಮೇಲೆ ಬಿದ್ದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ತಾಲ್ಲೂಕಿನ ನೇರಳೆ ಗ್ರಾಮದ ಮಹದೇವನಾಯಕರ ಮಗ ಮಹೇಶ (17) ಹಾಗೂ ಈತನ ಚಿಕ್ಕಮ್ಮ ಜವರನಾಯ್ಕರ ಪತ್ನಿ ಮಂಜುಳಾ (31) ಮೃತಪಟ್ಟವರು.
ನೋಟ್ ಪುಸ್ತಕಗಳನ್ನು ತುಂಬಿಕೊಂಡು ಮೈಸೂರಿನಿಂದ ಚಾಮರಾಜನಗರದ ಕಡೆಗೆ ಹೋಗುತ್ತಿದ್ದ ಸರಕು ಸಾಗಣೆ ವಾಹನ, ಕವಲಂದೆ ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆಯಿತು. ಇದೇ ಸಂದರ್ಭ ರಸ್ತೆಯಲ್ಲಿ ಎದುರಿಗೆ ನೇರಳೆ ಗ್ರಾಮದಿಂದ ನಂಜನಗೂಡಿಗೆ ಬರುತ್ತಿದ್ದ ಟಿ.ವಿ.ಎಸ್ ಮೊಪೆಡ್ ಮೇಲೆಯೇ ಈ ವಾಹನ ಬಿದ್ದಿದ್ದರಿಂದ ಚಿಕ್ಕಮ್ಮ–ಮಗ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ನಂಜನಗೂಡು ಸಂಚಾರ ಠಾಣೆಯ ಪೊಲೀಸರು ತಿಳಿಸಿದರು.
ಡಿವೈಎಸ್ಪಿ ಮಲ್ಲಿಕ್, ವೃತ್ತ ನಿರೀಕ್ಷಕ ಶೇಖರ್, ಸಂಚಾರ ಠಾಣೆ ಪಿ.ಎಸ್.ಐ ಶಿವಮ್ಮ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಾಹನ ಚಾಲಕ ಪ್ರತಾಪ್ನನ್ನು ವಶಕ್ಕೆ ಪಡೆದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.