ಮೈಸೂರು: ನಗರದ ಕುಂಬಾರಕೊಪ್ಪಲಿನ ಮೂರನೇ ಅಡ್ಡರಸ್ತೆಯಲ್ಲಿರುವ ಗುಂಡಪ್ಪ ಗೌಡ ಅವರ ಮನೆಯಲ್ಲಿ ನಿಲ್ಲಿಸಿದ್ದ ವಾಹನಗಳಿಗೆ ಬುಧವಾರ ಮುಂಜಾನೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಕಾರು ಹಾಗೂ ಸ್ಕೂಟರ್ಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ.
ತಿಂಗಳ ಹಿಂದೆಯಷ್ಟೇ ಖರೀದಿಸಿದ್ದ ಎಕ್ಸ್ಯುವಿ ಮಹೇಂದ್ರ ಕಾರು, ಎಲೆಕ್ಟ್ರಿಕ್ ಸ್ಕೂಟರ್, ಡಿಯೋ ಸ್ಕೂಟರ್ ಹಾಗೂ ಸೈಕಲ್ ಬೆಂಕಿಗೆ ಆಹುತಿಯಾಗಿದೆ. ಗುಂಡಪ್ಪ ಗೌಡ ಅವರ ಪತ್ನಿ ನಾಗಮ್ಮ, ಮಗ ನರೇಂದ್ರ, ಸೊಸೆ ಸೌಮ್ಯ, ಮೊಮ್ಮಕ್ಕಳಾದ ಐಶ್ವರ್ಯ ಮತ್ತು ಯಶಸ್ ಮನೆಯಲ್ಲಿ ಮಲಗಿದ್ದಾಗ ಘಟನೆ ನಡೆದಿದ್ದು, ನೆರೆಹೊರೆಯವರ ಕೂಗಿಗೆ ಎಚ್ಚೆತ್ತುಕೊಂಡು ಹೊರಬಂದಿದ್ದು ಯಾವುದೇ ಹಾನಿಯಾಗಿಲ್ಲ.
‘ಸುತ್ತಲಿನ ಮನೆಯವರೆಲ್ಲಾ ನೀರು ಹಾಕಿ ಬೆಂಕಿ ನಂದಿಸಲು ಯತ್ನಿಸಿದರು. ಆದರೆ ಅಗ್ನಿಶಾಮಕ ದಳಕ್ಕೆ ಕರೆಮಾಡಿದರೂ ಸ್ಪಂದಿಸಲಿಲ್ಲ. ಅವರು ತಡವಾಗಿ ಬಂದ ಕಾರಣ ಬೆಂಕಿಯು ಮನೆಗೂ ಹರಡಿ ಬಾಗಿಲು, ಕಿಟಕಿ, ಸೀಲಿಂಗ್ ಹಾಗೂ ಪೀಠೋಪಕರಣಕ್ಕೆ ಬೆಂಕಿ ಹತ್ತಿಕೊಂಡಿದೆ’ ಎಂದು ಗುಂಡಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು. ಮೇಟಗಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.