ಮೈಸೂರು: ‘ರಾಜ್ಯದ ಕಾನೂನು ಸುವ್ಯವಸ್ಥೆ ಹಾಗೂ ಆಡಳಿತ ಯಂತ್ರ ಸಂಪೂರ್ಣ ಹದಗೆಟ್ಟಿದೆ. ಸರ್ಕಾರಿ ಅಧಿಕಾರಿಗಳು ಶಾಸಕರ ಕೃಪಾ ಪೋಷಿತರಾಗಿದ್ದಾರೆ. ಶಾಸಕರು ಆಯಾ ಕ್ಷೇತ್ರದ ಮಾಲೀಕರಂತೆ ವರ್ತಿಸುತ್ತಿದ್ದಾರೆ’ ಎಂದು ವಿಧಾನ ಪರಿಷತ್ ಸದಸ್ಯ ಅಡಗೂರು ಎಚ್.ವಿಶ್ವನಾಥ್ ಟೀಕಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಅತ್ಯಾಚಾರ, ಕೊಲೆ ಪ್ರಕರಣಗಳು ಹೆಚ್ಚಾಗುತ್ತಿವೆ. ಇವೆಲ್ಲದ ಮಾಹಿತಿ ಸಿದ್ದರಾಮಯ್ಯ ಅವರಿಗೆ ಇದ್ದರೂ ಕೇಳುತ್ತಿಲ್ಲ. ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಮತ್ತು ಸ್ನೇಹಿತರು ವರ್ಗಾವಣೆ ದಂಧೆಯಲ್ಲಿ ತೊಡಗಿದ್ದಾರೆ. ಎಸಿಪಿ ಮೈಸೂರಿಗೆ ವರ್ಗಾವಣೆ ಮಾಡಿಸಿಕೊಳ್ಳಲು ₹ 1 ಕೋಟಿ, ಇನ್ಸ್ಪೆಕ್ಟರ್ ₹ 75 ಲಕ್ಷ ಹಾಗೂ ಸಬ್ ಇನ್ಸ್ಪೆಕ್ಟರ್ ₹ 50 ಲಕ್ಷ ಕೊಡಬೇಕಿದೆ’ ಎಂದು ಆರೋಪಿಸಿದರು.
ಹೈಕಮಾಂಡ್ ಸುಪ್ರೀಂ: ‘ಕಾಂಗ್ರೆಸ್ನಲ್ಲಿ ಹೈಕಮಾಂಡ್ ನಿರ್ಧಾರವೇ ಸುಪ್ರೀಂ. ಡಿ.ಕೆ.ಶಿವಕುಮಾರ್ ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ. ಸಿದ್ದರಾಮಯ್ಯ ಪಕ್ಷ ಕಟ್ಟದಿದ್ದರೂ ಅಧಿಕಾರ ಅನುಭವಿಸುತ್ತಿದ್ದಾರೆ. ಅವರು ಪಕ್ಷವನ್ನು ಸರ್ವನಾಶ ಮಾಡುತ್ತಿದ್ದಾರೆ. ನಾಯಕತ್ವ ಬದಲಾವಣೆಯನ್ನು ಅವರ ಹೈಕಮಾಂಡ್ ನಿರ್ಧರಿಸಲಿದೆ’ ಎಂದು ವಿಶ್ವನಾಥ್ ಹೇಳಿದರು.
‘ಮಡಿವಾಳರು ಶಾಸಕರಾಗಲು ಸಿದ್ದರಾಮಯ್ಯ ಬಿಟ್ಟಿಲ್ಲ. ತೋರಿಕೆಗೆ ವಿಭೂತಿ, ಕುಂಕುಮ ಹಾಕಿಕೊಂಡು ಹಿಂದೂ ಅನ್ನುತ್ತಿದ್ದಾರೆ. ಕಾಂತರಾಜು ಆಯೋಗದ ವರದಿಯನ್ನು ಅನುಮೋದಿಸಿ. ಬೂಟಾಟಿಕೆ ಮಾಡುವುದಲ್ಲ’ ಎಂದು ಹೇಳಿದ ಅವರು, ‘ಕೆ.ಆರ್.ನಗರದ ಶ್ರೀರಾಮ ಸಕ್ಕರೆ ಕಾರ್ಖಾನೆಗೆ ₹ 100 ಕೋಟಿ ನೀಡಿದ್ದರೆ, ಕಾರ್ಖಾನೆಯು ನಡೆಯುತ್ತಿತ್ತು. ಇಂಥ ಒಳ್ಳೆ ಕೆಲಸಗಳನ್ನು ಕಾಂಗ್ರೆಸ್ ಮಾಡುವುದಿಲ್ಲ’ ಎಂದು ಟೀಕಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.