ಮೈಸೂರು: ‘ರಮೇಶ ಜಾರಕಿಹೊಳಿ ಸಿ.ಡಿ ಪ್ರಕರಣದಲ್ಲಿ ಡಿ.ಕೆ.ಶಿವಕುಮಾರ್ ಅವರ ಹೆಸರನ್ನು ಯಾರು ಹೇಳಿದ್ದಾರೆ, ಅವರ ಹೆಸರನ್ನು ಅವರೇ ಏಕೆ ಮುಂದೆ ಬಿಟ್ಟುಕೊಂಡಿದ್ದಾರೆ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.
‘ಸಿ.ಡಿ ಪ್ರಕರಣದಲ್ಲಿ ಬಿಜೆಪಿಯವರು ನನ್ನ ಸಿಲುಕಿಸಲು ನೋಡಿದ್ದಾರೆ’ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಅವರೇ ಮಾಡಿದ್ದಾರೆ ಅಂತ ಯಾರಾದರೂ ಹೇಳಿದರೇ?. ಇದರ ಹಿಂದೆ ‘ಮಹಾನ್ ನಾಯಕನೊಬ್ಬ’ ಇದ್ದಾನೆ ಎಂದಷ್ಟೇ ಹೇಳಿದ್ದರು. ಆ ಮಹಾನ್ ನಾಯಕ ಇವರೇ ಅಂತ ಏಕೆ ಅಂದುಕೊಂಡುಬಿಟ್ರು? ಈ ರಾಜ್ಯದಲ್ಲಿ ಮಹಾನ್ ನಾಯಕರು ತುಂಬಾ ಜನ ಇದ್ದಾರೆ. ಬಿಜೆಪಿಯಲ್ಲೇ ಒಬ್ಬ ಮಹಾನ್ ನಾಯಕ ಬೆಳೆಯುತ್ತಿದ್ದಾರೆ’ ಎಂದು ಮಾಧ್ಯಮದವರಲ್ಲಿ ತಿಳಿಸಿದರು.
‘ಡಿ.ಕೆ.ಶಿವಕುಮಾರ್ ಬಹಳ ಪ್ರಬುದ್ಧ ರಾಜಕಾರಣಿ. ಅವರಿಗೆ ಇರುವಷ್ಟು ಅನುಭವ ನಮಗೂ ಇಲ್ಲ. ನಿನ್ನೆ ದುಡುಕಿ ಅವರ ಹೆಸರನ್ನು ಅವರೇ ಹೇಳಿದ್ದಾರೆ. ಯಾಕೆ ಈ ಪ್ರಕರಣದಲ್ಲಿ ಅವರ ಹೆಸರನ್ನು ಸಿಲುಕಿಸಿಕೊಳ್ಳಲು ಹೊರಟಿದ್ದಾರೋ ಗೊತ್ತಿಲ್ಲ’ ಎಂದರು.
ಸಂತ್ರಸ್ತೆಗೆ ರಕ್ಷಣೆ ಕೊಟ್ಟಿದ್ದಾರೆ: ಸಿ.ಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ಸಂತ್ರಸ್ತೆಯನ್ನು ಹುಡುಕಲು ಆಗದಿದ್ದರೂ, ಇದರ ಹಿಂದೆ ಇರುವವರು ಎಲ್ಲಾ ಬಗೆಯ ರಕ್ಷಣೆ ಕೊಟ್ಟಿದ್ದಾರೆ. ಆಕೆ ಸರ್ಕಾರಕ್ಕೆ ವಿಡಿಯೊ ರೆಕಾರ್ಡ್ ಕಳುಹಿಸಿದ್ದಾಳೆ. ಬೇರೆ ಯಾರಾದರೂ ರೆಕಾರ್ಡ್ ಮಾಡಿ ಕಳುಹಿಸಿದ್ದಾರೋ ಎಂಬುದು ತನಿಖೆಯಿಂದ ಹೊರ ಬರಬೇಕು. ರಕ್ಷಣೆಯನ್ನು ಸರ್ಕಾರ ಕೊಟ್ಟಿದೆಯೋ, ಸರ್ಕಾರದ ವಿರುದ್ಧ ಇರುವವರು ಕೊಟ್ಟಿದ್ದಾರೊ ಗೊತ್ತಿಲ್ಲ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.