ಮೈಸೂರು: ‘ಬಾಡೂಟ ಮಾಡಬೇಕಿದ್ದು, ಒಂದು ದಿನ ರಜೆ ಕೊಡಿ’ ಎಂದು ನಗರದ ಠಾಣೆಯೊಂದರ ಸಹಾಯಕ ಸಬ್ಇನ್ಸ್ಪೆಕ್ಟರ್ ಒಬ್ಬರು ಇಲ್ಲಿನ ದೇವರಾಜ ಉಪವಿಭಾಗದ ಎಸಿಪಿ ಅವರನ್ನು ಉದ್ದೇಶಿಸಿ ಬರೆದ ಪತ್ರವೊಂದು ವಾಟ್ಸ್ಆ್ಯಪ್ಗಳಲ್ಲಿ ಹರಿದಾಡುತ್ತಿದೆ.
‘ಲೋಕಸಭಾ ಚುನಾವಣೆ ಸಂಬಂಧ ಚೆಕ್ಪೋಸ್ಟ್ಗಳಲ್ಲಿ ಅವಿರತವಾಗಿ ಕರ್ತವ್ಯ ನಿರ್ವಹಿಸಿ ಆಯಾಸವಾಗಿದೆ. ನನಗೆ ರಕ್ತದೊತ್ತಡ, ಮಧುಮೇಹ ಸಮಸ್ಯೆ ಇದ್ದು, ವಿಶ್ರಾಂತಿ ಬೇಕು. ಮಾಂಸಾಹಾರ ಸೇವಿಸಿ ಹಲವು ದಿನಗಳಾಗಿವೆ. ಏಪ್ರಿಲ್ 21ರಂದು ಬಾಡೂಟ ಇದ್ದು, ಅದನ್ನು ಸೇವಿಸಲು ನನಗೆ ಅನುವು ಮಾಡಿಕೊಡಬೇಕು’ ಎಂದು ಅವರು ಪತ್ರದಲ್ಲಿ ಕೋರಿ ಸಹಿ ಮಾಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಅಧಿಕಾರಿಗಳು, ‘ಇದೊಂದು ತಮಾಷೆಯ ಪ್ರಸಂಗವಷ್ಟೇ. ರಜೆ ಬೇಕು ಎಂಬ ಅರ್ಜಿಯನ್ನು ಕಚೇರಿಯ ಸಿಬ್ಬಂದಿಯೊಬ್ಬರು ಹಾಸ್ಯಕ್ಕಾಗಿ ಟೈಪ್ ಮಾಡಿದ್ದರು. ಇದಕ್ಕೆ ಎಎಸ್ಐ ಸಹಿ ಹಾಕಿ ನಂತರ ಓದಿದ್ದಾರೆ. ಸದಾ ಬಿಗುವಿನಿಂದ ಕೂಡಿದ್ದ ಠಾಣೆಯಲ್ಲಿ ಇದರಿಂದ ಒಮ್ಮೆಲೆ ನಗೆಯ ಬುಗ್ಗೆ ಚಿಮ್ಮಿದೆ. ನಂತರ, ಆ ಪತ್ರವನ್ನು ಹರಿದು ಹಾಕಿ ಮತ್ತೊಂದು ಪತ್ರ ಟೈಪ್ ಮಾಡಿ ರಜೆ ಕೋರಿದ್ದಾರೆ. ಆದರೆ, ಈ ಪತ್ರವನ್ನೇ ಮೊಬೈಲ್ನಲ್ಲಿ ಸೆರೆ ಹಿಡಿದ ಸಿಬ್ಬಂದಿಯೊಬ್ಬರು ವಾಟ್ಸ್ಆ್ಯಪ್ನಲ್ಲಿ ತಮಾಷೆಗಾಗಿ ಹಂಚಿಕೊಂಡಿದ್ದಾರೆ’ ಎಂದು ಸ್ಪಷ್ಟಪಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.