ಹುಣಸೂರು: ಮೈಮೇಲೆ ದೇವರು ಬಂದಿದೆ ಎಂದು ಗೃಹಿಣಿಗೆ ಬೆತ್ತದಿಂದ ಹಿಗ್ಗಾಮುಗ್ಗ ಥಳಿಸಿ ಗಾಯಗೊಳಿಸಿದ ಘಟನೆ ತಾಲ್ಲೂಕಿನ ಕಿರಂಗೂರು ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದಿದೆ.
ಘಟನೆ ವಿವರ: ಗ್ರಾಮದ ಸಿದ್ದಯ್ಯ ಎಂಬುವವರ ಮನೆಯಲ್ಲಿ ಕಾರ್ತೀಕ ಮಾಸದ ಅಂಗವಾಗಿ ಭೈರವೇಶ್ವರ ದೇವರ ವಿಶೇಷ ಪೂಜೆ ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮಕ್ಕೆ ನಟರಾಜ್ ಮತ್ತು ಪತ್ನಿ ಪವಿತ್ರ ತೆರಳಿದ್ದರು. ಪೂಜಾ ಸಮಯದಲ್ಲಿ ಗುಡ್ಡಪ್ಪ ಶಿವಕುಮಾರ್ (ಪೂಜಾರಿ), ದೇವರು ಬಂದಿದೆ ಎಂದು ಕುಣಿಯಲಾರಂಭಿಸಿ ಆತನ ಕೈಯಲ್ಲಿದ್ದ ಬಿದಿರು ಕಡ್ಡಿಯಿಂದ ಹಿಗ್ಗಾಮುಗ್ಗ ಪವಿತ್ರಳಿಗೆ ಥಳಿಸಿದ್ದಾನೆ.
ತೀವ್ರ ಗಾಯಗೊಂಡ ಪವಿತ್ರರನ್ನು ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಮೌಢ್ಯ ಪ್ರತಿಬಂಧಕ ಕಾಯ್ದೆ ಅಡಿಯಲ್ಲಿ ಸೋಮವಾರ ಪ್ರಕರಣ ದಾಖಲಿಸಲಾಗಿದೆ.
ನಾಪತ್ತೆ: ಮಹಿಳೆಗೆ ಥಳಿಸಿದ ಗುಡ್ಡಪ್ಪ ಶಿವಕುಮಾರ್ ನಾಪತ್ತೆಯಾಗಿದ್ದು, ಈತನ ಹುಡುಕಾಟ ನಡೆದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.