ADVERTISEMENT

ಮೈಸೂರು: ಮನಸೂರೆಗೊಂಡ ದೇವಿ ಪದಗಳ ಗಾಯನ

ಕೆ.ಎಸ್.ಗಿರೀಶ್
Published 9 ಅಕ್ಟೋಬರ್ 2021, 6:11 IST
Last Updated 9 ಅಕ್ಟೋಬರ್ 2021, 6:11 IST
ಚಾಮುಂಡೇಶ್ವರಿ ದೇಗುಲದ ಮುಂಭಾಗವಿರುವ ಮಂಟಪದಲ್ಲಿ ಲಲಿತ ಪರಮೇಶ್ವರಿ ಭಜನಾ ಮಂಡಳಿಯ ಕಲಾವಿದರು ಗುರುವಾರ ದೇವಿಗೀತೆಗಳನ್ನು ಹಾಡಿದರು
ಚಾಮುಂಡೇಶ್ವರಿ ದೇಗುಲದ ಮುಂಭಾಗವಿರುವ ಮಂಟಪದಲ್ಲಿ ಲಲಿತ ಪರಮೇಶ್ವರಿ ಭಜನಾ ಮಂಡಳಿಯ ಕಲಾವಿದರು ಗುರುವಾರ ದೇವಿಗೀತೆಗಳನ್ನು ಹಾಡಿದರು   

ಮೈಸೂರು: ಚಾಮುಂಡಿಬೆಟ್ಟದಲ್ಲಿ ದಸರಾ ಮಹೋತ್ಸವಗುರುವಾರ ಒಂದೆಡೆ ಉದ್ಘಾಟನೆಗೊಳ್ಳುತ್ತಿದ್ದರೆ ಮತ್ತೊಂದೆಡೆ ಚಾಮುಂಡೇಶ್ವರಿ ದೇಗುಲದ ಮುಂಭಾಗವಿರುವ ಮಂಟಪದಲ್ಲಿ ದೇವಿಪದಗಳ ಗಾಯನ ಮನಸೂರೆಗೊಂಡಿತು.

ಲಲಿತ ಪರಮೇಶ್ವರಿ ಭಜನಾ ಮಂಡಳಿಯ ಕಲಾವಿದರು ದೇವಿಪದಗಳ ಗಾಯನವನ್ನು ಸುಮಾರು ಒಂದೂವರೆ ಗಂಟೆಗಳಷ್ಟು ಕಾಲ ಹಾಡಿದರು. ಒಟ್ಟು 20 ಮಂದಿಯ ತಂಡದಲ್ಲಿ 7 ಮಂದಿ ಗಾಯನ ಕಾರ್ಯಕ್ರಮದಲ್ಲಿ ಭಾಗಿಯಾದರು.

ದೇವಿದೇವಿ ತ್ರಿಪುರ ಸುಂದರಿ, ವಾಣಿ ಪರಮಕಲ್ಯಾಣ, ಸಿಂಹವಾಹಿನಿ ರುಂಡಮಾಲಿನಿ, ಪಾಯಿಮಾಂ ವರದೆ ಜಗದಂಬೆ, ಚಿಂತ್ಯಾಕೆ ಮಾಡುತಿ ಚಿನ್ಮಯನಿದ್ದಾನೆ... ಹೀಗೆ ನಿರರ್ಗಳವಾಗಿ ಹಲವು ಹಾಡುಗಳನ್ನು ಅವರು ಪ್ರಸ್ತುತಪಡಿಸಿದರು.

ADVERTISEMENT

ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಿದ್ದರಿಂದ ಬೆಟ್ಟದ ಬಹುತೇಕ ಗ್ರಾಮಸ್ಥರು ದೇಗುಲದಲ್ಲಿ ದೇವರ ದರ್ಶನಕ್ಕೆಂದು ಬಂದರು. ಬೇರೆ ದಿನಗಳಾದರೆ ಸಾರ್ವಜನಿಕರು ಅಧಿಕ ಸಂಖ್ಯೆಯಲ್ಲಿರುತ್ತಾರೆ ಎಂಬ ಕಾರಣಕ್ಕೆ ಬೆಟ್ಟದಲ್ಲಿರುವ ವ್ಯಾಪಾರಸ್ಥರೂ ದೇವರ ದರ್ಶನ ಪಡೆದರು. ಇವರೆಲ್ಲ ಮಂಟಪದಲ್ಲಿ ನಡೆಯುತ್ತಿದ್ದ ಗಾಯನವನ್ನು ಕೇಳುತ್ತ ಹಲವು ಹೊತ್ತು ನಿಂತರು.

ಗಾಯತ್ರಿದೇವಿ, ಸುವರ್ಣಾ, ಗೀತಾ, ಜಯಲಕ್ಷ್ಮೀ, ಸರಸ್ವತಿ, ರಾಜೇಶ್ವರಿ, ಗುಣಾಂಬ ದೇವಿಗೀತೆಗಳನ್ನು ಹಾಡಿದರು. ನಂತರ, ಗೌರಿಶಂಕರ ಭಜನಾ ಮಂಡಳಿಯವರು ಗಾಯನ ಮುಂದುವರಿಸಿದರು.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಲಲಿತ ಪರಮೇಶ್ವರಿ ಭಜನಾ ಮಂಡಳಿಯ ಅಧ್ಯಕ್ಷೆ ಗಾಯತ್ರಿದೇವಿ, ‘ನಾವು ಸುಮಾರು 15 ವರ್ಷಗಳಿಂದ ಭಜನಾ ಮಂಡಳಿಯನ್ನು ರಚಿಸಿಕೊಂಡು ನಿತ್ಯ ಟೀಚರ್ಸ್ ಬಡಾವಣೆಯ ಸುಬ್ರಹ್ಮಣ್ಯೇಶ್ವರ ದೇಗುಲದಲ್ಲಿ ಭಜನೆ ಮಾಡುತ್ತೇವೆ. ಈ ಬಾರಿ ದಸರೆಯ ಮೊದಲ ದಿನ ಚಾಮುಂಡೇಶ್ವರಿ ದೇಗುಲದ ಎದುರಿನ ಮಂಟಪದಲ್ಲಿ ದೇವಿಗೀತೆಗಳನ್ನು ಹಾಡಿದ್ದು, ಸಾರ್ಥಕ ಎನಿಸಿತು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.