ಸಾಲಿಗ್ರಾಮ: ಪಟ್ಟಣದ ಹೊರವಲಯದಲ್ಲಿ ಇರುವ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ (ಐಟಿಐ ಕಾಲೇಜು) ಮುಖ್ಯದ್ವಾರದಲ್ಲಿ ಇದ್ದ ಹೆಬ್ಬಾವಿನ ಮರಿಯೊಂದನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೋಮವಾರ ಹಿಡಿದುಕೊಂಡು ಹೋದರು.
ಸೋಮವಾರ ಕಾಲೇಜಿಗೆ ವಿದ್ಯಾರ್ಥಿಗಳು ಬಂದಾಗ ಹಾವಿನ ಮರಿ ಬಿದ್ದುಕೊಂಡಿತ್ತು. ಈ ವಿಷಯವನ್ನು ವಿದ್ಯಾರ್ಥಿಗಳು ಸಂಸ್ಥೆಯ ತರಬೇತಿದಾರ ಬಿ.ರಘು ಅವರಿಗೆ ತಿಳಿಸಿದ್ದಾರೆ. ಅವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು.
ಅರಣ್ಯ ಇಲಾಖೆ ಸಿಬ್ಬಂದಿ ರಾಕೇಶ್ ಸ್ಥಳಕ್ಕೆ ಬಂದು ಪ್ಲಾಸ್ಟಿಕ್ ಡಬ್ಬದಲ್ಲಿ ಮರಿಯನ್ನು ಹಾಕಿದರು. ನಂತರ ಕಾಲೇಜಿನ ಸುತ್ತಲಿನ ಮರಗಳನ್ನು ಗಮನಿಸಿದರು. ಅಲ್ಲದೆ ಕಾಲೇಜಿನ ಆವರಣದಲ್ಲಿ ಇರುವ ಹಳ್ಳಗಳನ್ನು ಪರಿಶೀಲಿಸಿದರೂ ಹೆಬ್ಬಾವಿನ ಸುಳಿವು ಸಿಗಲಿಲ್ಲ.
‘ಪದೇ ಪದೇ ಹೆಬ್ಬಾವಿನ ಮರಿಗಳು ಕಾಲೇಜು ಆವರಣದಲ್ಲಿ ಕಾಣಿಸಿಕೊಳ್ಳುತ್ತಿರುವುದನ್ನು ನೋಡಿದರೆ ಇಲ್ಲಿ ಹೆಬ್ಬಾವು ಇರುವುದು ಖಾತ್ರಿಯಾಗಿದೆ’ ಎಂದು ಕಾಲೇಜಿನ ವಿದ್ಯಾರ್ಥಿಯೊಬ್ಬರು ಆತಂಕ ವ್ಯಕ್ತಪಡಿಸಿದನು.
‘ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳು ಜೋಪಾನವಾಗಿ ಓಡಾಡಬೇಕು ಅಲ್ಲದೆ ವಿಷ ಜಂತುಗಳು ಕಂಡ ತಕ್ಷಣ ಮಾಹಿತಿ ನೀಡಬೇಕು ಎಂದು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಗಿದೆ. ಹೆಬ್ಬಾವಿನ ಮರಿಗಳು ಪತ್ತೆಯಾಗುತ್ತಿದ್ದಂತೆ ನಾವುಗಳೇ ರಕ್ಷಣೆ ಮಾಡಿ ಅರಣ್ಯ ಇಲಾಖೆಗೆ ಮಾಹಿತಿ ನೀಡುತ್ತಿದ್ದೇವೆ ಹಾಗೊಂದು ವೇಳೆ ಹೆಬ್ಬಾವು ಕಾಣಿಸಿ ಕೊಂಡರೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಯಾವುದೇ ಅಪಾಯವಾಗದಂತೆ ಜಾಗರೂಕತೆಯಿಂದ ನಿರ್ವಹಣೆ ಮಾಡಲಾಗುತ್ತದೆ’ ಎಂದು ಸಂಸ್ಥೆ ತರಬೇತುದಾರ ಬಿ.ರಘು ಪ್ರಜಾವಾಣಿಗೆ ತಿಳಿಸಿದರು.
ಮೇಲಧಿಕಾರಿಗಳ ಸೂಚನೆಯಂತೆ ಹಾವಿನ ಮರಿಯನ್ನು ತೆಗೆದುಕೊಂಡು ಹೋಗುತ್ತಿದ್ದು, ಅವರ ಸೂಚನೆಯಂತೆ ಕಾಡಿಗೆ ಬಿಡಲಾಗುವುದು ಎಂದು ರಾಕೇಶ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.