ಮೈಸೂರು: ಸೂರ್ಯಾಸ್ತದ ವೇಳೆ ‘ಸುಬೇದಾರ್ ವೀರಣ್ಣ ಕೆರೆ’ ಅನ್ನು ನೋಡುವುದೇ ಹಬ್ಬ.
ತಾಲ್ಲೂಕಿನ ಕಳಲವಾಡಿ, ತಳೂರು ಹಾಗೂ ಸಿಂಧುವಳ್ಳಿ ಗ್ರಾಮದ ಗಡಿಗಳನ್ನು ಹಂಚಿಕೊಂಡಿರುವ ‘ಸುಬೇದಾರ್ ಕೆರೆ’ಗೆ ಶತಮಾನದ ಇತಿಹಾಸವಿದೆ.
ಕೆರೆ ಏರಿಯು 350 ಮೀಟರ್ ಉದ್ದವಿದ್ದು, ಅಲ್ಲಿಂದ ನಿಂತು ಪಶ್ಚಿಮದ ದಿಕ್ಕಿನತ್ತ ನೋಡಿದರೆ, ಸುಮಾರು 1 ಕಿ.ಮೀವರೆಗೂ ಜಲರಾಶಿಯು ಕಾಣುತ್ತದೆ. ಅಡಿಕೆ, ತೆಂಗು, ಬಾಳೆ ತೋಟಗಳು ಹಾಗೂ ಹಸಿರು ಹೊಲಗಳು ಕಣ್ತುಂಬುತ್ತವೆ.
ಕಳಲವಾಡಿ ಗ್ರಾಮದ ಸರ್ವೆ ಸಂಖ್ಯೆ 133ರಲ್ಲಿ 30.13 ಎಕರೆ, ಸಿಂಧುವಳ್ಳಿ ಗ್ರಾಮದ ಸರ್ವೆ ಸಂಖ್ಯೆ 154ರಲ್ಲಿ 9.13 ಎಕರೆ ಭೂಮಿ ಹೊಂದಿರುವ ಕೆರೆಯು, ತಳೂರು ಗ್ರಾಮ ವ್ಯಾಪ್ತಿಯ ಸರ್ವೆ ಸಂಖ್ಯೆ 77ರಲ್ಲಿ ಸುಮಾರು 10 ಎಕರೆಯಷ್ಟು ಕೆರೆ ಹಿನ್ನೀರು ಗೋಮಾಳವಿದೆ. ‘ದಿಶಾಂಕ್’ ಆ್ಯಪ್ನಲ್ಲಿ ವಿಸ್ತಾರವಾಗಿ ಕಾಣುವ ಕೆರೆ, ಸ್ಥಳಕ್ಕೆ ಭೇಟಿ ನೀಡಿ ವೀಕ್ಷಿಸಿದಾಗ ಅದರ ಅರ್ಧದಷ್ಟಿರುವುದು ಕಾಣುತ್ತದೆ. 30 ಎಕರೆ ಪ್ರದೇಶದಲ್ಲಿ ನೀರು ಸಂಗ್ರಹವಾಗುತ್ತಿದ್ದು, ವರ್ಷದ ಬಹುತೇಕ ತಿಂಗಳು ತುಂಬಿರುತ್ತದೆ.
‘50 ಎಕರೆಯಷ್ಟೂ ವಿಸ್ತೀರ್ಣವಿರುವ ಕೆರೆಯ ಅಂಚುಗಳಲ್ಲಿ ಒತ್ತುವರಿಯು ಎಗ್ಗಿಲ್ಲದೆ ನಡೆದಿದೆ. ಕೆಲ ಜಮೀನುಗಳ ಮಾಲೀಕರು ಒತ್ತುವರಿ ಮಾಡಿಕೊಂಡಿದ್ದಾರೆ. ವಿಸ್ತೀರ್ಣವು 30 ಎಕರೆಗೆ ಕುಗ್ಗಿದ್ದು, ಜಿಲ್ಲಾಡಳಿತ ಕೂಡಲೇ ಒತ್ತುವರಿ ತೆರವು ಮಾಡಲು ಕ್ರಮವಹಿಸಬೇಕಿದೆ’ ಎನ್ನುತ್ತಾರೆ ಸಿಂಧುವಳ್ಳಿ ಗ್ರಾಮದ ಮಲ್ಲೇಶ.
ತಳೂರು, ಉದ್ಬೂರು, ಸಿಂಧುವಳ್ಳಿ ಗ್ರಾಮಗಳಲ್ಲಿ ಹೊಸ ಬಡಾವಣೆಗಳು ಏಳುತ್ತಿದ್ದು, ಭೂಮಿಗೆ ಬೆಲೆಯೂ ಬಂದಿದೆ. ಸರ್ಕಾರಿ ಭೂಮಿಯನ್ನು ಒತ್ತುವರಿದಾರರಿಂದ ಉಳಿಸಬೇಕಿದೆ. ಕೆರೆಯ ಮುಂದಿನ ಜೌಗು ಭಾಗವು ‘ರಾಯನಕೆರೆ’ಗೂ ಹೊಂದಿಕೊಂಡಿದ್ದು, ಅದರ ರಕ್ಷಣೆಯೂ ಆಗಬೇಕಿದೆ.
ಕೆರೆಯಲ್ಲಿ ಸಿಹಿ ನೀರಿನ ಮೀನುಗಳು ಸಿಗುತ್ತಿದ್ದು, ಕೆಲವರು ಮೀನು ಕೃಷಿಯನ್ನೂ ನಡೆಸಿದ್ದಾರೆ. ಅದರಿಂದ ಸಿಂಧುವಳ್ಳಿ ಗ್ರಾಮ ಪಂಚಾಯಿತಿಗೆ ಆದಾಯವೂ ಬರುತ್ತಿದೆ. ಸುತ್ತಮುತ್ತಲ ಗ್ರಾಮಗಳಲ್ಲಿ ಜನ– ಜಾನುವಾರಿನ ನೀರಿನ ಮೂಲ ಇದಾಗಿದೆ. ಅಂತರ್ಜಲ ಹೆಚ್ಚಿಸುವಲ್ಲಿ ಈ ಕೆರೆಯ ಪಾತ್ರವೂ ನಿರ್ಣಾಯಕವಾಗಿದ್ದು, ಒತ್ತುವರಿದಾರರ ಸಂಕೋಲೆಯಿಂದ ಬಿಡಿಸಬೇಕಿದೆ.
ಬಾನಾಡಿಗಳ ವೈವಿಧ್ಯ: ಜನವರಿಯಿಂದ ಜೂನ್ 1ರವರೆಗೆ ಸುಮಾರು 72 ಜಾತಿಯ ಬಾನಾಡಿಗಳು ಇಲ್ಲಿ ಪಕ್ಷಿ ವೀಕ್ಷಕರಿಗೆ ಕಾಣ ಸಿಕ್ಕಿವೆ. ಇದುವರೆಗೂ 190 ಪ್ರಭೇದದ ಹಕ್ಕಿಗಳು ಇಲ್ಲಿ ಕಂಡಿವೆ.
‘ಚುಕ್ಕಿ ಬಾತು, ಬಣ್ಣದ ಕೊಕ್ಕರೆ, ವರಟೆ, ಜೇನುಹಿಡುಕ, ಕಳ್ಳೀಪೀರ, ಕೆಂಬೂತ, ನೀರುಕೋಳಿ, ಮರಳುಪೀಪಿಗಳು, ಟಿಟ್ಟಿಭ, ಹಿನ್ನೀರಿನಂಚಿನಲ್ಲಿರುವ ಕುರುಚಲು ಅರಣ್ಯದಲ್ಲಿ ನವಿಲು, ಗೌಜಲಕ್ಕಿ, ನೀಲಗಿರಿ ಕಾಡು ಪಾರಿವಾಳ ಸೇರಿದಂತೆ ಬಾನಾಡಿಗಳ ದಂಡೇ ಇಲ್ಲಿದೆ’ ಎನ್ನುತ್ತಾರೆ ಪಕ್ಷಿವೀಕ್ಷಕ ಸಮರ್ಥ.
ಕೆರೆ ಸುತ್ತಲೂ ತೆಂಗು, ಅಡಿಕೆ, ಬಾಳೆ ತೋಟಗಳು ಮೂರು ಗ್ರಾಮಗಳ ಜನ– ಜಾನುವಾರಿಗೆ ನೀರಿನ ಮೂಲ ಅಂತರ್ಜಲ ಹೆಚ್ಚಿಸುವ ಅತ್ಯಮೂಲ್ಯ ಕೆರೆ
‘ಕೆರೆ ಮಧ್ಯದಲ್ಲಿಯೇ ರಸ್ತೆ’
‘ಕೆರೆಯ ಪಶ್ಚಿಮ ಭಾಗದಲ್ಲಿ ತೋಟಕ್ಕೆ ಹೋಗಲು ಮಾಲೀಕರೊಬ್ಬರು ಕೆರೆ ಮೇಲೆಯೇ ರಸ್ತೆ ಮಾಡಿ ನಿಯಮ ಉಲ್ಲಂಘಿಸಿದ್ದಾರೆ. ಕೆರೆ ವಿಭಾಗಿಸಿ 60 ಎಕರೆಯಷ್ಟಿದ್ದ ಕೆರೆ 30 ಎಕರೆಗೆ ಕುಗ್ಗಿಸಲಾಗಿದೆ. ಅಳತೆ ಮಾಡಿ ಒತ್ತುವರಿಯನ್ನು ತೆರವುಗೊಳಿಸಿ ಊರ ಕೆರೆಯನ್ನು ಉಳಿಸಬೇಕು’ ಎಂದು ಕಳಲವಾಡಿಯ ನಾಗೇಶ ಆಗ್ರಹಿಸಿದರು. ‘ಚಿಕ್ಕಂದಿನಲ್ಲಿ ದನ ಮೇಯಿಸಲು ಬರುವಾಗ ವಿಶಾಲ ಬಯಲಿತ್ತು. ಜಾನುವಾರಿಗೂ ಮೇವು ಸಿಗುತ್ತಿತ್ತು. ಕೆರೆ ಹಾಗೂ ಗೋಮಾಳವನ್ನು ಈಗ ಒತ್ತುವರಿಯಾಗಿದೆ. ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.