ADVERTISEMENT

ಐಟಿಐಗಳಲ್ಲಿ ಸುಧಾರಣೆ: ಅಶ್ವತ್ಥನಾರಾಯಣ

​ಪ್ರಜಾವಾಣಿ ವಾರ್ತೆ
Published 25 ಜನವರಿ 2021, 14:45 IST
Last Updated 25 ಜನವರಿ 2021, 14:45 IST

ಮೈಸೂರು: ಈ ವರ್ಷ ದೂರಶಿಕ್ಷಣ ಕೋರ್ಸ್‌ಗಳಿಗೆ 17 ಸಾವಿರ ಮಂದಿ ನೋಂದಾಯಿಸಿಕೊಂಡಿದ್ದು, ಮುಂದಿನ ಎರಡು ವರ್ಷಗಳೊಳಗೆ 1 ಲಕ್ಷ ಮಂದಿಯನ್ನು ನೋಂದಾಯಿಸಿಕೊಳ್ಳುವ ಗುರಿ ತಲುಪಬೇಕಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಇಲ್ಲಿ ಹೇಳಿದರು.

ಐಟಿಐಗಳಲ್ಲಿ ನೂತನ ತಂತ್ರಜ್ಞಾನ ಅಳವಡಿಸಿಕೊಂಡು ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ₹4,500 ಕೋಟಿಯನ್ನು ಮಂಜೂರು ಮಾಡಿ ಟಾಟಾ ಟೆಕ್ನಾಲಜಿ ಜತೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಈ ಸಂಬಂಧ ₹ 700 ಕೋಟಿ ಹಣ ನೀಡಲಾಗಿದ್ದು, ಶೇ 78 ಹಣವನ್ನು ಟಾಟಾ ಟೆಕ್ನಾಲಜಿ ನೀಡುತ್ತಿದೆ. ರಾಜ್ಯದ 150 ಸರ್ಕಾರಿ ಐಟಿಐ ಕಾಲೇಜುಗಳನ್ನು ಅಭಿವೃದ್ಧಿ ಮಾಡಲಾಗುತ್ತದೆ ಎಂದು ತಿಳಿಸಿದರು.

ಅಲ್ಲಿನ ಸೌಲಭ್ಯಗಳನ್ನು ಎಲ್ಲ ಐಟಿಐ ವಿದ್ಯಾರ್ಥಿಗಳೂ ಬಳಕೆ ಮಾಡಿಕೊಳ್ಳುವಂತೆ ‘ಕಾಮನ್‌ ಫೆಸಿಲಿಟಿ ಸೆಂಟರ್‌’ ನಿರ್ಮಾಣ ಮಾಡಲಾಗುವುದು. ₹ 200 ಕೋಟಿ ಹೆಚ್ಚುವರಿ ವೆಚ್ಚದಲ್ಲಿ 7,500 ಚದರ ಅಡಿಯ ಸುಸಜ್ಜಿತ ವರ್ಕ್‌ಶಾಪ್‌ಗಳನ್ನು ಮುಂದಿನ 4 ತಿಂಗಳೊಳಗೆ ನಿರ್ಮಾಣ ಮಾಡಲಾಗುವುದು. 7 ತಿಂಗಳೊಳಗೆ 150 ಕೇಂದ್ರಗಳೂ ಪ್ರಾರಂಭವಾಗಲಿವೆ. 80 ಸಂಸ್ಥೆಗಳಿಗೆ ಹೆಚ್ಚುವರಿಯಾಗಿ 2,500 ಚದರ ಅಡಿಯ ವರ್ಕ್‌ಶಾಪ್‌ ನೀಡಲಾಗುವುದು. ಅಲ್ಲಿ ಸುಮಾರು 40 ಕಂಪನಿಗಳು ವಿದ್ಯಾರ್ಥಿಗಳಿಗೆ ತರಬೇತಿ ನೀಡಲಿವೆ ಎಂದರು.

ADVERTISEMENT

ಐಟಿಐನಲ್ಲಿರುವ ಹಲವು ಟ್ರೇಡ್‌ಗಳನ್ನು ಪರಿಷ್ಕರಿಸಿ ಪ್ರಸ್ತುತತೆ ಇಲ್ಲದ ಕೋರ್ಸ್‌ಗಳನ್ನು ಸ್ಥಗಿತಗೊಳಿಸಲಾಗುವುದು. ಅಗತ್ಯ ಇರುವ ಕೋರ್ಸ್‌ಗಳ ಪಠ್ಯಕ್ರಮವನ್ನು ಪರಿಷ್ಕರಿಸಲಾಗುವುದು. ಈ ಬಗ್ಗೆ ಅಧ್ಯಯನ ಮಾಡಿ ಸುಧಾರಣೆ ತರಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.