ADVERTISEMENT

ಮುಗಿಲು ಮುಟ್ಟಿದ ಸಂಭ್ರಮ

ಮುಗಿಬಿದ್ದ ಬಿಜೆಪಿ ಕಾರ್ಯಕರ್ತರು, ವಿಜಯೋತ್ಸವ ಆಚರಣೆ

​ಪ್ರಜಾವಾಣಿ ವಾರ್ತೆ
Published 23 ಮೇ 2019, 20:19 IST
Last Updated 23 ಮೇ 2019, 20:19 IST
ಲೋಕಸಭಾ ಚುನಾವಣೆಯಲ್ಲಿ ಸತತ 2ನೇ ಬಾರಿ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ ಪ್ರತಾಪ ಸಿಂಹ ಅವರನ್ನು ಕಾರ್ಯಕರ್ತರು ಹೆಗಲ ಮೇಲೆ ಎತ್ತಿಕೊಂಡು ಸಂಭ್ರಮಿಸಿದ್ದು ಹೀಗೆ...
ಲೋಕಸಭಾ ಚುನಾವಣೆಯಲ್ಲಿ ಸತತ 2ನೇ ಬಾರಿ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ ಪ್ರತಾಪ ಸಿಂಹ ಅವರನ್ನು ಕಾರ್ಯಕರ್ತರು ಹೆಗಲ ಮೇಲೆ ಎತ್ತಿಕೊಂಡು ಸಂಭ್ರಮಿಸಿದ್ದು ಹೀಗೆ...   

ಮೈಸೂರು: ಬಿಗಿ ಭದ್ರತೆ ಏರ್ಪಡಿಸಿದ್ದ ಲೋಕಸಭಾ ಚುನಾವಣೆಯ ಎಣಿಕೆ ಕೇಂದ್ರದ ಸಮೀಪ ಬಿಜೆಪಿ ಕಾರ್ಯಕರ್ತರು ಕುಣಿದು ಕುಪ್ಪಳಿಸಿದರು. ‘ಭಾರತ್‌ ಮಾತಾ ಕೀ ಜೈ’ ಎಂಬ ಜಯಘೋಷಗಳನ್ನು ಕೂಗುವ ಮೂಲಕ ಸಂಭ್ರಮಿಸಿದರು.

ಆರಂಭದಲ್ಲಿ ಯಾವೊಂದು ಪಕ್ಷದ ಕಾರ್ಯಕರ್ತರೂ ಎಣಿಕೆ ಕೇಂದ್ರದತ್ತ ಸುಳಿದಿರಲಿಲ್ಲ. ಯಾವಾಗ ಬಿಜೆಪಿ ಹೆಚ್ಚಿನ ಮತಗಳಿಂದ ಮುನ್ನಡೆ ಕಾಯ್ದುಕೊಂಡಿತೋ ಆಗ ಕಾರ್ಯಕರ್ತರು ಬರತೊಡಗಿದರು.

ಬಿಜೆಪಿ ಅಭ್ಯರ್ಥಿ ಪ್ರತಾಪಸಿಂಹ ಅವರನ್ನು ಹೆಗಲ ಮೇಲೆ ಎತ್ತಿಕೊಂಡು ಘೋಷಣೆಗಳನ್ನು ಕೂಗಿದರು. ಪ್ರತಾಪಸಿಂಹ ಅವರ ತಾಯಿ, ಪತ್ನಿ, ಪುತ್ರಿ ಈ ಸಂಭ್ರಮದಲ್ಲಿ ಭಾಗಿಯಾದರು.

ADVERTISEMENT

ಕೆಲವು ಕಾರ್ಯಕರ್ತರು ಸಿಹಿ ವಿತರಿಸಿದರೆ, ಮತ್ತೆ ಕೆಲವು ಕಾರ್ಯಕರ್ತರು ಬ್ಯಾಂಡ್‌ನ್ನು ಬಾರಿಸಿ ಸಂಭ್ರಮಿಸಿದರು. ಮತ್ತೆ ಹಲವರು ನರ್ತಿಸುವ ಮೂಲಕ ವಿಜಯೋತ್ಸವ ಆಚರಿಸಿದರು.

ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಶಾಸಕ ಎಲ್.ನಾಗೇಂದ್ರ, ‘ವಿದೇಶಗಳು ಈ ಚುನಾವಣೆಯ ಫಲಿತಾಂಶವನ್ನು ತುದಿಗಾಲಲ್ಲಿ ನಿಂತು ನೋಡುತ್ತಿದ್ದವು. ಈಗ ಉತ್ತರ ಸಿಕ್ಕಿದೆ. ನರೇಂದ್ರ ಮೋದಿ ಅವರ ಯೋಜನೆಗಳಿಗೆ ಅದ್ಭುತ ಜಯ ಸಿಕ್ಕಿದೆ’ ಎಂದು ಹೇಳಿದರು.

ಈ ವೇಳೆ ಪ್ರತಿಕ್ರಿಯಿಸಿದ, ಪ್ರತಾಪಸಿಂಹ ಅವರ ಪತ್ನಿ ಅರ್ಪಿತಾ, ‘ಗೆಲುವಿನ ನಿರೀಕ್ಷೆಯಲ್ಲಿದ್ದೆ. ಆದರೆ, ಇಂತಹ ದೊಡ್ಡ ಗೆಲುವನ್ನು ನಿರೀಕ್ಷಿಸಿರಲಿಲ್ಲ. ಇದಕ್ಕೆಲ್ಲ ಕಾರ್ಯಕರ್ತರು, ಮತದಾರರು ಕಾರಣ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.