ADVERTISEMENT

ಹನಿಟ್ರ್ಯಾಪ್‌ನಲ್ಲಿ ಬಿಜೆಪಿ ಮುಖಂಡ

₹ 31.30 ಲಕ್ಷ ಸುಲಿಗೆ ಮಾಡಿದ್ದ ಐವರ ಬಂಧನ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2020, 14:02 IST
Last Updated 20 ನವೆಂಬರ್ 2020, 14:02 IST
ನವೀನ್‌
ನವೀನ್‌   

ಮೈಸೂರು: ಹನಿಟ್ರ್ಯಾಪ್‌ ನಡೆಸಿ, ವೈದ್ಯನಿಂದ ಹಣ ಸುಲಿಗೆ ಮಾಡುತ್ತಿದ್ದ ಐವರನ್ನು ಬಂಧಿಸಿದ ಇಲ್ಲಿನ ಕುವೆಂಪು ನಗರದ ಪೊಲೀಸರು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ನವೀನ್‌ ನೇರಳೆಕುಪ್ಪೆ, ಶಿವರಾಜು, ಹರೀಶ್‌, ಅನಿತಾ, ವಿಜಿ ಬಂಧಿತ ಆರೋಪಿಗಳು.

ನವೀನ್‌ ನೇರಳೆಕುಪ್ಪೆ ಈ ಪ್ರಕರಣದ ಸೂತ್ರಧಾರ ಎಂಬುದು ತಿಳಿದು ಬಂದಿದೆ.

ADVERTISEMENT

ಈತ ಪಿರಿಯಾಪಟ್ಟಣ ತಾಲ್ಲೂಕು ಬಿಜೆಪಿ ಘಟಕದ ಯುವ ಮೋರ್ಚಾ ಪದಾಧಿಕಾರಿಯಾಗಿದ್ದ. ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಸೇರಿದಂತೆ ಹಲವು ಬಿಜೆಪಿ ಮುಖಂಡರ ಆಪ್ತನಾಗಿಯೂ ಗುರುತಿಸಿಕೊಂಡಿದ್ದ. ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷನಾಗಿಯೂ ಕಾರ್ಯ ನಿರ್ವಹಿಸುತ್ತಿದ್ದ ಎನ್ನಲಾಗಿದೆ. ಮತ್ತೊಬ್ಬ ಆರೋಪಿ ಹರೀಶ್‌ ಈ ಸಂಘಟನೆಯ ತಾಲ್ಲೂಕು ಘಟಕದ ಅಧ್ಯಕ್ಷ ಎಂಬುದು ಗೊತ್ತಾಗಿದೆ.

ಆರೋಪಿಗಳು ಪಿರಿಯಾಪಟ್ಟಣ ಬಿಜೆಪಿ ಮಂಡಲದ ಅಧ್ಯಕ್ಷ ಡಾ.ಕೆ.ಪ್ರಕಾಶ್‌ ಬಾಬುರಾವ್‌ನನ್ನು ಹನಿಟ್ರ್ಯಾಪ್‌ಗೆ ಬೀಳಿಸಿಕೊಂಡು, ₹ 31.30 ಲಕ್ಷ ಸುಲಿಗೆ ಮಾಡಿದ್ದಾರೆ. ಇನ್ನೂ ಹೆಚ್ಚಿನ ಮೊತ್ತಕ್ಕೆ ಬೇಡಿಕೆಯಿಟ್ಟಾಗ ಪ್ರಕಾಶ್‌ಬಾಬು ಮೈಸೂರಿನ ಕುವೆಂಪುನಗರ ಪೊಲೀಸರಿಗೆ ದೂರು ನೀಡಿದ್ದಾರೆ.

ಪ್ರಕಾಶ್‌ಬಾಬು ಮಹಿಳೆಯೊಬ್ಬರೊಂದಿಗೆ ಬೆಡ್‌ರೂಂನಲ್ಲಿರುವ ದೃಶ್ಯಾವಳಿಯ ವಿಡಿಯೊ ಕ್ಲಿಪ್ಪಿಂಗ್‌ ಇಟ್ಟುಕೊಂಡು ಆರೋಪಿಗಳು ಪದೇ ಪದೇ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದರು. ವೈದ್ಯರು ನೀಡಿದ ದೂರಿನನ್ವಯ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ ಎಂದು ಕುವೆಂಪುನಗರ ಪೊಲೀಸರು ತಿಳಿಸಿದರು.

ಈ ಆರೋಪಿಗಳ ತಂಡ ಹನಿಟ್ರ್ಯಾಪ್‌ ಜಾಲವನ್ನು ಹೊರ ಜಿಲ್ಲೆಗಳಲ್ಲೂ ನಡೆಸುತ್ತಿದೆ ಎಂಬುದು ಪೊಲೀಸರ ವಿಚಾರಣೆ ವೇಳೆ ಗೊತ್ತಾಗಿದೆ. ಈ ಜಾಲದಲ್ಲಿರುವ ಹಲವರ ಬಂಧನಕ್ಕೆ ಶೋಧ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.