ADVERTISEMENT

‘ಉಂಡ ಮನೆಗೆ ದ್ರೋಹ ಮಾಡುವ ವಿಶ್ವನಾಥ್’

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2023, 6:27 IST
Last Updated 20 ಮಾರ್ಚ್ 2023, 6:27 IST

ಮೈಸೂರು: ‘ಮಂತ್ರಿಯಾಗಿದ್ದಾಗ ಯಾವುದೇ ಸಾಧನೆ ಮಾಡದ ವಿಧಾನಪರಿಷತ್ತಿನ ಸದಸ್ಯ ಎ.ಎಚ್‌.ವಿಶ್ವನಾಥ್ ಅವರು ಉಂಡ ಮನೆಗೆ ದ್ರೋಹ ಮಾಡುವುದನ್ನಷ್ಟೇ ಕಲಿತಿದ್ದಾರೆ’ ಎಂದು ಬಿಜೆಪಿ ನಗರ ಘಟಕದ ವಕ್ತಾರ ಮೋಹನ್ ಆಕ್ರೋಶ ವ್ಯಕ್ತಪಡಿಸಿದರು.

ಇಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಿಶ್ವನಾಥ್‌ ಅರಣ್ಯ‌ ಸಚಿವರಾಗಿದ್ದಾಗ ಮೈಸೂರು ಸುತ್ತಮುತ್ತಲಿನ ಅರಣ್ಯವನ್ನು ಹೆಚ್ಚಿಸಲು ಏನಾದರೂ ಮಾಡಿದ್ದಾರೆಯೇ, ಶಿಕ್ಷಣ ಸಚಿವರಾಗಿದ್ದಾಗ ಶಿಕ್ಷಣ ಇಲ್ಲದ ವ್ಯಕ್ತಿಯಂತೆ ಪ್ರತಿ ದಿನ ರಗಳೆ ಮಾಡುತ್ತಲೇ ಕಾರ್ಯನಿರ್ವಹಿಸಿದ್ದರು. ವಿಮಾನ ನಿಲ್ದಾಣಕ್ಕೆ ಏನಾದರೂ ಕೊಡುಗೆ ಕೊಟ್ಟಿದ್ದಾರಾ. ಚರ್ಚೆಗೆ ಬರಲಿ’ ಎಂದು ಸವಾಲು ಹಾಕಿದರು.

‘ಮೂರು ಪಕ್ಷಗಳಲ್ಲೂ ಸುತ್ತಾಡಿರುವ ವಿಶ್ವನಾಥ್ ಅಧಿಕಾರ ಅನುಭವಿಸಿ, ತಮಗೆ ಮತ್ತು ಕುಟುಂಬಕ್ಕೆ ಬೇಕಾದಷ್ಟು ಮಾಡಿಕೊಂಡು, ಈಗ ನೆರೆ ಮನೆಯನ್ನು ಉದ್ಧಾರ ಮಾಡಲು ಹೊರಟಿದ್ದಾರೆ. ‘ಎಷ್ಟು ಮನೆ ಕಟ್ಟುತ್ತಿದ್ದೀಯಾಪ್ಪ ಪ್ರತಾಪ ಸಿಂಹ’ ಎಂದು ಪ‍್ರಶ್ನಿಸುವ ವಿಶ್ವನಾಥ್ ಅವರು ವಾರ್ಡ್‌ಗೊಂದು ಮನೆ ಕಟ್ಟಿಸಿಕೊಂಡಿದ್ದಾರೆ’ ಎಂದು ವ್ಯಂಗ್ಯವಾಡಿದರು.

ADVERTISEMENT

‘ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಏಕವಚನದಲ್ಲಿ ಮಾತನಾಡಿರುವ ವಿಶ್ವನಾಥ್ ಕ್ಷಮೆ ಯಾಚಿಸಲಿ’ ಎಂದರು.

ಪಕ್ಷದ ನಗರ ಘಟಕದ ಕಾರ್ಯದರ್ಶಿ ವಾಣೀಶ್ ಕುಮಾರ್, ಮಾಧ್ಯಮ ಸಂಚಾಲಕ ಮಹೇಶ್ ರಾಜೇ ಅರಸ್, ಮುಖಂಡರಾದ ಜಯಪ್ರಕಾಶ್, ಪ್ರದೀಪ್ ಕುಮಾರ್, ಕೇಬಲ್‌ ಮಹೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.