ADVERTISEMENT

ಹೈಕಮಾಂಡ್‌ ಹಿಡಿತದಲ್ಲಿ ಬೊಮ್ಮಾಯಿ: ಉಗ್ರಪ್ಪ ಟೀಕೆ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2021, 9:01 IST
Last Updated 3 ಆಗಸ್ಟ್ 2021, 9:01 IST
ವಿ.ಎಸ್‌.ಉಗ್ರಪ್ಪ
ವಿ.ಎಸ್‌.ಉಗ್ರಪ್ಪ   

ಮೈಸೂರು: ‘ತನ್ನ ಮಂತ್ರಿಮಂಡಲದಲ್ಲಿ ಯಾರೆಲ್ಲಾ ಇರಬೇಕು ಎಂಬುದನ್ನು ನಿರ್ಧರಿಸುವ ಸ್ವಾತಂತ್ರ್ಯವನ್ನೂ ಕಳೆದುಕೊಂಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ಹೈಕಮಾಂಡ್‌ನ ಬಿಗಿಹಿಡಿತಕ್ಕೆ ಸಿಲುಕಿ ಒದ್ದಾಡುತ್ತಿದ್ದಾರೆ’ ಎಂದು ಕೆಪಿಸಿಸಿ ವಕ್ತಾರ ವಿ.ಎಸ್‌.ಉಗ್ರಪ್ಪ ಲೇವಡಿ ಮಾಡಿದರು.

ಮೈಸೂರಿನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಮಂತ್ರಿಗಳ 2–3 ಪಟ್ಟಿಯನ್ನು ಹೈಕಮಾಂಡ್‌ಗೆ ಕೊಟ್ಟಿದ್ದು, ಅದರಲ್ಲಿ ಯಾವುದಕ್ಕೆ ಒಪ್ಪಿಗೆ ಸಿಗುವುದೋ ಗೊತ್ತಿಲ್ಲ ಎಂದು ಬೊಮ್ಮಾಯಿ ಹೇಳಿದ್ದಾರೆ. ಈ ವಿಚಾರದಲ್ಲಿ ನರೇಂದ್ರ ಮೋದಿ ಮತ್ತು ಅಮಿತ್‌ ಶಾ ಅವರ ಮಾತೇ ಅಂತಿಮ. ಕಾಂಗ್ರೆಸ್‌ನದ್ದು ಹೈಕಮಾಂಡ್‌ ಸಂಸ್ಕೃತಿ ಎಂದು ಮೂದಲಿಸುತ್ತಿದ್ದ ಬಿಜೆಪಿ ಮುಖಂಡರಿಗೆ ಈಗ ಒದಗಿರುವ ಪರಿಸ್ಥಿತಿಯಾದರೂ ಏನು’ ಎಂದು ಪ್ರಶ್ನಿಸಿದರು.

‘ಬಿಜೆಪಿ ರಾಷ್ಟ್ರೀಯ ನಾಯಕರಿಗೆ ಸಂವಿಧಾನ, ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿಶ್ವಾಸವಿಲ್ಲ. ಹೈಕಮಾಂಡ್‌ ಒಪ್ಪಿಗೆ ಕೇಳುವುದು ತಪ್ಪಲ್ಲ. ಆದರೆ ಒಬ್ಬ ಮುಖ್ಯಮಂತ್ರಿಗಿರುವ ಪರಮಾಧಿಕಾರದಂತೆ ಮಂತ್ರಿಮಂಡಲ ರಚನೆಗೆ ಅವಕಾಶ ನೀಡದಿರುವುದು, ಈ ರಾಜ್ಯದ 6.5 ಕೋಟಿ ಜನರಿಗೆ ಮಾಡಿರುವ ಅವಮಾನ’ ಎಂದು ದೂರಿದರು.

ADVERTISEMENT

‘ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿಯಿದ್ದರೂ, ಬಿಜೆಪಿ ಶಾಸಕರು ಅಧಿಕಾರದ ಹಿಂದೆ ಬಿದ್ದಿದ್ದಾರೆ. ಕೇಂದ್ರ ಸರ್ಕಾರವು ಪ್ರವಾಹದಿಂದ ಆಗಿರುವ ನಷ್ಟಕ್ಕೆ ಸೂಕ್ತ ಪರಿಹಾರ ನೀಡದೆ ಮಲತಾಯಿ ಧೋರಣೆ ಅನುಸರಿಸುತ್ತಿದೆ’ ಎಂದು ಕಿಡಿಕಾರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.