ಮೈಸೂರು: ‘ಲೂಟಿ ರವಿ’ ಎಂದು ತಮ್ಮ ವಿರುದ್ಧ ಅಕ್ರಮ ಆಸ್ತಿ ಸಂಪಾದನೆ ಆರೋಪ ಮಾಡಿರುವ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಅವರಿಗೆ ಬಿಜೆಪಿ ಶಾಸಕ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಲೀಗಲ್ ನೋಟಿಸ್ ನೀಡಿದ್ದಾರೆ.
‘ನೋಟಿಸ್ ತಲುಪಿದ 48 ಗಂಟೆಯೊಳಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸಿ ಆರೋಪಗಳನ್ನು ಹಿಂಪಡೆಯಬೇಕು, ಇಲ್ಲದಿದ್ದರೆ ಮಾನನಷ್ಟ ಮೊಕದ್ದಮೆ ಹೂಡಲಾಗುವುದು’ ಎಂದು ತಮ್ಮ ವಕೀಲರ ಮೂಲಕ ಜಾರಿ ಮಾಡಿರುವ ನೋಟಿಸ್ನಲ್ಲಿ ಎಚ್ಚರಿಕೆ ನೀಡಿದ್ದಾರೆ.
‘ಮೈಸೂರಿನಲ್ಲಿ ಲಕ್ಷ್ಮಣ ಪತ್ರಿಕಾಗೋಷ್ಠಿ ನಡೆಸಿ ಸುಳ್ಳು ಆರೋಪ ಮಾಡಿದ್ದಾರೆ. ಮಾನಹಾನಿ ಹೇಳಿಕೆ ನೀಡಿದ್ದಾರೆ. ಹಿಂದೆ 19 ಎಕರೆ ಜಮೀನು ಇತ್ತು. ಈಗ ಬೆಂಗಳೂರು, ಹಾಸನ, ಚಿಕ್ಕಮಗಳೂರು, ದೇವನಹಳ್ಳಿ, ಮೈಸೂರು ಹಾಗೂ ದೆಹಲಿಯಲ್ಲಿ ಅಪಾರ್ಟ್ಮೆಂಟ್, ನಿವೇಶನ, ಮನೆ ಹೊಂದಿದ್ದಾರೆ ಎಂಬುದಾಗಿ ಆಪಾದನೆ ಮಾಡಿದ್ದಾರೆ. ಸಂಬಂಧಿ ಸುದರ್ಶನ್ ಹೆಸರಿನಲ್ಲಿ ಸಿ.ಟಿ.ರವಿ 400ರಿಂದ 500ಎಕರೆ ಜಮೀನು ಹೊಂದಿದ್ದು, ಚಿಕ್ಕಮಗಳೂರು ಜಿಲ್ಲೆಗೆ ಸಂಬಂಧಿಸಿದ ಎಲ್ಲಾ ಗುತ್ತಿಗೆ ಕಾಮಗಾರಿಗಳು ಸುದರ್ಶನ್ ಪಾಲಾಗುತ್ತಿವೆ ಎಂಬ ಆರೋಪ ಮಾಡಿದ್ದಾರೆ. ₹ 360 ಕೋಟಿ ವೆಚ್ಚದಲ್ಲಿ ಚಿಕ್ಕಮಗಳೂರಿನಲ್ಲಿ ನಿರ್ಮಾಣವಾಗುತ್ತಿರುವ ವೈದ್ಯಕೀಯ ಕಾಲೇಜು ಹಾಗೂ ರಾಷ್ಟ್ರೀಯ ಹೆದ್ದಾರಿ–173 ಕಾಮಗಾರಿಯ ಗುತ್ತಿಗೆಯನ್ನೂ ಸುದರ್ಶನ್ ಅವರಿಗೆ ನೀಡಲಾಗಿದೆ ಎಂಬ ಸುಳ್ಳು ಆಪಾದನೆ ಮಾಡಿದ್ದಾರೆ. ಆದರೆ, ಇದಕ್ಕೆ ಸಂಬಂಧಿಸಿದ ಯಾವುದೇ ಪೂರಕ ದಾಖಲೆ ನೀಡಿಲ್ಲ. ಈ ಮೂಲಕ ಘನತೆಗೆ ಧಕ್ಕೆ ಉಂಟು ಮಾಡುತ್ತಿದ್ದಾರೆ’ ಎಂದು ನೋಟಿಸ್ನಲ್ಲಿ ಉಲ್ಲೇಖಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.