
ಮೈಸೂರು: ಹೊರವಲಯದ ಬೋಗಾದಿ ಪಟ್ಟಣ ಪಂಚಾಯಿತಿಯ 2024–25ನೇ ಸಾಲಿನ ₹7.69 ಲಕ್ಷ ಉಳಿತಾಯ ಬಜೆಟ್ ಅನ್ನು ಆಡಳಿತಾಧಿಕಾರಿಯೂ ಆಗಿರುವ ತಹಶೀಲ್ದಾರ್ ಕೆ.ಎಂ.ಮಹೇಶ್ ಕುಮಾರ್ ಮಂಡಿಸಿದರು.
ಪಟ್ಟಣ ಪಂಚಾಯಿತಿ ನಿರೀಕ್ಷಿತ ಅನುದಾನ ₹12.27 ಕೋಟಿ, ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ನಿರೀಕ್ಷಿತ ₹12.27 ಕೋಟಿ ಹೀಗೆ ಒಟ್ಟು ₹19.43 ಕೋಟಿಯನ್ನು ವಿವಿಧ ಕಾರ್ಯಕ್ರಮಗಳಿಗೆ ಹಂಚಲಾಗಿದೆ. ನಾಗರಿಕ ಸೌಕರ್ಯ, ಒಳಚರಂಡಿ ವ್ಯವಸ್ಥೆ, ಕಚೇರಿ ವೆಚ್ಚ, ಹೊರಗುತ್ತಿಗೆ ಕಾರ್ಯಾಚರಣೆ, ರಾಷ್ಟ್ರೀಯ ಹಬ್ಬ ಮತ್ತು ಕಾರ್ಯಕ್ರಮ, ಯುಜಿಡಿ ದುರಸ್ತಿ, ವೇತನ ಭತ್ಯೆ, ಜನಗಣತಿ ಹಾಗೂ ಸಾಮಾನ್ಯ ವೆಚ್ಚಕ್ಕಾಗಿ ₹5.51 ಕೋಟಿ ಮೀಸಲಿಡಲಾಗಿದೆ.
ಪರಿಶಿಷ್ಟ ಜಾತಿ, ಪಂಗಡಗಳ ಅಭಿವೃದ್ಧಿ ನಿಧಿ, ಅಂಗವಿಕಲರ ಕಲ್ಯಾಣ ನಿಧಿಗಾಗಿ ₹42 ಲಕ್ಷ, ವೇತನ ಭತ್ಯೆಗೆ ₹1.48 ಕೋಟಿ, ಬೀದಿ ದೀಪ ಮತ್ತು ನೀರು ಸರಬರಾಜು, ವಿದ್ಯುತ್ ಸ್ಥಾವರಗಳ ಬಿಲ್ ಪಾವತಿಗೆ ₹6.50 ಕೋಟಿ, ರಸ್ತೆ, ಚರಂಡಿ, ಯುಜಿಡಿ ನೀರು ಸರಬರಾಜು, ಪಾರ್ಕ್ ಅಭಿವೃದ್ಧಿ ಕಾಮಗಾರಿ, ಸ್ಮಶಾನ ಅಭಿವೃದ್ಧಿ, ಸಾರ್ವಜನಿಕ ಶೌಚಾಲಯ, ಪಾರ್ಕ್ ಮತ್ತು ಇತರ ಕಾಮಗಾರಿಗಳಿಗೆ ₹5.43 ಕೋಟಿ ಪಾವತಿಸಲು ಅಂದಾಜಿಸಲಾಗಿದೆ.
ಮುಖ್ಯಾಧಿಕಾರಿ ಬಸವರಾಜು, ಆರ್ಐ ಡಿ.ಎನ್.ವಿಜಯ್ ಕುಮಾರ್, ಸಹಾಯಕ ಎಂಜಿನಿಯರ್ ಹರ್ಷ, ಆರೋಗ್ಯ ಇನ್ಸ್ಪೆಕ್ಟರ್ ಪುನೀತ್ ಕುಮಾರ್, ಅಕೌಂಟೆಂಟ್ ಕೆ.ಎನ್.ಪ್ರಕಾಶ್ ಮತ್ತು ಕುಮಾರ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.