ADVERTISEMENT

ಸಾವರ್ಕರ್ ರಥಯಾತ್ರೆಗೆ ಬಿಎಸ್‌ವೈ ಚಾಲನೆ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2022, 7:45 IST
Last Updated 23 ಆಗಸ್ಟ್ 2022, 7:45 IST
ನಗರದ ಕೋಟೆ  ಆಂಜನೇಯ ದೇವಸ್ಥಾನದ ಬಳಿ ಸಾಹುಕಾರ್ ಪ್ರತಿಷ್ಠಾನ ಆಯೋಜಿಸಿದ 'ಸಾವರ್ಕರ್ ರಥಯಾತ್ರೆ'ಗೆ ಯಡಿಯೂರಪ್ಪ ಅವರು ಸಾವರ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಮುಖ್ಯ ಬಾರಿ ಸಚಿವ ಎಸ್ ಟಿ ಸೋಮಶೇಖರ್ ಹಾಗೂ ಸಚಿವ ನಾರಾಯಣಗೌಡರು ಇದ್ದರು. ಪ್ರಜಾವಾಣಿ ಚಿತ್ರ.
ನಗರದ ಕೋಟೆ ಆಂಜನೇಯ ದೇವಸ್ಥಾನದ ಬಳಿ ಸಾಹುಕಾರ್ ಪ್ರತಿಷ್ಠಾನ ಆಯೋಜಿಸಿದ 'ಸಾವರ್ಕರ್ ರಥಯಾತ್ರೆ'ಗೆ ಯಡಿಯೂರಪ್ಪ ಅವರು ಸಾವರ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಮುಖ್ಯ ಬಾರಿ ಸಚಿವ ಎಸ್ ಟಿ ಸೋಮಶೇಖರ್ ಹಾಗೂ ಸಚಿವ ನಾರಾಯಣಗೌಡರು ಇದ್ದರು. ಪ್ರಜಾವಾಣಿ ಚಿತ್ರ.   

ಮೈಸೂರು: ಅರಮನೆಯ ಕೋಟೆ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಮಂಗಳವಾರ ‘ಸಾವರ್ಕರ್‌ ರಥಯಾತ್ರೆ’ಗೆ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌.ಯಡಿಯೂರಪ್ಪ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, 'ಭಾರತ ವಿಶ್ವಗುರುವಾಗುವತ್ತ ದಾಪುಗಾಲಿಡುತ್ತಿದೆ. ಜೊತೆಗೆ ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ಈ ವೇಳೆ ಕೆಲವರು ದೇಶದ ಹೆಸರಿಗೆ ಮಸಿ ಬಳಿಯುವಲ್ಲಿ ನಿರತರಾಗಿದ್ದಾರೆ' ಎಂದು ಕಿಡಿಕಾರಿದರು.

'ಚಿಲ್ಲರೆ ರಾಜಕಾರಣಕ್ಕಾಗಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರ ಸಾವರ್ಕರ್ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಬ್ರಿಟಿಷರನ್ನು ನಡುಗಿಸಿದ ಸಾವರ್ಕರ್ ಅವರನ್ನು ವಿರೋಧಿಸುವವರು ಮೊದಲು ಬಸವಣ್ಣನವರ ವಚನಗಳನ್ನು ಓದಿಕೊಳ್ಳಲಿ' ಎಂದರು.

ADVERTISEMENT

'ಇವನಾರವ ಎನ್ನದೇ ಸಾವರ್ಕರ್ ನಮ್ಮವ ಎಂದು ಎಲ್ಲರೂ ಹೇಳಬೇಕು. ಸ್ವಾತಂತ್ರ್ಯ ಹೋರಾಟದೊಂದಿಗೆ ಹಿಂದೂಧರ್ಮದ ಸುಧಾರಣೆ, ರಕ್ಷಣೆಯಲ್ಲಿ ತೊಡಗಿಸಿಕೊಂಡಿದ್ದ ಅವರನ್ನು ಇಂದು ನೆನಪು ಮಾಡಿಕೊಳ್ಳಬೇಕಿದೆ. ಇಂದಿರಾಗಾಂಧಿ, ಸರ್ವಪಲ್ಲಿ ರಾಧಾಕೃಷ್ಞನ್ ಸೇರಿದಂತೆ ಮಹಾನ್ ನಾಯಕರೇ ಸಾವರ್ಕರ್ ಅವರನ್ನು ಹೊಗಳಿದ್ದಾರೆ. ವೀರ ಎಂದು ಕರೆದಿದ್ದಾರೆ' ಎಂದು ಸ್ಮರಿಸಿದರು.

'ಸಾವರ್ಕರ್ ವಿಚಾರ, ಮಾರ್ಗದರ್ಶನ ಭಾರತೀಯರಿಗೆ ದಾರಿದೀಪ.ಇಂದಿನ ಯುವಕರಿಗೆ ಅವರ ಅರಿವಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡು ಕೆಲವರು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಅವರ ಚಿಂತನೆಗಳನ್ನು ತಿಳಿಸುವ ಕೆಲಸ ಆಗಬೇಕಿದೆ' ಎಂದು ಕಾಂಗ್ರೆಸ್ ನಾಯಕರ ಹೆಸರು ಪ್ರಸ್ತಾಪಿಸದೇ ಟೀಕಿಸಿದರು.

'ಎಂಟು ದಿನಗಳ ರಥಯಾತ್ರೆಯು ಅಪ್ರತಿಮ ವೀರನ ಜೀವನ ಮೌಲ್ಯ, ದೇಶ ಪ್ರೇಮದ ಸಂದೇಶವನ್ನು ಸಾರಲಿದೆ. ದೇಶದ್ರೋಹಿಗಳಿಗೂ ಎಚ್ಚರಿಕೆ ನೀಡಲಿದೆ' ಎಂದು ಅಭಿಪ್ರಾಯಪಟ್ಟರು.

ಸಚಿವರಾದ ಕೆ.ಸಿ. ನಾರಾಯಣಗೌಡ, ಎಸ್.ಟಿ.ಸೋಮಶೇಖರ್, ಸಾರ್ವಕರ್ ಪ್ರತಿಷ್ಠಾನದ ಅಧ್ಯಕ್ಷೆ ಯಶಸ್ವಿನಿ, ರಥಯಾತ್ರೆ ಸಂಚಾಲಕ ರಜತ್‌,ಸಂಸದ ಪ್ರತಾಪಸಿಂಹ, ಶಾಸಕ ಎಲ್.ನಾಗೇಂದ್ರ, ಹರ್ಷವರ್ಧನ, ಬಿಜೆಪಿ ನಗರ ಘಟಕದ ಅಧ್ಯಕ್ಷ ಶ್ರೀವತ್ಸ, ನಿಗಮ ಮಂಡಳಿಗಳ ಅಧ್ಯಕ್ಷರಾದ ಎಸ್.ಮಹದೇವಯ್ಯ, ಎಂ.ಶಿವಕುಮಾರ್, ಪಾಲಿಕೆ ಸದಸ್ಯರಾದ ಶಿವಕುಮಾರ್, ಎಂ.ಯು.ಸುಬ್ಬಯ್ಯ, ಎಸ್.ಸಾತ್ವಿಕ್, ಬಿ.ವಿ.ಮಂಜುನಾಥ್, ಪ್ರಮೀಳಾಭರತ್,ಮೈಮುಲ್ ನಿರ್ದೇಶಕ ಬಿ.ಎನ್.ಸದಾನಂದ, ಮುಖಂಡರಾದ ಸಿ.ರಮೇಶ್, ಎಂ.ರಾಮಚಂದ್ರ, ನಾಗರಾಜ್ ಮಲ್ಲಾಡಿ, ಉಮೇಶ್, ಕೆ.ಸಿ.ಲೋಕೇಶ್ನಾಯಕ, ಎಂ.ಎಸ್.ಧನಂಜಯ, ಯು.ಎಸ್.ಶೇಖರ್, ಕಾ.ಪು.ಸಿದ್ದವೀರಪ್ಪ, ಶಿವರಾಮ್, ಎಂ.ಕೆ.ಶಂಕರ್, ಪರಮೇಶ್ ಗೌಡ ಇದ್ದರು.

ಮೂರು ಜಿಲ್ಲೆಗಳಲ್ಲಿ ಸಂಚಾರ: ವಿ.ಡಿ.ಸಾವರ್ಕರ್‌ ಅವರ ಸ್ವಾತಂತ್ರ್ಯ ಹೋರಾಟ, ತ್ಯಾಗ, ಬಲಿ ದಾನವನ್ನು ಜನರಿಗೆ ಪರಿಚಯಿಸಲು ರಥಯಾತ್ರೆಯು ಮೈಸೂರು, ಚಾಮರಾಜನಗರ, ಮಂಡ್ಯ ಜಿಲ್ಲೆಗಳಲ್ಲಿ ಸಂಚರಿಸಲಿದೆ.

23ರಂದು ನಗರದ ಟೆರಿಷಿಯನ್‌ ಕಾಲೇಜು ಮಾರ್ಗವಾಗಿ ಕ್ಯಾತಮಾರನಹಳ್ಳಿ, ತಿಲಕ್‌ ನಗರ, ಚಾಮುಂಡಿಪುರಂ, ವಿವೇಕಾನಂದ ನಗರ ಸೇರಿದಂತೆ ನರಸಿಂಹರಾಜ, ಚಾಮರಾಜ, ಚಾಮುಂಡೇಶ್ವರಿ ಕ್ಷೇತ್ರದ ವಿವಿಧೆಡೆ ರಥಯಾತ್ರೆ ಸಂಚರಿಸಲಿದೆ

24ರಂದು ಎಚ್‌.ಡಿ.ಕೋಟೆ, ಸರಗೂರು, 25, 26ರಂದು ನಂಜನಗೂಡು ಮೂಲಕ ಚಾಮರಾಜನಗರ ಜಿಲ್ಲೆ, 27ರಿಂದ 29ರವರೆಗೆ ಮಂಡ್ಯ ಜಿಲ್ಲೆಯಲ್ಲಿ ಯಾತ್ರೆ ನಡೆಯಲಿದೆ. ಮೈಸೂರಿನಲ್ಲಿ 30ರಂದು ಸಮಾರೋಪಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.