ADVERTISEMENT

ಆಶ್ರಮದ ಭೂಮಿಯಲ್ಲೇ ವಿವೇಕ ಸ್ಮಾರಕ ನಿರ್ಮಿಸಿ: ಪ್ರತಿಭಟನಕಾರರ ಆಗ್ರಹ

​ಪ್ರಜಾವಾಣಿ ವಾರ್ತೆ
Published 9 ಜುಲೈ 2021, 15:24 IST
Last Updated 9 ಜುಲೈ 2021, 15:24 IST
ಮೈಸೂರಿನ ಎನ್‌ಟಿಎಂ ಸರ್ಕಾರಿ ಶಾಲೆಯ ಮುಂಭಾಗ ಮಹಾರಾಣಿ ಮಾದರಿ (ಎನ್‌ಟಿಎಂ) ಶಾಲೆ ಉಳಿಸಿ ಹೋರಾಟ ಒಕ್ಕೂಟದ ಸದಸ್ಯರು ಶುಕ್ರವಾರವೂ ಪ್ರತಿಭಟಿಸಿದರು
ಮೈಸೂರಿನ ಎನ್‌ಟಿಎಂ ಸರ್ಕಾರಿ ಶಾಲೆಯ ಮುಂಭಾಗ ಮಹಾರಾಣಿ ಮಾದರಿ (ಎನ್‌ಟಿಎಂ) ಶಾಲೆ ಉಳಿಸಿ ಹೋರಾಟ ಒಕ್ಕೂಟದ ಸದಸ್ಯರು ಶುಕ್ರವಾರವೂ ಪ್ರತಿಭಟಿಸಿದರು   

ಮೈಸೂರು: ‘ಶಾಲೆಯೂ ಉಳಿಯಲಿ, ಸ್ಮಾರಕವೂ ಆಗಲಿ... ಶಾಲೆ ಕೆಡವಿ ಸ್ಮಾರಕ ನಿರ್ಮಿಸುವ ಸಂಚನ್ನು ಆಶ್ರಮ ಹಿಂಪಡೆಯಲಿ... ಆಶ್ರಮದ ವ್ಯಾಪ್ತಿಗೆ ಸೇರಿರುವ 60 ಎಕರೆ ಭೂಮಿಯಲ್ಲೇ ವಿವೇಕಾನಂದರ ಸ್ಮಾರಕ ನಿರ್ಮಿಸಲಿ...’

ಮಹಾರಾಣಿ ಮಾದರಿ (ಎನ್‌ಟಿಎಂ) ಶಾಲೆ ಉಳಿಸಿ ಒಕ್ಕೂಟದ ಪ್ರತಿಭಟನೆ ಶುಕ್ರವಾರವೂ ಮುಂದುವರೆಯಿತು. ಪ್ರತಿಭಟನಕಾರರು ಆಶ್ರಮದ ವಿರುದ್ಧ ಧಿಕ್ಕಾರದ ಘೋಷಣೆ ಮೊಳಗಿಸಿದರು. ಕನ್ನಡ ಅಧ್ಯಯನ ಸಂಸ್ಥೆ ಗೆಳೆಯರ ಬಳಗ ಪ್ರತಿಭಟನೆಯಲ್ಲಿ ಭಾಗವಹಿಸಿತ್ತು.

ಕನ್ನಡ ಅಧ್ಯಯನ ಸಂಸ್ಥೆ ಗೆಳೆಯರ ಬಳಗದ ಸಂಚಾಲಕ ಪಾ.ತಿ.ಕೃಷ್ಣೇಗೌಡ ಮಾತನಾಡಿ, ‘ಆಂಗ್ಲರ ಆಡಳಿತದಲ್ಲೇ ಕನ್ನಡ ಶಿಕ್ಷಣಕ್ಕೆ ಮಾನ್ಯತೆಯಿತ್ತು. 1831ರಲ್ಲಿ ವಾಲ್ಟರ್ ಎಂಬ ಆಂಗ್ಲ ಅಧಿಕಾರಿ ಧಾರವಾಡದಲ್ಲಿ ಕನ್ನಡ ಶಾಲೆ ತೆರೆಯುತ್ತಾನೆ. ಆ ಶಾಲೆ ಇಂದಿಗೂ ಕನ್ನಡ ಶಾಲೆಯಾಗಿಯೇ ಇದೆ. ಆಂಗ್ಲರಿಗೆ ಕನ್ನಡದ ಒಲವು ಇತ್ತೆಂದರೇ, ಕನ್ನಡನಾಡಿನಲ್ಲಿರುವವರಿಗೆ ಕನ್ನಡ ಶಾಲೆಯ ಮೇಲೆ ಏಕೆ ಒಲವಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

‘ಕನ್ನಡ ಶಾಲೆಯನ್ನು ಕೆಡವಿ, ಸ್ಮಾರಕ ನಿರ್ಮಿಸಿ ಎನ್ನುವವರು ಕನ್ನಡ ದ್ರೋಹಿಗಳು. ಇಂತಹವರು ಕ್ಷಮೆಗೆ ಆರ್ಹರಲ್ಲ. ಹಾ.ಮಾ.ನಾಯಕರಂತಹ ಕನ್ನಡಿಗರಿದ್ದರೆ, ಈ ಹೋರಾಟಕ್ಕಾಗಿ ಬೀದಿಗಿಳಿಯುತ್ತಿದ್ದರು’ ಎಂದರು.

ಶಾಲೆ ಉಳಿಸಿ ಒಕ್ಕೂಟದ ಸದಸ್ಯೆ ಯಮುನಾ ಮಾತನಾಡಿದರು. ಕನ್ನಡ ಅಧ್ಯಯನ ಸಂಸ್ಥೆ ಗೆಳೆಯರ ಬಳಗದ ಮೈಲಳ್ಳಿ ರೇವಣ್ಣ, ಕಮಲಮ್ಮ, ರಂಗನಾಥ್, ಶಿವಕುಮಾರ್, ಡಾ.ಪಿ.ಗೌರೀಶ್, ಗೋಪಿನಾಥ್, ಶ್ರೀನಿವಾಸ್, ನಿಂಗರಾಜು ಚಿತ್ತಣ್ಣನವರ ಪ್ರತಿಭಟನೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.