ಮೈಸೂರು: ‘ಮೈಸೂರು ಜಿಲ್ಲಾ ಸಹಕಾರ ಒಕ್ಕೂಟದ ಆಡಳಿತ ಮಂಡಳಿಯ ನಿರ್ದೇಶಕರ ಆಯ್ಕೆಯ ಚುನಾವಣೆಯನ್ನು ರದ್ದುಗೊಳಿಸಿ’ ಎಂದು ಕಾಂಗ್ರೆಸ್ ಮುಖಂಡ ಮೆಲ್ಲಹಳ್ಳಿ ಮಹದೇವಸ್ವಾಮಿ ಆಗ್ರಹಿಸಿದರು.
‘ರಾಜ್ಯದ ವಿವಿಧೆಡೆ ಈಗಾಗಲೇ ಚುನಾವಣೆ ಮುಂದೂಡಲಾಗಿದೆ. ಆದರೆ ಮೈಸೂರು ಜಿಲ್ಲೆಯಲ್ಲಿ ಮಾತ್ರ ಶಾಸಕ ಜಿ.ಟಿ.ದೇವೇಗೌಡ ಕುಮ್ಮಕ್ಕಿನಿಂದ ಚುನಾವಣೆ ನಡೆಸಲಾಗುತ್ತಿದೆ’ ಎಂದು ಮಂಗಳವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ದೂರಿದರು.
‘ಕೋವಿಡ್ ಹೆಚ್ಚುತ್ತಿರುವ ಆತಂಕದ ನಡುವೆಯೇ ಜುಲೈ 30ರಂದು ಚುನಾವಣೆ ನಡೆಸಲು ಸಿದ್ಧತೆ ನಡೆದಿವೆ. ಜಿ.ಟಿ.ದೇವೇಗೌಡರಿಗಾಗಿಯೇ ಈ ಚುನಾವಣೆ ನಡೆಸಲಾಗುತ್ತಿದೆ. ಸಹಕಾರ ಇಲಾಖೆಯ ಅಧಿಕಾರಿಗಳು ಇದರಲ್ಲಿ ಶಾಮೀಲಾಗಿದ್ದಾರೆ’ ಎಂದು ಆರೋಪಿಸಿದರು.
‘ಜಿಲ್ಲೆಯ ಬಹುತೇಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಇನ್ನೂ ಚುನಾಯಿತ ನಿರ್ದೇಶಕರ ಆಡಳಿತ ಮಂಡಳಿಯಿಲ್ಲ. ಮೊದಲು ಈ ಸೊಸೈಟಿಗಳಿಗೆ ಚುನಾವಣೆ ನಡೆಸಲಿ. ನಂತರ ಒಕ್ಕೂಟಕ್ಕೆ ಚುನಾವಣೆ ನಡೆಸಲಿ. ಇದೆಲ್ಲದಕ್ಕೂ ಮೊದಲು ಕೋವಿಡ್–19 ಮುಕ್ತವಾಗಲಿ. ಕೊರೊನಾ ವೈರಸ್ ಸೋಂಕು ಹಬ್ಬುತ್ತಿರುವ ನಡುವೆಯೇ ಚುನಾವಣೆ ನಡೆಸಿದರೆ, ನ್ಯಾಯಾಲಯದ ಮೊರೆ ಹೋಗಬೇಕಾಗುತ್ತದೆ’ ಎಂದು ಮಹದೇವಸ್ವಾಮಿ ಹೇಳಿದರು.
ಮೈಸೂರು ಪಿಇಎಆರ್ಡಿ ಅಧ್ಯಕ್ಷ ಡಿ.ಬಿ.ನಾಗರಾಜು, ರಾಘವ ಎಂ ಗೌಡ, ನಗರ್ಲೆ ಸರ್ವೇಶ್ ಪತ್ರಿಕಾಗೋಷ್ಠಿಯಲ್ಲಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.