ADVERTISEMENT

ಮೈಸೂರು | ಸಮೀಕ್ಷೆ ಆರಂಭ: ತೊಂದರೆ ಎದುರಿಸಿದ ಶಿಕ್ಷಕರು  

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2025, 5:41 IST
Last Updated 23 ಸೆಪ್ಟೆಂಬರ್ 2025, 5:41 IST
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆಗೆ ಕಿಟ್‌ಗಳನ್ನು ಶಿಕ್ಷಕರಿಗೆ ಸೋಮವಾರ ವಿತರಿಸಲಾಯಿತು
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆಗೆ ಕಿಟ್‌ಗಳನ್ನು ಶಿಕ್ಷಕರಿಗೆ ಸೋಮವಾರ ವಿತರಿಸಲಾಯಿತು   

ಮೈಸೂರು: ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆಯು ಸೋಮವಾರ ಜಿಲ್ಲೆಯಾದ್ಯಂತ ಆರಂಭವಾಗಿದ್ದು, ಬ್ಲಾಕ್‌ಗಳನ್ನು ರಚಿಸಿ, ಪ್ರತಿ ಶಿಕ್ಷಕರನ್ನು ಗಣತಿಗೆ ನಿಯೋಜಿಸಲಾಯಿತು. ಮೊದಲ ದಿನದ ಸಮೀಕ್ಷೆ ಗೊಂದಲದಿಂದ ಕೂಡಿತ್ತು. 

ಸಮೀಕ್ಷೆ ಮಾಡುವ ಗಣತಿದಾರರ ಪಟ್ಟಿಯು ಬೆಳಿಗ್ಗೆ 11.30ಕ್ಕೆ ಪ್ರಕಟಗೊಂಡಿದ್ದು, ಪ್ರತಿ ಶಿಕ್ಷಕರಿಗೆ 150 ಮನೆಗಳ ಸಮೀಕ್ಷೆ ವಹಿಸಲಾಗಿತ್ತು. ಕಿಟ್‌ ವಿತರಣೆ ಮಧ್ಯಾಹ್ನದವರೆಗೂ ನಡೆಯಿತು. ಕರ್ತವ್ಯ ನಿರ್ವಹಿಸುತ್ತಿರುವ ಗ್ರಾಮಗಳ ಬದಲು ಬೇರೆಡೆ ನಿಯೋಜಿಸಿರುವುದು, ನಗರದಲ್ಲಿನ ಸಮೀಕ್ಷೆ ನಡೆಸುವವರಿಗೆ 150 ಹಾಗೂ ಗ್ರಾಮೀಣ ಭಾಗದಲ್ಲಿ 250 ಮನೆ ನಿಗದಿ ಮಾಡಿರುವುದು ಶಿಕ್ಷಕರ ಆಕ್ಷೇಪಕ್ಕೂ ಕಾರಣವಾಯಿತು.

ನೆಟ್‌ವರ್ಕ್‌ ಸಮಸ್ಯೆ: ‘ಜಿಯೊಟ್ಯಾಗ್‌ ಆಧರಿಸಿ ಸಮೀಕ್ಷೆ ಮಾಡಲಾಗುವುದರಿಂದ ಅಪಾರ್ಟ್‌ಮೆಂಟ್‌ಗಳಲ್ಲಿ ಸಮೀಕ್ಷೆ ನಡೆಸುವುದಕ್ಕೆ ಕಷ್ಟವಾಯಿತು. ನೆಟ್‌ ವರ್ಕ್‌ ಸೇರಿದಂತೆ ಆ್ಯಪ್‌ನಲ್ಲಿ ತಾಂತ್ರಿಕ ಸಮಸ್ಯೆಯೂ ಕಾಣಿಸಿಕೊಂಡಿತ್ತು’ ಎಂದು ಪಿರಿಯಾಪಟ್ಟಣದ ಶಿಕ್ಷಕರೊಬ್ಬರು ತಿಳಿಸಿದರು.

ADVERTISEMENT

‘ಮತಗಟ್ಟೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುವ ಶಿಕ್ಷಕರನ್ನು ಗಣತಿ ಕಾರ್ಯದಿಂದ ಹಲವು ಜಿಲ್ಲೆಗಳಲ್ಲಿ ಕೈಬಿಟ್ಟಿದ್ದರೂ, ಜಿಲ್ಲೆಯಲ್ಲಿ ಮಾತ್ರ ಸಮೀಕ್ಷೆ ಮಾಡಲು ಶಿಕ್ಷಕರನ್ನು ನಿಯೋಜಿಸಲಾಗಿದೆ. ಇದೇ ತಿಂಗಳು ಮತಗಟ್ಟೆ ಅಧಿಕಾರಿಗಳಿಗೆ ಚುನಾವಣೆ ಆಯೋಗ ತರಬೇತಿ ನಡೆಯಲಿದೆ. ಹೀಗಾಗಿ ತೊಂದರೆ ಆಗಿದೆ’ ಎಂದು ಕೆ.ಆರ್.ನಗರದ ಶಿಕ್ಷಕರೊಬ್ಬರು ಹೇಳಿದರು.

‘ಸಮೀಕ್ಷೆಯು ಆರಂಭವಾಗಿದ್ದು, ಪ್ರತಿ ಮನೆಯ ಗಣತಿ ಪೂರ್ಣಗೊಳಿಸಲು ಸುಮಾರು 35 ನಿಮಿಷ ಆಗಲಿದೆ. ಡಿಜಿಟಲ್‌ ಗಣತಿ ಇದಾಗಿದೆ. ಜಿಯೊ ಲೊಕೇಶನ್‌ ಆಧರಿಸಿದ ಗಣತಿ ಆದ್ದರಿಂದ ಅಪಾರ್ಟ್‌ಮೆಂಟ್‌ಗಳಲ್ಲಿ ಗಣತಿ ಕಷ್ಟವಾಗಿದೆ. ಆ್ಯಪ್ ಬಳಕೆಯಲ್ಲಿನ ತೊಂದರೆ ನಿವಾರಣೆಗೆ ಕ್ರಮ ವಹಿಸಲಾಗಿದೆ’ ಎಂದು ಸಮಾಜಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ರಾಘವೇಂದ್ರ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.