ADVERTISEMENT

ಮೀಸಲಾತಿ ಹೆಚ್ಚಳಕ್ಕಾಗಿ ಸಮೀಕ್ಷೆ: ಡಾ.ಯತೀಂದ್ರ ಸಿದ್ದರಾಮಯ್ಯ

ವಿಧಾನಪರಿಷತ್‌ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 27 ಜುಲೈ 2025, 4:49 IST
Last Updated 27 ಜುಲೈ 2025, 4:49 IST
ಮೈಸೂರಿನ ಸೆನೆಟ್ ಭವನದಲ್ಲಿ ಶನಿವಾರ ನಡೆದ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಧಿಕಾರಿಗಳು ಹಾಗೂ ನೌಕರರ ಕಲ್ಯಾಣ ಸಂಘದ ಉದ್ಘಾಟನೆಯನ್ನು ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ನೆರವೇರಿಸಿದರು– ಪ್ರಜಾವಾಣಿ ಚಿತ್ರ
ಮೈಸೂರಿನ ಸೆನೆಟ್ ಭವನದಲ್ಲಿ ಶನಿವಾರ ನಡೆದ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಧಿಕಾರಿಗಳು ಹಾಗೂ ನೌಕರರ ಕಲ್ಯಾಣ ಸಂಘದ ಉದ್ಘಾಟನೆಯನ್ನು ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ನೆರವೇರಿಸಿದರು– ಪ್ರಜಾವಾಣಿ ಚಿತ್ರ   

ಮೈಸೂರು: ‘ಮೀಸಲಾತಿ ಪ್ರಮಾಣ ಹೆಚ್ಚಿಸುವುದಕ್ಕಾಗಿ ಜಾತಿವಾರು ಸಮೀಕ್ಷೆಗೆ ನಮ್ಮ ಸರ್ಕಾರ ಕ್ರಮ ಕೈಗೊಂಡಿದೆ’ ಎಂದು ವಿಧಾನಪರಿಷತ್‌ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.

ಇಲ್ಲಿನ ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ಶನಿವಾರ ನಡೆದ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಧಿಕಾರಿಗಳು ಹಾಗೂ ನೌಕರರ ಕಲ್ಯಾಣ ಸಂಘದ ಉದ್ಘಾಟನೆ ಹಾಗೂ ರಾಜ್ಯಮಟ್ಟದ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

‘ಈಗ ಶೇ.50ರಷ್ಟು ಇರುವ ಮೀಸಲಾತಿ ಹೆಚ್ಚಳ ಮಾಡಬೇಕಾಗಿದೆ. ಸಮಾಜದಲ್ಲಿ ಇಂದಿಗೂ ಜಾತಿ ವ್ಯವಸ್ಥೆ ಇದೆ. ಮೇಲು-ಕೀಳು ತಾರತಮ್ಯವಿದೆ. ನಮಗೆ ಎಲ್ಲವೂ ದೇವರಿಂದ ಸಿಕ್ಕಿದೆ ಎಂದು ಕೆಲ ವರ್ಗ ಹೇಳುತ್ತದೆ. ನಮ್ಮಿಂದಲೇ ಎಲ್ಲವೂ ಎನ್ನುವ ವರ್ಗವೂ ಇದೆ. ಶೋಷಿತರು ಹಕ್ಕುಗಳಿಗಾಗಿ ಹೋರಾಟ ಮಾಡಬೇಕಿದೆ. ಸಮಾಜದಲ್ಲಿ ಶೋಷಣೆ ನಿಲ್ಲಬೇಕಿದೆ’ ಎಂದರು.

ADVERTISEMENT

‘ಮಕ್ಕಳಿಗೆ ಶಿಕ್ಷಣ ಕೊಡಿಸುವ ಜವಾಬ್ದಾರಿ ಪೋಷಕರ ಮೇಲಿದೆ. ಜನಸಂಖ್ಯೆಗೆ ಅನುಗುಣವಾಗಿ ಸಮುದಾಯಕ್ಕೆ ಬಲ ತುಂಬವ ಕೆಲಸ ಆಗಬೇಕು. ಈ ಕಾರಣಕ್ಕಾಗಿಯೇ ನಾವು ಜಾತಿವಾರು ಸಮೀಕ್ಷೆ ಪ್ರಾರಂಭ ನಡೆಸುತ್ತಿದ್ದೇವೆ. ಮೀಸಲಾತಿಗಾಗಿ ಕಚ್ಚಾಡುವುದನ್ನು ತಪ್ಪಿಸುವ ಕಾರಣದಿಂದಲೇ ಪ್ರಮಾಣ ಹೆಚ್ಚಿಸಲಿದ್ದೇವೆ’ ಎಂದು ಹೇಳಿದರು.

ಕ್ರಮ ಕೈಗೊಳ್ಳಲಾಗುವುದು:

ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಮಾತನಾಡಿ, ‘ಯಾವುದೇ ಇಲಾಖೆಗಳಲ್ಲಿ ಬಡ್ತಿ ಮೀಸಲಾತಿ ಕೊಡುವ ಬಗ್ಗೆ ಕ್ರಮ ವಹಿಸಲು ಒಂದು ಸಮಿತಿ ಇದೆ. ಸಮಾಜ ಕಲ್ಯಾಣ ಇಲಾಖೆಯಲ್ಲಿ ವಿಚಕ್ಷಣ ಸಮಿತಿ ಎಂದಿದೆ. ಇದು ಆಗಾಗ ಪರಿಶೀಲಿಸಿ ಬಡ್ತಿ ನೀಡಲು ಕ್ರಮ ಕೈಗೊಳ್ಳುತ್ತದೆ. ಆರ್‌ಡಿಪಿಆರ್ ಸಚಿವ ಪ್ರಿಯಾಂಕ್ ಖರ್ಗೆ ಸದಾ ನೌಕರರ ಬಗ್ಗೆ ಯೋಚಿಸುತ್ತಾರೆ. ಎಸ್‌ಸಿ-ಎಸ್‌ಟಿ ವರ್ಗದ ಅಧಿಕಾರಿಗಳು, ನೌಕರರಿಗೆ ಬಡ್ತಿ ಕೊಡುವ ಬಗ್ಗೆ ಚರ್ಚಿಸುವೆ’ ಎಂದು ತಿಳಿಸಿದರು.

‘ಆರ್‌ಡಿಪಿಆರ್‌ ದೊಡ್ಡ ಇಲಾಖೆ. ಗ್ರಾಮ ಸ್ವರಾಜ್‌ ವ್ಯವಸ್ಥೆಗೆ ಬಲ ತುಂಬಬೇಕು. ಸ್ವಾವಲಂಬಿ ಬದುಕು ಸಾಗಿಸುವುದು ಮುಖ್ಯ. ಕೃಷಿ ಮತ್ತು ಕೃಷಿ ಆಧಾರಿತ ಉತ್ಪಾದನೆ ಹೆಚ್ಚಿದರೆ ಅನುಕೂಲ ಆಗುತ್ತದೆ’ ಎಂದರು.

‘ದುಡ್ಡು ಕೊಟ್ಟು ಮತ ಖರೀದಿ ಮಾಡುವವರೆ ದೊಡ್ಡ ಭಿಕ್ಷುಕರು. ನಾವು ಮತದಾನದ ಹಕ್ಕನ್ನು ಹೊಂದಿರದಿದ್ದರೆ ಪ್ರಾಣಿಗಳಂತೆ ಬದುಕಬೇಕಾಗುತ್ತಿತ್ತು. ಆ ಹಕ್ಕು ಕೊಟ್ಟ ಅಂಬೇಡ್ಕರ್‌ ಅವರನ್ನು ಸ್ಮರಿಸಬೇಕು’ ಎಂದು ಹೇಳಿದರು.

‘ನಾನು ಆರ್‌ಡಿಪಿಆರ್‌ ಸಚಿವನಾಗಿದ್ದಾಗ ವೃಂದ ಮತ್ತು ನೇಮಕಾತಿ ನಿಯಮಾವಳಿ ತಂದೆವು. ಎಲ್ಲ ಕಾರ್ಯಕ್ರಮಗಳನ್ನೂ ಗ್ರಾಮ ಪಂಚಾಯಿತಿ ಮೂಲಕ ಅನುಷ್ಠಾನಗೊಳಿಸುವ ತೀರ್ಮಾನ ಮಾಡಲಾಯಿತು. ಸಾಮಾಜಿಕ ಲೆಕ್ಕಪರಿಶೋಧನೆಗೂ ನಿರ್ಧರಿಸಲಾಯಿತು. ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮೊದಲು ಶುರು ಮಾಡಿದ್ದೂ ನನ್ನ ಕಾಲದಲ್ಲೇ’ ಎಂದರು.

ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ, ಜಿ.ಪಂ. ಸಿಇಒ ಎಸ್.ಯುಕೇಶ್‌ಕುಮಾರ್, ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ, ಮಾಜಿ ಮೇಯರ್ ಪುರುಷೋತ್ತಮ, ಚಾಮರಾಜನಗರ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ.ಚಂದ್ರು, ಜಿ.ಪಂ. ಉಪ ಕಾರ್ಯದರ್ಶಿಗಳಾದ ಎಂ.ಕೃಷ್ಣರಾಜು, ಸವಿತಾ, ಮುಖ್ಯ ಯೋಜನಾಧಿಕಾರಿ ಕೆ.ಬಿ.ಪ್ರಭುಸ್ವಾಮಿ, ಸಂಘದ ರಾಜ್ಯಾಧ್ಯಕ್ಷ ಎಂ.ಸುರೇಶ್‌ಕುಮಾರ್‌, ಪ್ರಧಾನ ಕಾರ್ಯದರ್ಶಿ ಎಚ್.ಎನ್. ಶಿವಶಂಕರ್‌ ಹಾಗೂ ಜಿಲ್ಲಾಧ್ಯಕ್ಷ ಸಿ.ಪ್ರಕಾಶ್ ಪಾಲ್ಗೊಂಡಿದ್ದರು.

ರಾಜ್ಯದಲ್ಲಿ ಯಾವ ಜಾತಿ ಜನಸಂಖ್ಯೆ ಎಷ್ಟಿದೆ ಯಾವ ರೀತಿ ಬದುಕುತ್ತಿದ್ದಾರೆ ಎಂಬುದನ್ನು ತಿಳಿಯಲು ಜಾತಿವಾರು ಸಮೀಕ್ಷೆ ಮಾಡಲಾಗುತ್ತಿದೆಯೇ ಹೊರತು ಬೇರೆ ಉದ್ದೇಶವಿಲ್ಲ
ಡಾ.ಎಚ್.ಸಿ. ಮಹದೇವಪ್ಪ ಜಿಲ್ಲಾ ಉಸ್ತುವಾರಿ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.