ADVERTISEMENT

ಪೌರತ್ವ ಪರ ಮೆರವಣಿಗೆ ನಾಳೆ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2019, 9:54 IST
Last Updated 21 ಡಿಸೆಂಬರ್ 2019, 9:54 IST

ಮೈಸೂರು: ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಮಂಡಿಸಿರುವ ಪೌರತ್ವ (ತಿದ್ದುಪಡಿ) ಕಾಯ್ದೆ ಬೆಂಬಲಿಸಿ ಮೈಸೂರು ನಗರದಲ್ಲಿ ಡಿ.22ರ ಭಾನುವಾರ ಬೃಹತ್ ಮೆರವಣಿಗೆಯನ್ನು ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಮುಖಂಡರೂ ಆಗಿರುವ ನವಜೀವನ ಸಂಸ್ಥೆಯ ಬಿ.ಪಿ.ಮಂಜುನಾಥ್ ತಿಳಿಸಿದರು.

ಹೊರದೇಶದಿಂದ ಬಂದು ಭಾರತಲ್ಲಿ ನೆಲೆಸಿರುವ ಅಕ್ರಮ ವಲಸಿಗರ ವಿರುದ್ಧ ಕ್ರಮಕ್ಕಾಗಿ ಈ ಕಾಯ್ದೆ ಜಾರಿಗೊಳಿಸಲಾಗಿದೆ. ಆದರೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಜನರಲ್ಲಿ ಗೊಂದಲ ಮೂಡಿಸುವ ಮೂಲಕ, ಇದು ಕೇವಲ ಮುಸ್ಲಿಮರಿಗೆ ಮಾತ್ರ ತೊಂದರೆ ನೀಡಲಿದೆ ಎಂದು ಅಪಪ್ರಚಾರ ನಡೆಸಿದ್ದಾರೆ. ಈ ಕಾಯ್ದೆಯಿಂದ ದೇಶದೊಳಗಿನ ಮುಸ್ಲಿಮರಿಗೆ ಯಾವುದೇ ಸಮಸ್ಯೆಯಿಲ್ಲ. ಪಾಕಿಸ್ತಾನ, ಆಪ್ಘಾನಿಸ್ತಾನ, ಬಾಂಗ್ಲಾದೇಶದಿಂದ ಬರುವ ಮುಸ್ಲಿಮರಿಗಷ್ಟೇ ಇದು ಅನ್ವಯವಾಗಲಿದೆ ಎಂದು ಶುಕ್ರವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಪೊಲೀಸರಿಂದ ಅನುಮತಿ ಪಡೆದು, ಶಾಂತಿಯುತವಾಗಿ ಮೆರವಣಿಗೆ ನಡೆಸುತ್ತೇವೆ. ಜಾತ್ಯತೀತವಾಗಿ, ಪಕ್ಷಾತೀತವಾಗಿ ಎಲ್ಲರನ್ನೂ ಆಹ್ವಾನಿಸಿದ್ದೇವೆ. ಎರಡು ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಪೌರತ್ವ ಕಾಯಿದೆ ಕುರಿತು ನಾವು ಮಾತನಾಡದಿದ್ದರೆ ತಪ್ಪು ಸಂದೇಶ ರವಾನೆಯಾಗಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ADVERTISEMENT

‘ಪೌರತ್ವ ಕಾಯ್ದೆ ಸಂಬಂಧ ಡಿ.19ರಂದು ಹಮ್ಮಿಕೊಂಡಿದ್ದ ಪ್ರತಿಭಟನೆಗೆ ತಡೆಯೊಡ್ಡಿದರೆ ಬೆಂಕಿ ಹತ್ತಿ ಉರಿಯುತ್ತಿದೆ ಎಂದಿದ್ದ ಕಾಂಗ್ರೆಸ್‌ ಶಾಸಕ ಯು.ಟಿ.ಖಾದರ್ ಹೇಳಿಕೆ ಸರಿಯಲ್ಲ. ಇದಕ್ಕೆ ಇಬ್ಬರು ಅಲ್ಪಸಂಖ್ಯಾತರು ಬಲಿಯಾಗಿದ್ದಾರೆ. ಇದು ನಿಜಕ್ಕೂ ಖಂಡನಾರ್ಹ. ಇದರ ಹೊಣೆಯನ್ನು ಅವರೇ ಹೊರಬೇಕು’ ಎಂದು ಹೇಳಿದರು.

ರಾಮು, ಭಾನುಪ್ರಕಾಶ್, ಜಮಾಲ್ ಷರೀಪ್, ಆನಂದ್, ಪ್ರಕಾಶ್ ಜೈನ್ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.