ಮೈಸೂರು: ಕೇಂದ್ರದ ಜವಳಿ ಸಚಿವಾಲಯದಿಂದ ನವದೆಹಲಿಯ ಭಾರತ್ ಮಂಟಪಂನಲ್ಲಿ ‘ಭಾರತ್ ಟೆಕ್ಸ್ ಎಕ್ಸ್ಪೋ–2024’ ಈಚೆಗೆ ನಡೆಯಿತು.
ಕೇಂದ್ರ ರೇಷ್ಮೆ ಮಂಡಳಿಯು 10 ಎಂಒಯುಗಳಿಗೆ (ಒಪ್ಪಂದ) ಸಹಿ ಹಾಕಿತು. ಅದರಲ್ಲಿ 2 ಒಪ್ಪಂದಗಳು ಮೈಸೂರಿನ ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆ (ಸಿಎಸ್ಆರ್ಟಿಐ) ಅಭಿವೃದ್ಧಿಪಡಿಸಿದ ತಾಂತ್ರಿಕತೆಗಳ ವಾಣಿಜ್ಯೀಕರಣದ ಹಕ್ಕಿಗೆ ಸಂಬಂಧಿಸಿದವಾಗಿವೆ. ನಿರ್ದೇಶಕ ಎಸ್. ಗಾಂಧಿ ದಾಸ್ ಅವರು ತಂತ್ರಜ್ಞಾನಗಳನ್ನು ಖರೀದಿಸಿದ ಕಂಪನಿಗಳಿಗೆ ಎಂಒಯುಗಳ ಪ್ರತಿಯನ್ನು ಹಸ್ತಾಂತರಿಸಿದರು.
ರೇಷ್ಮೆ ಕೃಷಿ ತ್ಯಾಜ್ಯದಿಂದ ಚಿಟಿನ್ ಅಥವಾ ಚಿಟೋಸಾನ್ ಹೊರತೆಗೆಯುವಿಕೆಯ ತಂತ್ರಜ್ಞಾನವನ್ನು ವಿಜ್ಞಾನಿ ಮಧುಸೂದನ್ ಕೆ.ಎನ್. ನೇತೃತ್ವದ ತಂಡ ಅಭಿವೃದ್ಧಿಪಡಿಸಿದೆ. ಇದನ್ನು ಚಾಮರಾಜನಗರದ ‘ಅಜೈಮಸ್ ಲೈಫ್ ಸೈನ್ಸ್ ಲಿಮಿಟೆಡ್ ಕಂಪನಿ’ ಖರೀದಿಸಿದೆ. ‘ಮಿಸ್ಟರ್ ಪ್ರೋ -ರೂಟ್ ಕೊಳೆತ ನಿರ್ವಹಣೆಗಾಗಿ ಘನ ಜೈವಿಕ ಸೂತ್ರೀಕರಣ’ವನ್ನು ವಿಜ್ಞಾನಿ ಅರುಣಕುಮಾರ್ ಜಿ.ಎಸ್. ನೇತೃತ್ವದ ತಂಡ ಅಭಿವೃದ್ಧಿಪಡಿಸಿದ್ದು, ಈ ತಂತ್ರಜ್ಞಾನವನ್ನು ಕಡಪದ ‘ರೈನ್ಬೋ ಆಗ್ರೋಟೆಕ್ ಪ್ರೈವೇಟ್ ಲಿಮಿಟೆಡ್ ಕಂಪನಿ’ಯು ಖರೀದಿಸಿದೆ ಎಂದು ಸಂಸ್ಥೆ ತಿಳಿಸಿದೆ.
ಒಪ್ಪಂದಕ್ಕೆ ಸಹಿ ಹಾಕುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಜವಳಿ ಖಾತೆ ರಾಜ್ಯ ಸಚಿವೆ ದರ್ಶನಾ ವಿಕ್ರಮ್ ಜರ್ದೋಶಿ ಭಾಗವಹಿಸಿದ್ದರು. ಕಾರ್ಯದರ್ಶಿ ರಚನಾ ಶಾ, ಜಂಟಿ ನಿರ್ದೇಶಕಿ ಪ್ರಜಕ್ತಾ ಎಲ್. ವರ್ಮಾ, ಕೇಂದ್ರ ರೇಷ್ಮೆ ಮಂಡಳಿ ಸದಸ್ಯ ಕಾರ್ಯದರ್ಶಿ ಪಿ.ಶಿವಕುಮಾರ್, ನಿರ್ದೇಶಕಿ ಮಥಿರಾ ಮೂರ್ತಿ ಎಸ್., ಸಿಎಸ್ಆರ್ಟಿಐ ವಿಜ್ಞಾನಿ ಮಧುಸೂದನ್ ಕೆ.ಎನ್. ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.