ADVERTISEMENT

ಚಾಮುಂಡಿಬೆಟ್ಟದಲ್ಲಿ ಸರ, ಮೊಬೈಲ್ ಕಳವು

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2018, 6:21 IST
Last Updated 27 ಅಕ್ಟೋಬರ್ 2018, 6:21 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮೈಸೂರು: ಎರಡು ದಿನಗಳ ಅಂತರದಲ್ಲಿ ನಗರದ ಎರಡು ಕಡೆ ಮೊಬೈಲ್‌ ಹಾಗೂ ಚಿನ್ನದ ಸರವನ್ನು ಕಸಿದು ಕಳ್ಳರು ಪರಾರಿಯಾಗಿದ್ದಾರೆ.

ಅ. 25ರಂದು ಚಾಮುಂಡಿಬೆಟ್ಟದಲ್ಲಿ ಇಬ್ಬರು ಸ್ನೇಹಿತರ ಮೇಲೆ ಹಲ್ಲೆ ನಡೆಸಿ ಚಿನ್ನದ ಸರ ಹಾಗೂ ಮೊಬಲ್‌ನ್ನು ದೋಚಿದ್ದರೆ, ಅ. 24ರಂದು ಗೋಕುಲಂನಲ್ಲಿ ನಡೆದು ಹೋಗುತ್ತಿದ್ದ ಮಹಿಳೆಯೊಬ್ಬರಿಂದ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಘಟನೆಗಳ ವಿವರ: ಶ್ರೀಕಾಂತ ಎಂಬುವವರು ಯುವತಿಯೊಬ್ಬರ ಜತೆ ಚಾಮುಂಡಿಬೆಟ್ಟದಲ್ಲಿ ಅ. 25ರ ಸಂಜೆ ತಮ್ಮ ದ್ವಿಚಕ್ರ ವಾಹನವನ್ನು ‘ವೀವ್‌ ಪಾಯಿಂಟ್’ ಬಳಿ ನಿಲ್ಲಿಸಿ, ನಂದಿ ವಿಗ್ರಹದ ಕಡೆಗೆ ಬರುವ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಬೈಕ್‌ನಲ್ಲಿ ಬಂದು ಮೂವರು ಕಳ್ಳರು ಮೊದಲು ಜಗಳ ತೆಗೆದಿದ್ದಾರೆ. ನಂತರ, ಚಾಕು ತೋರಿಸಿ ಬೆದರಿಸಿದ್ದಾರೆ. ಶ್ರೀಕಾಂತ್ ಬಳಿ ಹಣ ಇರಲಿಲ್ಲ. ಇದರಿಂದ ಕೋಪಗೊಂಡ ಅವರು ಜತೆಗಿದ್ದ ಯುವತಿಯ ಕುತ್ತಿಗೆಯಲ್ಲಿದ್ದ 14 ಗ್ರಾಂ ತೂಕದ ಚಿನ್ನದ ಸರ ಮತ್ತು ಮೊಬೈಲ್‌ನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಕೆ.ಆರ್.ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಗೋಕುಲಂನಲ್ಲಿ ಕಳ್ಳತನ: ಗೋಕುಲಂನ ಎಸ್‌ಬಿಎಂ ಎಟಿಎಂ ಬಳಿ ಅ. 24ರಂದು ಸಂಜೆ ಅಶ್ವಿನಿ ಎಂಬುವವರು ನಡೆದುಕೊಂಡು ಹೋಗುತ್ತಿದ್ದಾಗ ಅವರು ಕೈಲಿ ಹಿಡಿದಿದ್ದ ಐಫೋನ್‌ ಎಕ್ಸ್‌ ಮೊಬೈಲ್‌ನ್ನು ಬೈಕ್‌ನಲ್ಲಿ ಬಂದ ಕಳ್ಳರು ಕಸಿದು ಪರಾರಿಯಾಗಿದ್ದಾರೆ. ವಿ.ವಿ.ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಾಲಕನ ಕುತ್ತಿಗೆಯಲ್ಲಿದ್ದ ಸರ ಅಪಹರಣ:ಇಲ್ಲಿನ ರಾಮಕೃಷ್ಣನಗರದಲ್ಲಿ ಮನೆ ಮುಂದೆ ಆಟವಾಡುತ್ತಿದ್ದ ಪ್ರಣವ್ (7) ಎಂಬ ಬಾಲಕನ ಕುತ್ತಿಗೆಯಲ್ಲಿದ್ದ 30 ಗ್ರಾಂ ತೂಕದ ಚಿನ್ನದ ಸರವನ್ನು ಕಳ್ಳರು ಅಪಹರಿಸಿದ್ದಾರೆ.

ಸಂಬಂಧಿಕರ ಮನೆಯಲ್ಲಿ ನಡೆಯುತ್ತಿದ್ದ ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಳ್ಳಲು ಪೋಷಕರ ಜತೆ ಪ್ರಣವ್ ಬಂದಿದ್ದ. ಈ ವೇಳೆ ಮನೆಯಿಂದ ಹೊರಗಡೆ ಆಟವಾಡುತ್ತಿದ್ದಾಗ ವ್ಯಕ್ತಿಯೊಬ್ಬ ಸರ ಸಡಿಲವಾಗಿದೆ ಅದನ್ನು ಬಿಗಿ ಮಾಡಿಕೊಡುವುದಾಗಿ ಹೇಳಿ ಸರವನ್ನು ಬಿಚ್ಚಿಸಿಕೊಂಡು, ನಂತರ ಸರದೊಂದಿಗೆ ಪರಾರಿಯಾಗಿದ್ದಾನೆ. ಕುವೆಂಪುನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.