ಮೈಸೂರು: ‘ಬದಲಾದ ಜೀವನಶೈಲಿಯಿಂದ ಹೊಸ ರೋಗಗಳು ಜನರನ್ನು ಭಾದಿಸುತ್ತಿವೆ. ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕು. ಪರಂಪರಾಗತವಾಗಿ ಬಂದ ಆಹಾರ ಪದ್ಧತಿಯನ್ನೇ ಅನುಸರಿಸಬೇಕು’ ಎಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಸಲಹೆ ನೀಡಿದರು.
ಕೃಷ್ಣಮೂರ್ತಿಪುರಂನ ಶಾರದಾವಿಲಾಸ ಫಾರ್ಮಸಿ ಕಾಲೇಜು ಅಭಿವೃದ್ಧಿಪಡಿಸಿದ ‘ಶಾರದಾ ವಿಲಾಸ ಔಷಧಿ ವಾಟಿಕಾ’ ಉದ್ಯಾನವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.
‘ಸೇವಿಸುತ್ತಿರುವ ಆಹಾರವು ರಾಸಾಯನಿಕಯುಕ್ತವಾಗಿದೆ. ಅದರಿಂದ ರೋಗಗಳು ಬರುತ್ತಿದ್ದು, ಔಷಧಗಳನ್ನು ಹೆಚ್ಚು ಬಳಸುತ್ತಿದ್ದೇವೆ. ಆರೋಗ್ಯಯುತ ಜೀವನ ನಡೆಸುವುದೇ ಕಷ್ಟವಾಗಿದೆ. ಸಾಂಪ್ರದಾಯಿಕ ಆಹಾರ ಪದ್ಧತಿ ಜೊತೆಗೆ ಚಿಕಿತ್ಸೆಗೆ ಆಯುರ್ವೇದ ವೈದ್ಯಕೀಯ ಪದ್ಧತಿಯ ಮೊರೆ ಹೋಗಬೇಕು’ ಎಂದರು.
‘ಎಲ್ಲ ಸಸ್ಯಗಳಿಗೂ ಔಷಧ ಗುಣವಿದೆ. ಆದರೆ, ಯಾವ ಗಿಡದಲ್ಲಿ ಯಾವ ಔಷಧ ಗುಣಧರ್ಮವಿದೆ. ನಮ್ಮಲ್ಲಿರುವ ರೋಗಗಳು ಯಾವುವು. ಯಾವ ರೋಗಕ್ಕೆ ಯಾವ ಗಿಡ ಉಪಕಾರಿ ಎಂಬುದನ್ನು ತಿಳಿಯಬೇಕು’ ಎಂದು ಹೇಳಿದರು.
‘ಕೃಷಿ ಪದ್ಧತಿಯು ಆರೋಗ್ಯದಾಯಕವಾಗಿತ್ತು. ಎಲ್ಲಕ್ಕೂ ರಾಸಾಯನಿಕ ಬಳಸಲಾಗುತ್ತಿದೆ. ಸಾವಯವ ಕೃಷಿ ಅನುಸರಿಸುವಂತೆಯೇ ಆಯುರ್ವೇದವನ್ನು ಪಾಲಿಸಬೇಕು. ಅದರಿಂದ ಜೀವನ ಸುಖಮಯವಾಗಿರುತ್ತದೆ’ ಎಂದರು.
‘ಸುಪ್ರೀಂ’ ಫಾರ್ಮಾಸ್ಯುಟಿಕಲ್ಸ್ ಕಂಪನಿ ನಿರ್ದೇಶಕ ಅಮಿತ್ ಎಸ್.ರಾವ್, ‘40ಕ್ಕೂ ಹೆಚ್ಚು ದೇಶಗಳಿಗೆ ಔಷಧ ಉತ್ಪನ್ನ ರಫ್ತು ಮಾಡಲಾಗುತ್ತಿದೆ. ಪ್ರತಿ ವರ್ಷ ಶೇ 6ರಷ್ಟು ಅಭಿವೃದ್ಧಿಯನ್ನು ದೇಶದ ಔಷಧೋದ್ಯಮ ಅಭಿವೃದ್ಧಿ ಸಾಧಿಸುತ್ತಿದೆ’ ಎಂದು ಹೇಳಿದರು.
ಸಂಸ್ಥೆಯ ಗೌರವ ಕಾರ್ಯದರ್ಶಿ ಎನ್.ಚಂದ್ರಶೇಖರ, ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರ ನಿರ್ದೇಶಕ ಡಾ.ಲಕ್ಷ್ಮೀನಾರಾಯಣ ಶೆಣೈ, ಪ್ರಾಂಶುಪಾಲ ಡಾ.ಹನುಮಂತಾಚಾರ್ ಜೋಶಿ, ಎಸ್.ಎಲ್.ರಾಮಚಂದ್ರ ಇದ್ದರು.
Highlights - ಸೇವಿಸುವ ಆಹಾರ ರಾಸಾಯನಿಕಯುಕ್ತ ಸಾಂಪ್ರದಾಯಿಕ ಆಹಾರ ಪದ್ಧತಿ ಅನುಸರಿಸಿ ಎಲ್ಲ ಕಾಯಿಲೆಗೂ ಆಯುರ್ವೇದದಲ್ಲಿದೆ ಮದ್ದು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.