ADVERTISEMENT

ಸುಳ್ಳು ದಾಖಲೆ ಸೃಷ್ಟಿಸಿ ಪರಿಹಾರದ ಧನ ಗುಳುಂ

ಸತ್ತ ಭಾವನನ್ನೇ ಪತಿ ಎಂದಾಕೆ!

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2019, 19:51 IST
Last Updated 2 ಆಗಸ್ಟ್ 2019, 19:51 IST

ಮೈಸೂರು: ಮೃತಪಟ್ಟ ಭಾವನನ್ನೇ ತನ್ನ ಪತಿ ಎಂದು ಸುಳ್ಳು ದಾಖಲೆ ಸೃಷ್ಟಿಸಿ ಜೀವವಿಮೆ, ಗ್ರಾಚ್ಯೂಟಿ ಸೇರಿದಂತೆ ಪರಿಹಾರದ ಹಣವನ್ನು ಪದ್ಮಾ ಎಂಬಾಕೆ ಪಡೆದಿರುವ ಕುರಿತು ಎಚ್.ಡಿ.ಕೋಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಮೃತ ಮಹದೇವ ಅವರ ಪತ್ನಿ ಚಂದ್ರಮ್ಮ ಪ್ರಕರಣ ದಾಖಲಿಸಿದ್ದಾರೆ.

ಎಚ್.ಡಿ.ಕೋಟೆ ತಾಲ್ಲೂಕು ಕಚೇರಿಯಲ್ಲಿ ‘ಡಿ’ ಗ್ರೂಪ್ ನೌಕರರಾಗಿದ್ದ ಮಹದೇವ 2014ರಲ್ಲಿ ಮೃತಪಟ್ಟರು. ಆಗ ಇವರ ಸೋದರ ಮುರುಗನ್ ಅವರ ಪತ್ನಿ ಪದ್ಮಾ ಎಂಬುವವರು ತಾವು ಮಹದೇವ್ ಅವರ ಪತ್ನಿ ಎಂದು ಸುಳ್ಳು ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಈ ದಾಖಲೆಗಳ ಪೂರ್ವಾಪರ ವಿಚಾರಿಸದ ತಾಲ್ಲೂಕು ಕಚೇರಿಯ ಅಧಿಕಾರಿಗಳು ಮಹದೇವ್ ಅವರು ಮೃತಪಟ್ಟ ನಂತರ ಸಿಗುವಂತಹ ಸರ್ಕಾರಿ ಸೌಲಭ್ಯಗಳನ್ನು, ನಿವೃತ್ತಿ ವೇತನ, ಇದರ ಬಾಕಿ, ಜೀವ ವಿಮೆ ಹಣ ಸೇರಿ ಲಕ್ಷಾಂತರ ರೂಪಾಯಿಗಳನ್ನು ಪದ್ಮಾ ಅವರಿಗೆ ನೀಡಿದ್ದಾರೆ ಎಂದು ಮಹದೇವ ಅವರ ಪತ್ನಿ ಚಂದ್ರಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಪದ್ಮಾ, ಈಕೆಯ ಪತಿ ಮುರುಗನ್ ಹಾಗೂ ತಾಲ್ಲೂಕು ಕಚೇರಿಯಲ್ಲಿ ಇವರಿಗೆ ಸಹಾಯ ಮಾಡಿರಬಹುದಾದ ವ್ಯಕ್ತಿಗಳ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರೈಲಿಗೆ ಸಿಲುಕಿ ಸಾವು

ADVERTISEMENT

ಮೈಸೂರು: ಇಲ್ಲಿನ ಜಯನಗರ ರೈಲ್ವೆ ಬ್ರಿಡ್ಜ್ ಬಳಿ ಅಶೋಕಪುರಂ ನಿವಾಸಿ ಅರುಣ (22) ಅವರು ರೈಲಿಗೆ ಸಿಲುಕಿ ಮೃತಪಟ್ಟಿದ್ದಾರೆ. ಇವರು ಗುರುವಾರ ರಾತ್ರಿ ಮನೆ ಬಿಟ್ಟು ಹೊರಬಂದಿದ್ದಾರೆ. ಮತ್ತೆ ವಾಪಸ್ ಮನೆಗೆ ಹಿಂದಿರುಗಿಲ್ಲ. ಶುಕ್ರವಾರ ಬೆಳಿಗ್ಗೆ ಇವರ ಶವ ಪತ್ತೆಯಾಗಿದೆ. ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಸಾವು

ಮೈಸೂರು: ಎಚ್.ಡಿ.ಕೋಟೆ ತಾಲ್ಲೂಕಿನ ಅಂತರಸಂತೆ ಸಮೀಪ ಶುಕ್ರವಾರ ರಾತ್ರಿ ಸ್ಕೂಟರ್‌ ಮತ್ತು ಸರಕು ಸಾಗಣೆ ಆಟೊ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಸ್ಕೂಟರ್ ಸವಾರ ಹೊನ್ಮಮ್ಮಕಟ್ಟೆಯ ನಿವಾಸಿ ಕೃಷ್ಣ ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.